ಕೆ.ಆರ್.ಮಾರ್ಕೆಟ್ನಿಂದ ಚಿಕ್ಕಪೇಟೆಗೆ ಬಂದ ಕೃಷ್ಣಾ!
ಬೆಂಗಳೂರು, ಸೆ. 01 : ಸುಮಾರು 18 ತಿಂಗಳ ಹಿಂದೆ ಕೆ.ಆರ್.ಮಾರುಕಟ್ಟೆಯಿಂದ ಸುರಂಗ ಕೊರೆಯುತ್ತಾ ಹೊರಟ್ಟಿದ್ದ 'ಕೃಷ್ಣಾ' ಸೋಮವಾರ ಸಂಜೆ ಚಿಕ್ಕಪೇಟೆಗೆ ಬಂದು ತಲುಪಿದ್ದಾನೆ. ಒಟ್ಟು 4 ಯಂತ್ರಗಳು ನಮ್ಮ ಮೆಟ್ರೋ ಸುರಂಗ ಕೊರೆಯುತ್ತಿದ್ದು 2016ರ ಫೆಬ್ರವರಿ ಅಂತ್ಯಕ್ಕೆ ಎಲ್ಲವೂ ಮೆಜೆಸ್ಟಿಕ್ಗೆ ಬಂದು ಸೇರಲಿವೆ.
ನಮ್ಮ ಮೆಟ್ರೋ ಯೋಜನೆಯ ಕೆ.ಆರ್.ಮಾರುಕಟ್ಟೆ-ಚಿಕ್ಕಪೇಟೆ ಸುರಂಗ ಮಾರ್ಗ ಪೂರ್ಣಗೊಂಡಿದೆ. ವಾಣಿ ವಿಲಾಸ್ ಆಸ್ಪತ್ರೆ ಮುಂಭಾಗದಿಂದ ಹೊರಟಿದ್ದ 'ಕೃಷ್ಣಾ ಟಿಬಿಎಂ' ಸೋಮವಾರ ಸಂಜೆ 5 ಗಂಟೆ 5 ನಿಮಿಷಕ್ಕೆ ಚಿಕ್ಕಪೇಟೆ ನಿಲ್ದಾಣ ತಲುಪಿತು. [ಸೆಪ್ಟೆಂಬರ್ ನಿಂದ ಮಾಗಡಿ ರಸ್ತೆಯಲ್ಲಿ ಮೆಟ್ರೋ ಸಂಚಾರ]
'ಈ ಮಾರ್ಗದಲ್ಲಿ ಹಳೆಯ ಕಟ್ಟಡಗಳು, ಬಂಡೆ ಕಾಣಿಸಿಕೊಂಡಿದ್ದರಿಂದ ಸುರಂಗ ಮಾರ್ಗ ಕೊರೆಯುವ ಕೆಲಸ ವಿಳಂಬವಾಯಿತು. 2016ರ ಫೆಬ್ರವರಿ ಅಂತ್ಯದ ವೇಳೆಗೆ ಎಲ್ಲಾ ಮಾರ್ಗದ ಸುರಂಗ ಕೊರೆಯುವ ಕಾಮಗಾರಿ ಪೂರ್ಣಗೊಳ್ಳಲಿದೆ' ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಹೇಳಿದ್ದಾರೆ. [ನಮ್ಮ ಮೆಟ್ರೋ ಸುರಂಗದಲ್ಲಿ ಸಂಚರಿಸಲು ಸಿದ್ಧರಾಗಿ]
ನಾಲ್ಕು ಸುರಂಗ ನಿರ್ಮಾಣ : ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ 'ಮಾರ್ಗರೀಟಾ', ಚಿಕ್ಕಪೇಟೆಯಿಂದ ಮೆಜೆಸ್ಟಿಕ್ ಕಡೆಗೆ 'ಕಾವೇರಿ', 'ಕೃಷ್ಣಾ' ಒಂದೂವರೆ ತಿಂಗಳ ಬಳಿಕ ಚಿಕ್ಕಪೇಟೆಯಿಂದ ಮೆಜೆಸ್ಟಿಕ್ ಕಡೆಗೆ ಹೊರಡಲಿದೆ. ಕೆಟ್ಟು ನಿಂತಿರುವ 'ಗೋದಾವರಿ' ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಿಸಲಿದ್ದು ಎಲ್ಲಾ ಯಂತ್ರಗಳು 2016ರಲ್ಲಿ ಮೆಜೆಸ್ಟಿಕ್ಗೆ ಬಂದು ಸೇರಲಿವೆ.
ಡಿಸೆಂಬರ್ನಲ್ಲಿ ಸಂಚಾರ : 'ಬೈಯಪ್ಪನಹಳ್ಳಿ-ನಾಯಂಡನಹಳ್ಳಿ ನಡುವಿನ ಪೂರ್ವ-ಪಶ್ಚಿಮ ಕಾರಿಡಾರ್ ಮಾರ್ಗದಲ್ಲಿ 2015ರ ಡಿಸೆಂಬರ್ ವೇಳೆಗೆ ಸಂಚಾರ ಆರಂಭವಾಗಲಿದೆ. ಪುಟ್ಟೇನಹಳ್ಳಿ-ಜಯನಗರ ಮಾರ್ಗದಲ್ಲಿ 2016ರ ಮಾರ್ಚ್ನಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ' ಎಂದು ಪ್ರದೀಪ್ ಸಿಂಗ್ ಖರೋಲಾ ಹೇಳಿದ್ದಾರೆ. [ಪಿಟಿಐ ಚಿತ್ರಗಳು]