ಸಂಪಿಗೆ ರಸ್ತೆಯಿಂದ ಶುರುವಾಯ್ತು ಯಲಚೇನ ಹಳ್ಳಿ ಮೆಟ್ರೊ ಪಯಣ
ಬಹು ನಿರೀಕ್ಷೆಯ ನಮ್ಮ ಮೆಟ್ರೋ ಸಂಪರ್ಕದ ಹಸಿರು ಮಾರ್ಗವು ಜೂನ್ 17, 2017ರಂದು ಉದ್ಘಾಟನೆಗೊಂಡಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಈ ಮಾರ್ಗವನ್ನು ಉದ್ಘಾಟಿಸಿದರು.
ಬೆಂಗಳೂರು, ಜೂನ್ 17: ಬೆಂಗಳೂರು ಜನತೆ ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ನಮ್ಮ ಮೆಟ್ರೋನ ಹಸಿರು ಮಾರ್ಗದ ಉದ್ಘಾಟನೆ ಶನಿವಾರ (ಜೂನ್ 17)ರಂದು ಸಂಜೆ 6:20ರ ಸುಮಾರಿಗೆ ಉದ್ಘಾಟನೆಗೊಂಡಿತು.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, 24.2 ಕಿ.ಮೀ. ದೂರದ ಈ ಮಹತ್ತರ ಮಾರ್ಗವನ್ನು ಜನತೆಯ ಸೇವೆಗೆ ಸಮರ್ಪಿಸಿದರು. ಈ ಮೊದಲು ನಾಗಸಂದ್ರದಿಂದ ಕೇವಲ ಸಂಪಿಗೆ ರಸ್ತೆಯವರೆಗೆ (ಮಂತ್ರಿ ಸ್ಕ್ವೇರ್) ಮಾತ್ರ ಇದ್ದ ಮೆಟ್ರೋ ಮಾರ್ಗ, ಸಂಪಿಗೆ ರಸ್ತೆಯಿಂದ ಆರಂಭವಾಗುತ್ತದೆ.
ನಮ್ಮ ಮೆಟ್ರೋ ಹಸಿರು ಲೈನ್ ರಾಷ್ಟ್ರಪತಿಯಿಂದ ಲೋಕಾರ್ಪಣೆ
ಆನಂತರ, ಮೆಜೆಸ್ಟಿಕ್, ಚಿಕ್ಕಪೇಟೆ, ಕೆ.ಆರ್. ಮಾರುಕಟ್ಟೆ, ನ್ಯಾಷನಲ್ ಕಾಲೇಜು, ಲಾಲ್ ಬಾಗ್, ಸೌಂತ್ ಎಂಡ್ ಸರ್ಕಲ್, ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಬನಶಂಕರಿ, ಜಯಪ್ರಕಾಶ ನಗರ - ಮಾರ್ಗವಾಗಿ ಯಲಚೇನ ಹಳ್ಳಿ ತಲುಪುತ್ತದೆ.
ಶನಿವಾರ ಸಂಜೆ ಉದ್ಘಾಟನೆಯ ಅಂಗವಾಗಿ ಆಯೋಜಿಸಲಾಗಿದ್ದ ಪ್ರಯಾಣ, ಹೊಸದಾಗಿ ನಿರ್ಮಾಣಗೊಂಡಿರುವ ಸಂಪಿಗೆ ರಸ್ತೆ ನಿಲ್ದಾಣದಿಂದ ಯಲಚೇನ ಹಳ್ಳಿಯವರೆಗೆ ಸಾಗಿತು. ಈ ಎರಡು ನಿಲ್ದಾಣಗಳ ನಡುವಿನ ಸುಮಾರು 12.2 ಕಿ.ಮೀ. ಪ್ರಯಾಣ ಕೇವಲ 22 ನಿಮಿಷಗಳಲ್ಲಿ ಪೂರ್ಣಗೊಂಡಿತು.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಮೆಟ್ರೋ ಸಂಪರ್ಕ: ಸಿದ್ದರಾಮಯ್ಯ
ಸಂಪಿಗೆ ರಸ್ತೆಯ ನಿಲ್ದಾಣದಲ್ಲಿನ ತಯಾರಿ, ನಿಲ್ದಾಣಕ್ಕೆ ಮಾಡಲಾಗಿದ್ದ ಅಲಂಕಾರ, ಅಲ್ಲಿ ನೆರೆದಿದ್ದ ಜನರ ಪ್ರತಿಕ್ರಿಯೆಗಳ ಒಂದು ಸಣ್ಣ ಝಲಕ್ ಇಲ್ಲಿ ನಿಮಗಾಗಿ...
(ಚಿತ್ರಗಳು: ಚೇತನ್ ಓ.ಆರ್)
ಭಾರತದ ಅತೀದೊಡ್ಡ ಮೆಟ್ರೋ ನಿಲ್ದಾಣ, ನಮ್ಮ ಕೆಂಪೇಗೌಡ ಮೆಟ್ರೋ ನಿಲ್ದಾಣ!
ನಿಮ್ಮ ಗಮನಕ್ಕೆ:
ನಾಗಸಂದ್ರದಿಂದ ಯಲಚೇನ ಹಳ್ಳಿವರೆಗೆ ಒಟ್ಟು ದೂರ - 24.2 ಕಿ.ಮೀ.
- ಮಾರ್ಗದಲ್ಲಿ ಬರುವ ನಿಲ್ದಾಣಗಳ ಸಂಖ್ಯೆ -24
- ಮಾರ್ಗದಲ್ಲಿ ಬರುವ ಸುರಂಗ - 1
- ಸುರಂಗದ ಉದ್ದ - 8.82 ಕಿ.ಮೀ.
- ದರಗಳು ಗರಿಷ್ಠ 55 ರು. (ನಿಲ್ದಾಣವಾರು ದರ ಪ್ರಕಟಗೊಂಡಿಲ್ಲ)
ಸುಸಜ್ಜಿತ ನಿಲ್ದಾಣ
ಇತರ ಮೆಟ್ರೋ ಸ್ಟೇಷನ್ ಗಳಂತೆಯೇ ಸುಸಜ್ಜಿತವಾಗಿ ನಿರ್ಮಿಸಲಾಗಿರುವ ನಿಲ್ದಾಣ ಸಂಪಿಗೆ ರಸ್ತೆಯ ನಿಲ್ದಾಣ. ಅಚ್ಚುಕಟ್ಟಾದ ವ್ಯವಸ್ಥೆ, ಉದ್ಘಾಟನಾ ದಿನವಾಗಿದ್ದರಿಂದ ಯಾವುದೇ ಜನರ ಗದ್ದಲ, ಗೌಜುಗಳಿಲ್ಲದ ಕಾರಣದಿಂದಾಗಿ ಇನ್ನೂ ಸ್ನಿಗ್ಧವಾಗಿ ಕಾಣುತ್ತಿತ್ತು ಈ ಸ್ಟೇಷನ್.
ಎಲ್ಲೆಲ್ಲೂ ಕೂಲ್ ಕೂಲ್
ಎಲ್ಲೆಲ್ಲೂ ಅಚ್ಚುಕಟ್ಟುತನ ಮನೆ ಮಾಡಿತ್ತು. ಮೆಟ್ರೋ ಸಿಬ್ಬಂದಿ ಕೂಡ ಬಿಡುವಾಗಿ ಕುಳಿತು ಹರಟೆ ಹೊಡೆಯಬಲ್ಲ ಒಂದು ಕೊನೆಯ ಸಂಜೆಯನ್ನು ಅಕ್ಷರಶಃ ಎಂಜಾಯ್ ಮಾಡುತ್ತಿದ್ದರು. ಹೊರಗೆ ಮೋಡ ಮುಸುಕಿದ್ದರಿಂದಲೋ ಏನೋ ಮೆಟ್ರೋ ಸ್ಟೇಷನ್ ಒಳಗಡೆ ತಂಪಾಗಿತ್ತು.
ಸಾಧಾರಣವಾದ ಶೃಂಗಾರ
ಸಾಮಾನ್ಯವಾಗಿ ಉದ್ಘಾಟನೆ ವೇಳೆ ಎಲ್ಲಾ ಮೆಟ್ರೋ ಸ್ಟೇಷನ್ ಗಳಲ್ಲಿ ಮಾಡುವಂತೆ ಬಲೂನ್ ಗಳ ಅಲಂಕಾರ ಕೂಡಿತ್ತು. ಆದರೆ, ಇದಾಗಲೇ ಯೂಸ್ಡ್ ಮೆಟ್ರೋ ಸ್ಟೇಷನ್ ಆಗಿದ್ದರಿಂದಾಗಿ ಏನೋ, ಅಲಂಕಾರದಲ್ಲಿ ಅಂಥಾ ವಿಶೇಷತೆಯೇನೂ ಇರಲಿಲ್ಲ. ಬಲೂನುಗಳನ್ನು ಬಿಟ್ಟರೆ ಮಿಕ್ಯಾವ ಹೆಚ್ಚುವರಿ ಅಲಂಕಾರಗಳು ಇರಲಿಲ್ಲ.
ತಿಂಡಿ-ಜ್ಯೂಸ್ ನೀಡಿಕೆ
ಉದ್ಘಾಟನೆಯನ್ನು ವರದಿ ಮಾಡಲು ಬಂದಿದ್ದ ವಿಶೇಷ ಅತಿಥಿಗಳಿಗೆ, ಮಾಧ್ಯಮ ಮಂದಿಗೆ ಸ್ಟೇಷನ್ ನಲ್ಲಿ ತಿಂಡಿ ಹಾಗೂ ಜ್ಯೂಸ್ ವ್ಯವಸ್ಥೆ ಮಾಡಲಾಗಿತ್ತು. ಮೆಟ್ರೋ ರೈಲು ನಿಗಮದ ಸಿಬ್ಬಂದಿಯೂ ಹಾಜರಿದ್ದರು.
ಹಸಿರು ನಿಶಾನೆಗೆ ಕ್ಷಣಗಣನೆ
ರೈಲಿಗೆ ಮಾಡಲಾಗಿದ್ದ ಪುಷ್ಪಾಲಂಕಾರ ಮನಸ್ಸಿಗೆ ಮುದ ನೀಡುವಂತಿತ್ತು. ಸ್ಟೇಷನ್ ನ ಸಿಬ್ಬಂದಿಯಂತೂ ಎಚ್ಚರಿಕೆಯಿಂದ ವಿಧಾನಸೌಧದಲ್ಲಿ ರಾಷ್ಟ್ರಪತಿ ಉದ್ಘಾಟನೆ ರೈಲ್ವೇ ಲೈನ್ ಅನ್ನು ಉದ್ಘಾಟಿಸುವ ಕ್ಷಣಗಣನೆಯಲ್ಲಿ ತೊಡಗಿದ್ದರು.
ವಿಡಿಯೊ ಪ್ರೊಜೆಕ್ಷನ್
ರೈಲ್ವೇ ನಿಲ್ದಾಣದಲ್ಲಿ ವಿಧಾನಸೌಧದಲ್ಲಿ ನಡೆಯುತ್ತಿದ್ದ ಉದ್ಘಾಟನಾ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಾಗುತ್ತಿತ್ತು. ಅದಕ್ಕೆ ಪೂರಕವಾಗಿ ವಿಡಿಯೋ ಪ್ರೊಜೆಕ್ಷನ್ ಕೂಡ ವ್ಯವಸ್ಥೆಗೊಳಿಸಲಾಗಿತ್ತು.
ಅತ್ತಿತ್ತ ಅಲುಗಾಡದ ಚಾಲಕ ಸಿಬ್ಬಂದಿ
ಮೆಟ್ರೋ ಚಾಲಕ ಸಿಬ್ಬಂದಿಯಂತೂ ವಿಧಾನಸೌಧದಲ್ಲಿ ನಡೆಯುತ್ತಿದ್ದ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರದ ಮೇಲೆ ದೃಷ್ಟಿ ನೆಟ್ಟಿದ್ದರು.
ಚಪ್ಪಾಳೆಯ ಸುರಿಮಳೆ
ಅಂತೂ ಇಂತೂ ಸಂಜೆ 6:20ರ ಸುಮಾರಿಗೆ ರೈಲಿಗೆ ಹಸಿರು ನಿಶಾನೆ ಸಿಕ್ಕಿತು. ಸ್ಟೇಷನ್ ನಲ್ಲಿದ್ದ ಸಿಬ್ಬಂದಿಯೆಲ್ಲಾ ಹರ್ಷೋದ್ಗಾರದಿಂದ ಚಪ್ಪಾಳೆ ತಟ್ಟಿದರು. ರೈಲು ಹೊರಟಿತು.
ಯಲಚೇನ ಹಳ್ಳಿ ಕಡೆಗೆ ಪ್ರಯಾಣ
ಯಲಚೇನ ಹಳ್ಳಿಯ ಕಡೆಗೆ ಮುಖಮಾಡಿ ಚಲಿಸಿದ ರೈಲು ಕೆಲವೇ ಕ್ಷಣಗಳಲ್ಲಿ ನಿಲ್ದಾಣದಿಂದ ಮರೆಯಾಯಿತು. ಸ್ಟೇಷನ್ನಿನ ಇಡೀ ಚಟುವಟಿಕೆಯನ್ನು ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಉದ್ಘಾಟನಾ ಸಮಾರಂಭಕ್ಕೆ ನೇರ ಪ್ರಸಾರ ನೀಡಲಾಗಿತ್ತು.