ನೆರಳು, ಬೆಂಗಳೂರು ಮರಗಳ ಉತ್ಸವಕ್ಕೆ ಬನ್ನಿ
ಬೆಂಗಳೂರು, ಫೆ. 7 : ಫೆಬ್ರವರಿ 6ರಂದು ರಥಸಪ್ತಮಿಗೆ ಸೂರ್ಯ ತನ್ನ ಪಥ ಬದಲಿಸಿದ್ದಾನೆ. ಬೇಸಿಗೆ ಮೆಲ್ಲಗೆ ಕಾಲಿರಿಸಿದೆ. ಕಲ್ಲಂಗಡಿ, ಕರಬೂಜ ಹಣ್ಣುಗಳು ಕೊಳ್ಳುಗರನ್ನು ಆಹ್ವಾನಿಸುತ್ತಿವೆ. ಥತ್ ಎಂಥಾ ಬಿಸಿಲಪ್ಪ ಅಂತ ಗೊಣಗಿಕೊಳ್ಳುತ್ತ ಅಡ್ಡಾಡುವವರು ನೆರಳಿನಲ್ಲಿ ದಣಿವಾರಿಸಿಕೊಳ್ಳೋಣ ಎಂದು ಮರದ ಕೆಳಗೆ ನಿಂತರೆ, ಮರಗಳೆಲ್ಲ ಎಲೆ ಉದುರಿಸಿಕೊಂಡು ಬೋಳು ಬೋಳು!
ಇನ್ನೊಂದಿಷ್ಟು ವರ್ಷ ಕಾಯಿರಿ, ಬೇಸಿಗೆಯಲ್ಲಿ ಈ ಬೋಳು ಮರಗಳು ಕೂಡ ಕಾಣಿಸುವುದಿಲ್ಲ. ಇರುವ ಮರಗಳನ್ನೂ ಸರಕಾರದವರು ಉಳಿಯಲು ಬಿಡುವುದಿಲ್ಲ. "ಅಯ್ಯೋ ನಮ್ ಕಾಲದಲ್ಲಿ ಎಷ್ಟು ಚೆನ್ನಾಗಿತ್ತು. ರಸ್ತೆಯ ಎರಡೂ ಬದಿಗೂ ಸಾಲೋಸಾಲು ಮರಗಳು. ಈಗ ನೋಡಿ ಏನಾಗಿದೆ. ಎಂಥ ಸ್ಥಿತಿ ಬಂತಪ್ಪಾ" ಅಂತ ಹಲುಬಿಕೊಂಡು ಓಡಾಡುವ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ.
ಈ ಮರಗಳೇ ಹಾಗೆ, ನೆನಪಿನ ಗಣಿಯನ್ನು ಬಗೆಯುತ್ತವೆ. ನಗರಕ್ಕೆ ಉಸಿರನ್ನು ತುಂಬುತ್ತಿದ್ದ ಅವು ಮನುಜರೊಂದಿಗೆ ವಿಶ್ಲೇಷಿಸಲು ಬಾರದಂತಹ ಸಂಬಂಧವನ್ನು ಬೆಸೆಯುತ್ತವೆ. ಅವನ್ನು ಕಳೆದುಕೊಂಡಾಗ ಆಗುವ ನೋವು ಪ್ರಕೃತಿ ಪ್ರೇಮಿಗಳಿಗೆ ಮಾತ್ರ ಅರ್ಥವಾಗುತ್ತವೆ. ಇಂತಹ ಮರಗಳು ಮಾತಾಡುತ್ತವೆ ಅಂತಾರೆ! ಅವುಗಳ ಮನದಾಳದ ನೋವು ಕೇಳಲು ಇಷ್ಟವಿದ್ದರೆ ಫೆ.8 ಮತ್ತು 9ರಂದು ಕಬ್ಬನ್ ಪಾರ್ಕಿಗೆ ಬನ್ನಿ.
ಮರಳನ್ನು ಉಳಿಸುವ ಬಗ್ಗೆ ಮಾತ್ರವಲ್ಲ, ಗಿಡಮರಗಳನ್ನು ಪ್ರೀತಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮರಗಳನ್ನು ಪ್ರೀತಿಸುವ ಬೆಂಗಳೂರಿನ ಉತ್ಸಾಹಿಗಳ ಗುಂಪು ಲಾಭರಹಿತ ಸಂಸ್ಥೆ ಕಟ್ಟಿಕೊಂಡಿದ್ದು, 'ನೆರಳು' ಎಂಬ ಉತ್ಸವವನ್ನು ಹಮ್ಮಿಕೊಂಡಿದೆ. ಈ ಎರಡು ದಿನಗಳಂದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. [ಕಾರ್ಯಕ್ರಮಗಳ ವಿವರ]
ಕಬ್ಬನ್ ಪಾರ್ಕಿನಲ್ಲಿ ಬಾಲ ಭವನದಲ್ಲಿ ಎರಡು ದಿನಗಳ ಕಾಲ ಬೆಳಗಿನಿಂದ ಸಂಜೆಯವರೆಗೆ ಛಾಯಾಚಿತ್ರ, ಚಲನಚಿತ್ರ ಪ್ರದರ್ಶನ, ಶಿಬಿರ, ಕಥೆ ಹೇಳುವುದು, ಸಂವಾದ, ನಾಟಕ, ಕಲಾ ಪ್ರದರ್ಶನ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಇದರಲ್ಲಿ ಬೆಂಗಳೂರಿನ ಪ್ರಕೃತಿ ಪ್ರೇಮಿಗಳು ಮಾತ್ರವಲ್ಲ ಬಿಳಿಗಿರಿ ರಂಗನ ಬೆಟ್ಟದ ಸೋಲಿಗ ಸಮುದಾಯದವರು ಕೂಡ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ನಮಗೆ ನೆರಳು ನೀಡಿ, ಉಸಿರನ್ನು ತುಂಬುವ ಮರಗಳ ಬಗ್ಗೆ ಮಕ್ಕಳಲ್ಲಿ ಅರಿವು, ಪ್ರೀತಿ ಮತ್ತು ಮಾಹಿತಿ ತುಂಬಲು ಇದಕ್ಕಿಂತ ಇನ್ನೊಂದು ಕಾರ್ಯಕ್ರಮ ಬೇಕೆ? ಮಕ್ಕಳನ್ನು ಕರೆತನ್ನಿ ಹಾಗೆಯೆ ಸ್ನೇಹಿತರಿಗೂ ಇದರ ಬಗ್ಗೆ ತಿಳಿಸಿ. ಬೆಂಗಳೂರು ತನ್ನ ಗತಕಾಲದ ಹಸಿರುವ ವೈಭವವನ್ನು ಕಳೆದುಕೊಳ್ಳುತ್ತಿದೆ ಎಂದು ನಿಮಗೆ ಅನಿಸಿದಲ್ಲಿ 'ನೆರಳು' ಉತ್ಸವದಲ್ಲಿ ಭಾಗವಹಿಸಬಹುದು.
ಹೆಚ್ಚಿನ
ವಿವರಗಳಿಗಾಗಿ
:
ಸಂಗೀತಾ
ಕಡೂರ:
9886812598
ಈಮೇಲ್
:
[email protected]