ಪೇಟಾದಿಂದ ಬನ್ನೇರುಘಟ್ಟದಲ್ಲಿ ಶೀಘ್ರ ಆನೆಗಳ ಅಭಯಾರಣ್ಯ
ಬೆಂಗಳೂರು, ಜ. 29: ಕಳೆದ ವರ್ಷ ಕರ್ನಾಟಕದಲ್ಲಿ ಆನೆಗಳ ಹಾವಳಿ ಅತಿಯಾಗಿ ವರದಿಯಾಗಿವೆ. ಹಲವು ಗ್ರಾಮಗಳಲ್ಲಿ ಇಂದಿಗೂ ಆನೆಗಳು ಬಂದು ಬೆಳೆಗಳನ್ನು ತುಳಿದು ಹೋಗುತ್ತಿವೆ. ಆದ್ದರಿಂದ ಕರ್ನಾಟಕದಲ್ಲಿ ಬೆಂಗಳೂರು ಸಮೀಪದಲ್ಲಿಯೇ ಆನೆಗಳಿಗೆ ಅಭಯಾರಣ್ಯ ನಿರ್ಮಿಸಲು ಯೋಜನೆ ಸಿದ್ಧವಾಗಿದೆ.
ಅಂತಾರಾಷ್ಟ್ರೀಯ ಪ್ರಾಣಿ ದಯಾ ಸಂಘಟನೆ ಪೇಟಾ ಹಾಗೂ ಕರ್ನಾಟಕದ ಬನ್ನೇರುಘಟ್ಟ ಜೈವಿಕ ಪಾರ್ಕ್ ಜಂಟಿಯಾಗಿ ಆನೆಗಳಿಗೆ ಅಭಯಾರಣ್ಯ ನಿರ್ಮಿಸಲು ಮುಂದಾಗಿವೆ. ಹೀಗಾದಲ್ಲಿ ಇದು ದೇಶದ ಪ್ರಥಮ ಆನೆಗಳ ರಕ್ಷಿತಾರಣ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. [ಪಿರಿಯಾಪಟ್ಟಣದಲ್ಲಿ ಗಜ ಕಾಳಗ]
ಬನ್ನೇರುಘಟ್ಟದ ಜೈವಿಕ ಪಾರ್ಕ್ಗೆ ಹೊಂದಿಕೊಂಡಿರುವ 49.5 ಹೆಕ್ಟೇರ್ ಪ್ರದೇಶದಲ್ಲಿ ಆನೆಗಳ ಅಭಯಾರಣ್ಯ ಸ್ಥಾಪನೆಯಾಗಲಿದೆ. ಈ ಪ್ರದೇಶದಲ್ಲಿ ಹಲವು ಕೆರೆ, ತೊರೆಗಳು ಹಾಗೂ ಸಾಕಷ್ಟು ಸ್ಥಳಾವಕಾಶ ಇರುವ ಕಾರಣ ಆನೆಗಳು ಇಲ್ಲಿ ಸ್ವಚ್ಛಂದವಾಗಿ ತಿರುಗಬಹುದು. [ಕಾಡಾನೆ ದಾಳಿಗೆ ಮಹಿಳೆಯರು ಬಲಿ]
ಈ ಸ್ಥಳದಲ್ಲಿ ವಿದ್ಯುತ್ ಬೇಲಿ ಹಾಗೂ ಸ್ಟೀಲ್ ಪೈಪ್ಗಳ ಲಾಯ ನಿರ್ಮಾಣ ಪ್ರಗತಿಯಲ್ಲಿದೆ. ಇಲ್ಲಿನ ಕೆಲಸಗಾರರಿಗೆ ಆನೆಗಳ ಮನಸ್ಥಿತಿ ಕುರಿತು ತರಬೇತಿ ನೀಡಲಾಗುವುದು. ಪುಂಡಾಟ ನಡೆಸುವ ಆನೆಗಳನ್ನು ನಿಯಂತ್ರಿಸಲು ಹಳೆಯ ದೈಹಿಕ ಶಿಕ್ಷೆ ಪದ್ಧತಿ ಬದಲು ಧನಾತ್ಮಕ ಬಲವರ್ಧನೆ ತಂತ್ರಗಳನ್ನು ತಿಳಿಸಿಕೊಡಲಾಗುವುದು ಎಂದು ಪೇಟಾ ಅಧಿಕಾರಿಗಳು ತಿಳಿಸಿದ್ದಾರೆ.