ಏಪ್ರಿಲ್ ನಲ್ಲಿ ನಡೆಯಲಿದೆ ಗುಂಡ್ಲುಪೇಟೆ-ನಂಜನಗೂಡು ಉಪ ಚುನಾವಣೆ
ಏಪ್ರಿಲ್ ಮೊದಲ ವಾರದಲ್ಲಿ ಬಹುನಿರೀಕ್ಷಿತ ನಂಜನಗೂಡು- ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯಲಿದೆ ಎಂದು ನಂಬಲಾರ್ಹ ಮೂಲಗಳು 'ಒನ್ ಇಂಡಿಯಾ'ಗೆ ಮಾಹಿತಿ ನೀಡಿವೆ.
ಮೈಸೂರು, ಮಾರ್ಚ್ 6: ಏಪ್ರಿಲ್ ಮೊದಲ ವಾರದಲ್ಲಿ ಬಹುನಿರೀಕ್ಷಿತ ನಂಜನಗೂಡು- ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯಲಿದೆ ಎಂದು ನಂಬಲಾರ್ಹ ಮೂಲಗಳು 'ಒನ್ ಇಂಡಿಯಾ'ಗೆ ಮಾಹಿತಿ ನೀಡಿವೆ.
ಪಂಚ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಹಾಗೂ ರಾಜ್ಯದ ಮುಂಗಡ ಪತ್ರ ಮಂಡನೆ ಯಾದ ಕೂಡಲೇ ಉಪಚುನಾವಣೆಯ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ಉನ್ನತ ಮೂಲಗಳು ಬಹಿರಂಗಪಡಿಸಿವೆ. ಬಹುತೇಕ ಮಾರ್ಚ್15ರ ನಂತರ ಚುನಾವಣಾ ದಿನಾಂಕ ಪ್ರಕಟವಾಗಲಿದೆ.[ಗರಿಗೇದರಿದ ನಂಜನಗೂಡು ಉಪಚುನಾವಣಾ ರಣಕಣ]
ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು ಏಪ್ರಿಲ್ ಮೊದಲ ವಾರದ ವೇಳೆಗೆ ಮುಗಿಯಲಿದೆ. ಹೀಗಾಗಿ ಚುನಾವಣೆ ಘೋಷಣೆಯಾಗುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ಸರಕಾರ ಆಯೋಗಕ್ಕೆ ಮಾಹಿತಿ ನೀಡಿದೆ. ಇದರಿಂದ ಏಪ್ರಿಲ್ ಮೊದಲ ವಾರದಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಲಾಗಿದೆ.
ರೆಡಿಯಾಗುತ್ತಿದೆ ಚುನಾವಣಾ ಕಣ
ಎರಡೂ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಮೂರೂ ರಾಜಕೀಯ ಪಕ್ಷಗಳಿಂದ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಅದರಲ್ಲೂ ನಂಜನಗೂಡು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮತ್ತು ಬಿಜೆಪಿಗೆ ಅದರಲ್ಲೂ ವೈಯುಕ್ತಕವಾಗಿ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇಲ್ಲಿ ಪಕ್ಷಗಳ ನಡುವಿನ ಹೋರಾಟ ಎನ್ನುವುದಕ್ಕಿಂತ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶ್ರೀನಿವಾಸ್ ಪ್ರಸಾದ್ ಅವರ ನಡುವಿನ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದೆ.
ಕಳಲೆ-ಶ್ರೀನಿವಾಸ್ ಪ್ರಸಾದ್ ಫೈಟ್
ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿ. ಶ್ರೀನಿವಾಸ ಪ್ರಸಾದ್ ಅವರು ಬಿಜೆಪಿ ಸೇರ್ಪಡೆಯಾಗಿ ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ. ಜಾತ್ಯಾತೀತ ಜನತಾ ದಳದಿಂದ ಕಾಂಗ್ರೆಸ್ಗೆ ಸೇರ್ಪಡೆಯಾಗಿರುವ ಕಳಲೆ ಕೇಶವ ಮೂರ್ತಿ ಅವರು ಕಾಂಗ್ರೆಸ್ನ ಹುರಿಯಾಳಾಗಲಿದ್ದಾರೆ.[ಗುಂಡ್ಲುಪೇಟೆಯಲ್ಲಿ ಬಿಜಯಂಗೈಯಲು ಗೀತಾಗೆ ದಿಗ್ವಿಜಯ್ ಆಹ್ವಾನ]
ಗುಂಡ್ಲುಪೇಟೆಯಲ್ಲಿ ಗೀತಾ ಹವಾ
ಸಹಕಾರ ಸಚಿವರಾಗಿದ್ದ ಎಚ್.ಎಸ್.ಮಹದೇವ ಪ್ರಸಾದ್ ಅವರ ಹಠಾತ್ ನಿಧನದಿಂದ ತೆರವಾಗಿರುವ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಅವರ ಪತ್ನಿ ಡಾ.ಎಂ.ಸಿ.ಮೋಹನಕುಮಾರಿ (ಗೀತಾ ಮಹದೇವ ಪ್ರಸಾದ್) ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಅವರು ಈಗಾಗಲೇ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಮತ ಯಾಚಿಸುತ್ತಿದ್ದಾರೆ.[ನಂಜನಗೂಡು ಉ.ಚು: 'ತೆನೆ' ಬಿಟ್ಟು 'ಕೈ' ಹಿಡಿದ ಕಳಲೆ ಕೇಶವಮೂರ್ತಿ]
ಬಿಜೆಪಿ ಅಭ್ಯರ್ಥಿ ನಿರಂಜನ್ಕುಮಾರ್ ಅವರೂ ಕ್ಷೇತ್ರವನ್ನು ಸುತ್ತುತ್ತಿದ್ದಾರೆ. ಜೆಡಿಎಸ್ ಇನ್ನೂ ಅಧಿಕೃತವಾಗಿ ಅಭ್ಯರ್ಥಿ ಹೆಸರನ್ನು ಘೋಷಿಸಿಲ್ಲ.
ಜೆಡಿಎಸ್ ನಲ್ಲಿ ಇನ್ನೂ ಘೋಷಣೆಯಾಗದ ಅಭ್ಯರ್ಥಿ
ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ದಳವು ತನ್ನ ಅಭ್ಯರ್ಥಿ ಘೋಷಣೆ ಮಾಡಿಲ್ಲದಿದ್ದರೂ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಅವರು ತಾಲ್ಲೂಕಿನಾದ್ಯಂತ ಈಗಾಗಲೇ ಸಂಚರಿಸುತ್ತಿದ್ದಾರೆ. ಅಲ್ಲದೆ, ಮುಖಂಡ ಬೆಳವಾಡಿ ಶಿವಕುಮಾರ್ ಅವರ ಹೆಸರೂ ಸಹ ಕೇಳಿಬರುತ್ತಿದೆ. ಗುಂಡ್ಲುಪೇಟೆಯಲ್ಲೂ ಯಾರ ಹೆಸರೂ ಅಂತಿಮಗೊಂಡಿಲ್ಲ.
ಚುನಾವಣಾ ಪ್ರಚಾರಕ್ಕೆ ರೆಡಿ
ಮಾರ್ಚ್12ರಂದು ನಂಜನಗೂಡಿಗೆ ಬಿಎಸ್ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ. ಅಂದು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೊಡನೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಮಹತ್ವದ ಮಾತುಕತೆಯನ್ನು ಸಿದ್ದರಾಮಯ್ಯ ಹಮ್ಮಿಕೊಂಡಿದ್ದಾರೆ. ಅಂದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರೂ ಆಗಮಿಸುತ್ತಿದ್ದು, ಉಪಚುನಾವಣೆಯ ಪ್ರಚಾರ ಕಾರ್ಯವನ್ನು ನಡೆಸಲಿದ್ದಾರೆ.
ರಂಗೇರಿದ ಚುನಾವಣಾ ಕಣ
ಉಪಚುನಾವಣಾ ಕಣ ಈಗಲೇ ರಂಗೇರಿದೆ. ಇತ್ತೀಚೆಗೆ ಯಡಿಯೂರಪ್ಪ ಸಿಡಿಸಿದ ಡೈರಿ ಬಾಂಬ್ ಬಿಜೆಪಿಗೆ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಲಿದೆ. ಅದೇ ರೀತಿ ಅನಂತಕುಮಾರ್, ಯಡಿಯೂರಪ್ಪ ನಡೆಸಿರುವ ಸಂಭಾಷಣೆಯ ಸಿ.ಡಿ, ಲೆಹರ್ ಸಿಂಗ್ ಡೈರಿಯನ್ನು ಕಾಂಗ್ರೆಸ್ ಚುನಾವಣೆಯಲ್ಲಿ ಬಳಸಿಕೊಳ್ಳಲಿದೆ.
ವಿಧಾನಸಭಾ ಚುನಾವಣೆಯ ದಿಕ್ಸೂಚಿ
ಒಟ್ಟಾರೆ ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಈ ಉಪಚುನಾವಣೆ ಅತ್ಯಂತ ಪ್ರಮುಖವಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗಿದೆ. ಸದ್ಯ ಎಲ್ಲಾ ಪಕ್ಷಗಳೂ ದಿನಾಂಕ ಪ್ರಕಟಣೆಗೆ ಕಾಯುತ್ತಿವೆ. ಸರ್ಕಾರ ಈ ಎರಡೂ ಕ್ಷೇತ್ರಗಳಿಗೆ ಸಾಕಷ್ಟು ಯೋಜನೆಗಳನ್ನು ಮಂಜೂರು ಮಾಡಿದ್ದು, ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಈಗಲೇ ಪ್ರಾರಂಭಿಸಿದೆ.