ಶಂಕರ್ ನಾಗ್ ಕನಸಿನ ನಂದಿ ಬೆಟ್ಟ ರೋಪ್ ವೇ ಸಾಕಾರಕ್ಕೆ ಮುಂದಾದ ಸರಕಾರ
ಚಿಕ್ಕಬಳ್ಳಾಪುರದ ಪ್ರಸಿದ್ಧ ಪ್ರವಾಸಿ ತಾಣ ನಂದಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ. ಇದೀಗ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಕೆಲವೇ ತಿಂಗಳಲ್ಲಿ ಯೋಜನೆಗೆ ಚಾಲನೆ ದೊರೆಯಲಿದೆ
ಬೆಂಗಳೂರು, ಮೇ 10: ಬೆಂಗಳೂರಿಗೆ ಕೇವಲ 60 ಕಿಲೋಮೀಟರ್ ದೂರವಿರುವ ನಂದಿಬೆಟ್ಟದಲ್ಲಿ ಕೇಬಲ್ ಕಾರ್ ಆರಂಭವಾಗಲಿದೆ. ಬೆಟ್ಟದ ಕೆಳ ಭಾಗದಿಂದ ಮೇಲಕ್ಕೆ ಕೇಬಲ್ ಕಾರಿನಲ್ಲಿ ತೆರಳಬಹುದಾಗಿದೆ. ಇದು ಬಹಳ ಕಾಲದಿಂದ ಬಾಕಿ ಉಳಿದಿದ್ದ ಯೋಜನೆ. ನಂದಿ ಬೆಟ್ಟದ ಸೊಬಗು ಅನುಭವಿಸಲು ಇದರಿಂದ ಅನುಕೂಲವಾಗಲಿದೆ.[ಶಂಕರ್ ನಾಗ್ ಕನಸು ಕಂಡಿದ್ದು ನಮಗಾಗಿ]
ನಂದಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯು ಮಂಗಳವಾರ ಟೆಂಡರ್ ಕರೆದು, ಗುತ್ತಿಗೆದಾರರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಈ ಯೋಜನೆಗೆ ಸಂಬಂಧಪಟ್ಟಂಥ ಕೆಲಸಗಳು ಇನ್ನು ಕೆಲ ತಿಂಗಳಲ್ಲೇ ಅರಂಭವಾಗಲಿದೆ. ಟೆಂಡರ್ ಪ್ರಸ್ತಾವವನ್ನು ಜೂನ್ 12ಕ್ಕೆ ತೆರೆಯುತ್ತೇವೆ. ಆ ನಂತರ ಯೋಜನೆಯ ಕನ್ಸಲ್ಟೆನ್ಸಿಯನ್ನು ಅಂತಿಮಗೊಳಿಸುವುದಾಗಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.[ನಂದಿ ಬೆಟ್ಟದಲ್ಲಿ ಗಿಡ ನೆಟ್ಟ ಯುನೈಟೆಡ್ ವೇ ಬೆಂಗಳೂರು]
ಪ್ರವಾಸೋದ್ಯಮ ನೀಡಿದ ಮಾಹಿತಿ ಪ್ರಕಾರ, ಎದುರುಬದರಾಗಿ ಎರಡು ರೋಪ್ ವೇ ನಿರ್ಮಿಸಲಾಗುವುದು. ಇಪ್ಪತ್ತು ಮಂದಿಯನ್ನು ಏಕಕಾಲಕ್ಕೆ ಕರೆದುಕೊಂಡು ಹೋಗಬಹುದು. ಸಮುದ್ರ ಮಟ್ಟದಿಂದ 1848 ಎತ್ತರದಲ್ಲಿ ಸಾಗುವುದೇ ವಿಶಿಷ್ಟ ಅನುಭವ. ಇನ್ನು ಬೆಟ್ಟಕ್ಕೆ ಸಾಗುವ ರಸ್ತೆಯಲ್ಲಿ ಸಂಚಾರ ದಟ್ಟಣೆ ಕೂಡ ಕಡಿಮೆಯಾಗಲಿದೆ.(ನಂದಿ ಬೆಟ್ಟದ ಫೋಟೋಗಳು: ಡಿಜಿ ಮಲ್ಲಿಕಾರ್ಜುನ)
ಮೂವತ್ತು ಕೋಟಿ ಯೋಜನೆ
ನಂದಿಬೆಟ್ಟದ ಕೆಳಭಾಗದಲ್ಲಿರುವ ಕುದುವತಿ ಗ್ರಾಮದಿಂದ ಯೋಗನಂದೀಶ್ವರ ದೇವಸ್ಥಾನದವರೆಗೆ 1.6 ಕಿಲೋಮೀಟರ್ ದೂರಕ್ಕೆ ರೋಪ್ ವೇ ನಿರ್ಮಾಣವಾಗಲಿದೆ. ಟಿಪ್ಪು ಡ್ರಾಪ್ ನಿಂದ ದೇವಸ್ಥಾನವು ಕೆಲವೇ ಮೀಟರ್ ನಷ್ಟು ದೂರವಿದೆ. ಅಂದಹಾಗೆ, ಈ ರೋಪ್ ವೇ ನಿರ್ಮಾಣಕ್ಕೆ ಅಂದಾಜು ಮೂವತ್ತು ಕೋಟಿ ರುಪಾಯಿ ಖರ್ಚಾಗಬಹುದು ಎಂದುಕೊಳ್ಳಲಾಗಿದೆ.
ಒಂಬತ್ತು ಎಕರೆ ಜಮೀನು ಕೂಡ ವಶಕ್ಕೆ
ಕಾರಹಳ್ಳಿ ಕ್ರಾಸ್ ನಿಂದ ಕೇವಲ 500 ಮೀಟರ್ ದೂರದಲ್ಲಿದೆ ಕುದುವತಿ ಗ್ರಾಮ. ಪ್ರವಾಸಿಗರು ಇಲ್ಲಿಗೆ ತಲುಪಲು ಸಹ ಅನುಕೂಲವಿದೆ. ವಾಹನ ನಿಲುಗಡೆ ವ್ಯವಸ್ಥೆ, ಬುಕಿಂಗ್ ಕೌಂಟರ್ ಇತರ ಅನುಕೂಲಗಳನ್ನು ಗ್ರಾಮದಲ್ಲಿ ಮಾಡಲಾಗುತ್ತದೆ. ಈ ಕಾರಣಕ್ಕಾಗಿ ಒಂಬತ್ತು ಎಕರೆ ಜಮೀನು ಕೂಡ ವಶಕ್ಕೆ ಪಡೆಯಲಾಗಿದೆ.
ಮಧುಗಿರಿಯಲ್ಲೂ ರೋಪ್ ವೇ ಯೋಜನೆ
ಅಂದಹಾಗೆ ಇದೇ ರೀತಿಯ ರೋಪ್ ವೇ ಯೋಜನೆಯನ್ನು ತುಮಕೂರು ಜಿಲ್ಲೆಯ ಮಧುಗಿರಿ ಹಾಗೂ ಯಾದಗಿರಿ ಜಿಲ್ಲೆಯ ಯಾದಗಿರಿ ಬೆಟ್ಟದಲ್ಲೂ ಕೈಗೆತ್ತಿಕೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಈ ಮೂರು ಬೆಟ್ಟಗಳಲ್ಲಿ ರೋಪ್ ವೇ ನಿರ್ಮಿಸಲು ಕನ್ಸಲ್ಟೆಂಟ್ಸ್ ನಿಂದ ಟೆಂಡರ್ ಆಹ್ವಾನಿಸಿದ್ದೇವೆ ಎಂದು ತಿಳಿಸಿದ್ದಾರೆ.
ಶಂಕರ್ ನಾಗ್ ಕಂಡಿದ್ದ ಕನಸು
ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣದ ಕನಸು ಮೊದಲಿಗೆ ಕಂಡವರು ನಟ ಶಂಕರ್ ನಾಗ್. 1980ರ ದಶಕದಲ್ಲೇ ಸರಕಾರದ ಜತೆಗೆ ಮಾತುಕತೆ ನಡೆಸಿ, ತಮ್ಮ ಕನಸನ್ನು ಹಂಚಿಕೊಂಡಿದ್ದರು. ಶಂಕರ್ ಪತ್ನಿ ಅರುಂಧತಿ ಅವರು ಈ ಯೋಜನೆಯ ನಕ್ಷೆ ಕೂಡ ರೂಪಿಸಿದ್ದರು. ಬೆಟ್ಟದ ಮೇಲೊಂದು ಅಮ್ಯೂಸ್ ಮೆಂಟ್ ಪಾರ್ಕ್ ಆರಂಭಿಸುವ ಯೋಜನೆ ಹಾಕಿಕೊಂಡಿದ್ದರು.
ತೆರೆಮರೆಗೆ ಸರಿದಿದ್ದ ಯೋಜನೆ
1990ರ ಸೆಪ್ಟೆಂಬರ್ ನಲ್ಲಿ ಶಂಕರ್ ನಾಗ್ ಮೃತಪಟ್ಟ ನಂತರ ರೋಪ್ ವೇ ಯೋಜನೆ ತೆರೆಮರೆಗೆ ಸರಿದಿತ್ತು. 2004ರಲ್ಲಿ ತೋಟಗಾರಿಕೆ ಇಲಾಖೆ ಮತ್ತೆ ಈ ಯೋಜನೆಗೆ ಸಂಬಂಧಿಸಿದ ಹಾಗೆ ಸರ್ವೇ ಕಾರ್ಯ ನಡೆಸಿತು. ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಮತ್ತೆ ನನೆಗುದಿಗೆ ಬಿದ್ದಿತು. ಆ ನಂತರ ಯೋಜನೆಯನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಾಯಿತು.
ವರದಿ ಸಲ್ಲಿಸಲಾಗಿತ್ತು
ಚಿಕ್ಕಬಳ್ಳಾಪುರ ಪ್ರವಾಸೋದ್ಯಮ ಕೌನ್ಸಿಲ್ ನಿಂದ ರೋಪ್ ವೇ ಯೋಜನೆಯ ಸಾಧ್ಯಾಸಾಧ್ಯತೆಯ ಬಗ್ಗೆ ವರದಿಯೊಂದನ್ನು ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಲಾಯಿತು. ಇದೀಗ ಯೋಜನೆಯ ಅನುಷ್ಠಾನಕ್ಕೆ ಟೆಂಡರ್ ಕರೆಯಲಾಗಿದೆ.