ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿ ಶೀಘ್ರ ಮೆಟ್ರೋ ರೈಲು
ನಮ್ಮ ಮೆಟ್ರೋ ಉತ್ತರ-ದಕ್ಷಿಣ ಕಾರಿಡಾರ್ ನ ಸಂಚಾರ ಮುಂದಿನ ಮಾರ್ಚ್ ವೇಳೆಗೆ ಸಂಚಾರಕ್ಕೆ ಮುಕ್ತವಾಗುವ ಸಾದ್ಯತೆ ಇದೆ. ಭಾನುವಾರದಿಂದ ಸುರಂಗ ಮಾರ್ಗದ ಪ್ರಾಯೋಗಿಸ ಸಂಚಾರ ಆರಂಭವಾಗಿದೆ.
ಬೆಂಗಳೂರು, ನವೆಂಬರ್, 20: ವಿಪರೀತವಾಗಿ ಬೆಳೆಯುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರವಾಗಿ ಆರಂಭಗೊಂಡಿರುವ ಬೆಂಗಳೂರು ಮೆಟ್ರೋ ರೈಲು ಮೊದಲ ಹಂತದ ಕಾಮಗಾರಿ ಅಂತಿಮ ಘಟ್ಟ ತಲುಪಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಪ್ರಾಯೋಗಿಕ ಸಂಚಾರಕ್ಕೆ ಭಾನುವಾರ ಹಸಿರು ನಿಶಾನೆ ತೋರಿಸಿದ್ದು. ಇನ್ನು ಕೆಲವೇ ದಿನಗಳಲ್ಲಿ ನಾಲ್ಕು ದಿಕ್ಕುಗಳಲ್ಲೂ ಮೆಟ್ರೋ ರೈಲು ಪ್ರಯಾಣಿಕರ ಓಡಾಟಕ್ಕೆ ಮುಕ್ತವಾಗಲಿವೆ.
ಸಂಪಿಗೆ ರಸ್ತೆ ನಿಲ್ದಾಣದಿಂದ ನ್ಯಾಷನಲ್ ಕಾಲೇಜು ನಿಲ್ದಾಣದ ವರೆಗಿನ ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಲು ವಿಳಂಬವಾದ ಹಿನ್ನೆಲೆಯಲ್ಲಿ ಈ ಮಾರ್ಗದ ಸಂಚಾರಕ್ಕೆ ಹೆಚ್ಚು ವಿಳಂಬವಾಯಿತು.
ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಕೊನೆಗೂ ಮೊದಲ ಹಂತದ 42.30 ಕಿ.ಮೀ. ಉದ್ದದ ರೈಲು ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ.
ಮುಂದಿನ ಫೆಬ್ರುವರಿ ತಿಂಗಳಲ್ಲಿ ಸಂಪಿಗೆ ರಸ್ತೆ ನಿಲ್ದಾಣದಿಂದ ಯಲಚೇನಹಳ್ಳಿ ನಿಲ್ದಾಣದವರೆಗಿನ ಮಾರ್ಗಕ್ಕೆ ರೈಲ್ವೆ ಸುರಕ್ಷತಾ ಆಯೋಗದಿಂದ ಅನುಮತಿ ದೊರೆಯುವ ಸಾಧ್ಯತೆ ಇದೆ.
ಮಾರ್ಚ್ ತಿಂಗಳ ಆರಂಭದ ಹೊತ್ತಿಗೆ ಈ ಮಾರ್ಗ ಸಂಪೂರ್ಣ ಸಂಚಾರಕ್ಕೆ ಮುಕ್ತವಾಗಲಿದೆ. ಇದರಿಂದ 2 ಗಂಟೆಗೂ ಹೆಚ್ಚು ಕಾಲ ರಸ್ತೆ ಮೂಲಕ ಪ್ರಯಾಣಿಸುವ ದೂರವನ್ನು ಕೇವಲ 50 ನಿಮಿಷದಲ್ಲಿ ಕ್ರಮಿಸಬಹುದಾಗಿದೆ.
ಈಗಾಗಲೇ ಪೂರ್ವ ಪಶ್ಚಿಮ ಕಾರಿಡಾರ್ ನಲ್ಲಿ ಮೆಟ್ರೋ ಸಂಚಾರಕ್ಕೆ ಮುಕ್ತವಾಗಿದ್ದು, 18.1 ಕಿ.ಮೀ ದೂರವನ್ನು ಕೇವಲ 40 ನಿಮಿಷದಲ್ಲಿ ಮೆಟ್ರೋ ಕ್ರಮಿಸುತ್ತಿದೆ.
ಇನ್ನು ಉತ್ತರ ದಕ್ಷಿಣ ಕಾರಿಡಾರ್ ಮರ್ಗವೂ ಸಹ ಸಂಚಾರಕ್ಕೆ ಮುಕ್ತವಾದಲ್ಲಿ ಸಾರ್ವಜನಿಕರ ಸಂಚಾರ ದಟ್ಟಣೆ ಸಮಸ್ಯೆಗೆ ಫುಲ್ ಸ್ಟಾಪ್ ಬೀಳಲಿದೆ.