ಬರಿದಾದ ಬೆಂಗಳೂರು ಅಂತರ್ಜಲ, 1000ಅಡಿ ಆಳದಲ್ಲೂ ಹನಿ ನೀರಿಲ್ಲ
ಬೆಂಗಳೂರು,ಮಾರ್ಚ್,22: ಜಗತ್ತಿನ ಇತರೆ ನಗರಗಳಂತೆ ಬೆಂಗಳೂರು ಸಹ ನೀರಿನ ಸಮಸ್ಯೆಯ ಸುಳಿಗೆ ಸಿಲುಕಿದೆ. ನೀರಿನ ಮೂಲಗಳ ಸಂಖ್ಯೆ ತೀರಾ ಕಡಿಮೆಯಾಗುತ್ತಿದ್ದು ಪರ್ಯಾಯ ಜಲ ಮೂಲಗಳತ್ತ ದೃಷ್ಟಿ ಹರಿಸುವಂತಾಗಿದ್ದು, ಇದೀಗ ರಾಜ್ಯ ಸರಕಾರವು ಶರಾವತಿಯಿಂದ ನೀರು ತರುವ ಬಗ್ಗೆ ಆಲೋಚನೆ ಆರಂಭಿಸಿದೆ.
ಬೆಂಗಳೂರಿನ ಅಂತರ್ಜಲ ಅಂತರ್ದಾನವಾಗಿದೆ, 1000 ಅಡಿ ಆಳಕ್ಕಿಳಿದರೂ ಜಲ ದರ್ಶನ ದುರ್ಲಭವೆನಿಸಿದೆ. ನಾಗಾಲೋಟದಲ್ಲಿರುವ ಬೆಂಗಳೂರಿನಲ್ಲಿ ಪ್ರತಿಕ್ಷಣವೂ ನೀರಿನ ಬೇಡಿಕೆ ತೀವ್ರವಾಗಿ ಏರುತ್ತಿದ್ದು, ಬೆಂಗಳೂರಿನ ನೀರಿನ ಸಮಸ್ಯೆ ಯಾವ ದಿಸೆಯಲ್ಲಿ ಸಾಗುತ್ತಿದೆ ಮತ್ತು ಯಾವ ಹಂತವನ್ನು ಮುಟ್ಟಲಿದೆ ಎಂಬುದು ಪ್ರತಿಯೊಬ್ಬರ ಪ್ರಶ್ನೆಯಾಗಿದೆ.[ಕುಡಿಯುವ ನೀರಿಗಾಗಿ 3ನೇ ಮಹಾಯುದ್ಧ ಬೇಕೆ?]
ಪ್ರತಿಯೊಬ್ಬರ ಮನಸ್ಸಿನಲ್ಲಿ ಎದ್ದಿರುವ ಪ್ರಶ್ನೆಗೆ ನಗರದ ಪ್ರತಿಷ್ಠಿತ ಕಾಲೇಜಿನ ದ ನ್ಯೂ ಹಾರಿಜಾನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನ ವಿದ್ಯಾರ್ಥಿಗಳು ಜಲ ಸಂರಕ್ಷಣೆ ಮಾಡುವುದೇ ನಮ್ಮ ಸಮಸ್ಯೆಗಿರುವ ಪರಿಹಾರ ಎಂದು ಉತ್ತರಿಸಿದ್ದಾರೆ.
ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಹನಿ ಹನಿ ನೀರನ್ನು ಸಂರಕ್ಷಿಸುವ ಪ್ರತಿಜ್ಞೆ ಕೈಗೊಂಡರು ಹಾಗೂ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು, ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಂಡಿದ್ದರು. ಇಲ್ಲಿದೆ ನೋಡಿ ಅವರ ಜಲ ಪ್ರೀತಿ...
ವಿಶ್ವ ಜಲಸಂರಕ್ಷಣೆ ದಿನ ವಿದ್ಯಾರ್ಥಿಗಳ ವಾಗ್ದಾನ
ವಿಶ್ವ ಜಲಸಂರಕ್ಷಣೆ ದಿನ ವಿದ್ಯಾರ್ಥಿಗಳು ಜಲ ಸಂರಕ್ಷಣೆ ಪ್ರತಿಜ್ಞೆ ಕೈಗೊಂಡರು. ನೀರಿನ ಒಂದು ಹನಿ ದೊಡ್ಡ ಅಲೆಯನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ವಿದ್ಯಾರ್ಥಿಗಳು ಆರಂಭಿಸಿದ ಈ ಜಲ ಸಂರಕ್ಷಣೆ ಆಂದೋಲನ ಇಡೀ ನಗರದಲ್ಲಿ ಹೊಸ ಜಾಗೃತಿ ಮೂಡಿಸಿದೆ. ಜಲಸಂರಕ್ಷಣೆ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ಮಾಡಿದ ನೃತ್ಯ ಜನರಲ್ಲಿ ಕೊಂಚ ಅರಿವು ಮೂಡಿಸಿತು.
ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಅಭಿಪ್ರಾಯ
ಪ್ರಾಂಶುಪಾಲ ಡಾ. ಮಂಜುನಾಥ ಮಾತನಾಡಿ, ಜಲ ಸಂರಕ್ಷಣೆ, ಮಳೆ ನೀರು ಸಂಗ್ರಹ, ಹಾಗೂ ಜಲ ಸಂರಕ್ಷಿತ ಬಡಾವಣೆಗಳ ಅಭಿವದ್ಧಿ ದಿಸೆಯಲ್ಲಿ ಎನ್ಎಚ್ಎಸ್ ಇಯು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ತನ್ಮೂಲಕ ಬೆಂಗಳೂರು ನಾಗರೀಕರಲ್ಲಿ ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವಲ್ಲಿ ತನ್ನ ಪಾಲು ಸಲ್ಲಿಸಿದೆ. ಈ ವಿಶ್ವ ಜಲ ಸಂರಕ್ಷಣೆಯ ದಿನದಂದು ನೀರು ನಮ್ಮ ಆರೋಗ್ಯ ಹಾಗೂ ಉತ್ತಮ ಜೀವನದ ಅವಿಭಾಜ್ಯ ಎಂಬುದನ್ನು ಪ್ರತಿಯೊಬ್ಬರು ಮನಗಾಣೋಣ ಎಂದರು.
ಛಾಯಾಚಿತ್ರ ಪ್ರದರ್ಶನ
ವಿಶ್ವ ಜಲ ಸಂರಕ್ಷಣೆ ದಿನಾಚರಣೆ ಅಂಗವಾಗಿ ನೀರು ಹಾಗೂ ಕೆಲಸಕ್ಕೆ ಸಂಬಂಧಿಸಿ ಛಾಯಾಚಿತ್ರ ಪ್ರದರ್ಶನ ನಡೆಯಿತು. ಇದಲ್ಲದೆ, ಜಲ ಸಂರಕ್ಷಣೆ ಮಹತ್ವ ಸಾರುವ ಪೊಸ್ಟರ್ ಪ್ರದರ್ಶನ, ಫೇಸ್ ಪೆಂಟಿಂಗ್, ಮೈಮ್ ಪ್ರದರ್ಶನ, ಬೀದಿ ನಾಟಕಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.
ನೀರಿನ ಬಗ್ಗೆ ನೀವು ಅರಿತುಕೊಳ್ಳಿರಿ
10 ರಲ್ಲಿ ಒಬ್ಬರು ಶುದ್ದ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ವಿಶ್ವಾದ್ಯಂತ ಸುಮಾರು 125 ದಶಲಕ್ಷ ಗಂಟೆಗಳನ್ನು ನೀರು ಸಂಗ್ರಹಕ್ಕಾಗಿ ಮಹಿಳೆಯರು ಹಾಗೂ ಮಕ್ಕಳು ವ್ಯಯ ಮಾಡುತ್ತಾರೆ. ಜಲ ಸಂಬಂಧಿ ಕಾಯಿಲೆಗಳಿಂದ ಪ್ರತಿ 90 ಸೆಕೆಂಡಿಗೆ ಒಂದು ಮಗು ಸಾವನ್ನಪ್ಪುತ್ತದೆ.
2025ರ ವೇಳೆಗೆ ನೀರಿನ ಕೊರತೆಗೆ ಎಷ್ಟು ಜನ ತುತ್ತಾಗುವರು?
2025 ವೇಳೆಗೆ ವಿಶ್ವದ 1.8 ಶತಕೋಟಿ ಜನರು ನೀರಿನ ಕೊರತೆ ಸಮಸ್ಯೆಯಿಂದ ಬಳಲಿದ್ದಾರೆ. ಕೈಗಾರಿಕೆ ದುರ್ಬಳಕೆ ದೆಸೆಯಿಂದಾಗಿ ಚೀನಾ ದೇಶದ ಶೇ. 55ರಷ್ಟು ನದಿಗಳು ಕೇವಲ ಕಳೆದ 20 ವರ್ಷಗಳಲ್ಲಿ ಕಣ್ಮರೆಯಾಗಿವೆ. 2020-2050ರ ಅವಧಿಯಲ್ಲಿ ಉತ್ಪಾದನಾ ವಲಯವೊಂದರಲ್ಲೇ ನೀರಿನ ಬೇಡಿಕೆ ಶೇ. 400 ಪಟ್ಟು ಹೆಚ್ಚಾಗಲಿದೆ.