ಅಂತರ್ಜಾತಿ ವಿವಾಹವಾದ ನವದಂಪತಿಗಳ ಬರ್ಬರ ಹತ್ಯೆ
ಬೆಂಗಳೂರು, ಜು, 6 : ಅಂತರ್ಜಾತಿ ವಿವಾಹದ ನವ ದಂಪತಿಯನ್ನು ಕೊಲೆಮಾಡಿದ ಘಟನೆ ಭಾನುವಾರ ಹೆಸರಘಟ್ಟದಲ್ಲಿ ನಡೆದಿದೆ.
ಕೊಪ್ಪಳದ ಬಸವರಾಜ (28) ಮತ್ತು ಕಸ್ತೂರಿ (25) ಕೊಲೆಯಾದವರು. ಕಸ್ತೂರಿಯ ಅಣ್ಣ ಹನುಮಂತರಾಯ ದಂಪತಿಗಳನ್ನು ಕೊಲೆಮಾಡಿದ ಆರೋಪಿ . ಯೋಜಿತ ರೀತಿಯಲ್ಲಿ ಹತ್ಯೆಗೈದು ಪರಾರಿಯಾದ ಹನುಮಂತರಾಯನ ಹುಡುಕಾಟದಲ್ಲಿ ಕೊಪ್ಪಳದ ಪೊಲೀಸರು ಈಗಾಗಲೇ ಶೋಧ ಕಾರ್ಯ ಆರಂಭಿಸಿದ್ದಾರೆ. ಈ ಪ್ರಕರಣವು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.[ಅಂತರ್ಜಾತಿ ವಿವಾಹ ಸಮಾಜಕ್ಕೆ ಮಾರಕವೇ?]
ಕಸ್ತೂರಿ ಮತ್ತು ಬಸವರಾಜ ಎರಡು ತಿಂಗಳ ಹಿಂದೆಯಷ್ಟೇ ಮನೆಯವರ ಅನುಮತಿಯಿಲ್ಲದೆ ಅಂತರ್ಜಾತಿ ವಿವಾಹವಾಗಿದ್ದರು. ಹೆಸರಘಟ್ಟದಲ್ಲಿ ರಾಜಣ್ಣ ಎಂಬುವವರ ಮನೆಯಲ್ಲಿ ಬಾಡಿಗೆಗಿದ್ದು, ಜೀವನ ನಿರ್ವಹಣೆಗಾಗಿ ಬಸವರಾಜ ಟೈಲರ್ ವೃತ್ತಿ ಅವಲಂಬಿಸಿದ್ದರು. ಮನೆ ಮಾಲೀಕ ರಾಜಣ್ಣ ಭಾನುವಾರ ಬೆಳಿಗ್ಗೆ ೮ ಗಂಟೆಯ ಸುಮಾರಿಗೆ ಮನೆಯ ಅರೆತೆರೆದ ಬಾಗಿಲ ಕಂಡು ಅನುಮಾನ ಬಂದು ಮನೆಗೆ ತೆರಳಿ ನೋಡಿದಾಗ ಇಡೀ ಮನೆ ರಕ್ತಮಯವಾಗಿತ್ತು. ಇಬ್ಬರು ಬರ್ಬರವಾಗಿ ಹತ್ಯೆಗೊಳಗಾಗಿದ್ದರು.
ರಕ್ತಸಿಕ್ತ ಮನೆಕಂಡು ಬೆಚ್ಚಿಬಿದ್ದ ರಾಜಣ್ಣ ನೆರೆಹೊರೆಯವರನ್ನು ಕರೆದು, ಬಳಿಕ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಈ ಘಟನೆ ಬಗ್ಗೆ ಮನೆ ಮಾಲೀಕ ರಾಜಣ್ಣನಿಗೆ ವಿಚಾರಿಸಿದಾಗ ಶನಿವಾರ ಸಂಜೆಯಷ್ಟೇ ಬಸವರಾಜನ ಮನೆಗೆ ಒಬ್ಬ ಅಪರಿಚಿತ ವ್ಯಕ್ತಿಯೊಬ್ಬ ಬಂದಿದ್ದನು. ಅಪರಿಚಿತ ವ್ಯಕ್ತಿ ಬಗ್ಗೆ ರಾಜಣ್ಣ ಕಸ್ತೂರಿ ಬಳಿ ಕೇಳಿದಾಗ, ಆಕೆ ಹನುಮಂತರಾಯನನ್ನು ಅಣ್ಣ ಎಂದು ಪರಿಚಯ ಮಾಡಿಕೊಟ್ಟಿದ್ದಳು ಎಂಬುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ [ಕೊಪ್ಪಳ : ಯಲ್ಲಾಲಿಂಗನ ಕೊಲೆ ಪ್ರಕರಣದ ತನಿಖೆ ಸಿಐಡಿಗ]
ಕಸ್ತೂರಿ ಮತ್ತು ಬಸವರಾಜ ಶಾಲೆಯ ದಿನಗಳಲ್ಲಿ ಇಬ್ಬರು ಪರಸ್ಪರ ಮೆಚ್ಚಿಕೊಂಡಿದ್ದರು. ಬಸವರಾಜ ಕೆಲವು ವರ್ಷಗಳ ನಂತರ ಕಸ್ತೂರಿಯ ಮನೆಯಲ್ಲಿ ಮದುವೆಗಾಗಿ ಮನವೊಲಿಸುವ ಪ್ರಯತ್ನ ನಡೆಸಿದ್ದನು. ಆದರೆ ಅಂತರ್ಜಾತಿ ಎಂಬ ಕಾರಣ ನೀಡಿ ಮದುವೆಗೆ ಸಮ್ಮತಿ ನೀಡದ ಇವರು ಬಸವರಾಜನಿಗೆ ಕೊಲೆಯ ಬೆದರಿಕೆವೊಡ್ಡಿದ್ದರು. ನಂತರ ಕಸ್ತೂರಿಯನ್ನು ಹುಬ್ಬಳ್ಳಿ ಹುಡುಗನಿಗೆ ಮದುವೆ ಮಾಡಿಕೊಡಲಾಗಿತ್ತು.ಅವರಿಬ್ಬರ ನಡುವೆ ವಯಸ್ಸಿನ ಅಂತರವಿತ್ತು ಮತ್ತು ಅವರ ವೈವಾಹಿಕ ಜೀವನ ಅತೃಪ್ತಿಕರವಾಗಿತ್ತು. ಇದರಿಂದ ಬೇಸತ್ತ ಆಕೆ ಬಸವರಾಜನನ್ನು ಭೇಟಿಯಾಗಿ ಆತನೊಂದಿಗೆ ವಿವಾಹ ಮಾಡಿಕೊಂಡು ಇತ್ತೀಚೆಗಷ್ಟೇ ಹೆಸರಘಟ್ಟದಲ್ಲಿ ಬಂದು ನೆಲೆಸಿದ್ದಳು.