ಬೆಂಗಳೂರಿನ ಹೆಮ್ಮೆಯ ಹಸಿರು ಲೈನಿಗೆ ಕೆಂಪು ಹಾಸು
ಬೆಂಗಳೂರು, ಜೂನ್ 17 : ನಗರದ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ಬೆಂಗಳೂರಿಗರ ಕನಸಿನ ಕೂಸಾದ ನಮ್ಮ ಮೆಟ್ರೋದ, ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿಯವರೆಗಿನ ಗ್ರೀನ್ ಲೈನ್ ಶನಿವಾರ ಲೋಕಾರ್ಪಣೆಗೊಂಡಿದೆ.
ಇನ್ನು ಮುಂದೆ ನಗರದ ನಾಲ್ಕು ದಿಕ್ಕಿನೆಡೆಗೆ ಸಂಚರಿಸುವವರು ಮತ್ತು ಪರ್ಪಲ್ ಲೈನ್ ನಿಂದ ಗ್ರೀನ್ ಲೈನ್ ಗೆ ಬದಲಾಯಿಸಕೊಳ್ಳಬಯಸುವವರು ಕೆಂಪೇಗೌಡ ಇಂಟರ್ ಚೇಂಜ್ ನಲ್ಲಿ ಮೆಟ್ರೋ ಬದಲಾಯಿಸಿಕೊಂಡು ಕಡಿಮೆ ಸಮಯದಲ್ಲಿ ಸಂಚರಿಸಬಹುದು.
ಅಲ್ಲದೆ, ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ದೇಶದಲ್ಲೇ ಅತೀದೊಡ್ಡ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾರ್ಗ ಫಲಕ, ಅತ್ಯಾಧುನಿಕ ಎಸ್ಕಲೇಟರ್, ಲಿಫ್ಟ್, ಮಾಹಿತಿ ಕೇಂದ್ರ, ಟಿಕೆಟ್ ದರಗಳಿರುವ ಫಲಕಗಳಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಲಕಲಕ ಹೊಳೆಯುತ್ತಿದೆ.
Read More : ಸಂಪಿಗೆ ರಸ್ತೆಯಿಂದ ಶುರುವಾಯ್ತು ಯಲಚೇನ ಹಳ್ಳಿ ಮೆಟ್ರೊ ಪಯಣ
ಸಂಪಿಗೆ ರಸ್ತೆಯ ಮಂತ್ರಿ ಸ್ಕ್ವೇರ್ ನಿಂದ ಹಿಡಿದು, ಕೆಂಪೇಗೌಡ, ಚಿಕ್ಕಪೇಟೆ, ಕೃಷ್ಣ ರಾಜ ಮಾರುಕಟ್ಟೆ, ನ್ಯಾಷನಲ್ ಕಾಲೇಜು, ಲಾಲ್ ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಬನಶಂಕರಿ, ಜಯಪ್ರಕಾಶ ನಗರ, ಪುಟ್ಟೇನಹಳ್ಳಿ ಮೂಲಕ ಯಲಚೇನಹಳ್ಳಿಯನ್ನು ಮೆಟ್ರೋ ತಲುಪಲಿದೆ.
ಜೂನ್ 18ರ ಬೆಳಗಿನಿಂದ ಫೇಸ್ 1 ಸಾರ್ವಜನಿಕರಿಗೆ ತೆರೆದುಕೊಳ್ಳಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರ ಪ್ರಮುಖರ ಸಮ್ಮುಖದಲ್ಲಿ ರಾಷ್ಟ್ರಪತಿ ಡಾ. ಪ್ರಣಬ್ ಮುಖರ್ಜಿಯವರು ಶನಿವಾರ ಲೋಕಾರ್ಪಣೆ ಮಾಡಿರುವ ನಮ್ಮ ಮೆಟ್ರೋದ ಹಸಿರು ಲೈನ್ ಅನ್ನು ಬಳಸಬಹುದಾಗಿದೆ.
ತಂತ್ರಜ್ಞಾನದ ಅತ್ಯುತ್ತಮ ಬಳಕೆಯಾಗಬೇಕು
ನಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸಾರಿಗೆ ವ್ಯವಸ್ಥೆಯನ್ನು ಒದಗಿಸುವುದು ಸರ್ಕಾರಗಳಿಗೆ ಅತ್ಯಂತ ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಸಂಪನ್ಮೂಲ ಹೊಂದಿಸುವುದರೊಂದಿಗೆ ಲಭ್ಯ ತಂತ್ರಜ್ಞಾನದ ಅತ್ಯುತ್ತಮ ಬಳಕೆಯನ್ನು ಮಾಡಿಕೊಳ್ಳುವುದು ಅತೀ ಅಗತ್ಯ - ಪ್ರಣಬ್ ಮುಖರ್ಜಿ.
ಮೆಟ್ರೋ ಹಸಿರು ಲೈನ್ ನ ಬಗ್ಗೆ ಇಲ್ಲಿದೆ ಮಾಹಿತಿ...
ಅಂತಾರಾಷ್ಟ್ರೀಯ ಬಾಂಧವ್ಯ ವೃದ್ಧಿ
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಯೋಜನೆಯ ಮೊದಲ ಹಂತದ 43 ಕಿ.ಮಿ. ಮಾರ್ಗವನ್ನು ಹಲವಾರು ಅಡೆತಡೆಗಳ ನಡುವೆಯೂ 10 ವರ್ಷದೊಳಗೆ ಪೂರ್ಣಗೊಳಿಸಿದೆ. ಮುಂದಿನ ಹಂತದ 72 ಕಿ.ಮಿ. ಮಾರ್ಗದ ನಿರ್ಮಾಣದಲ್ಲಿ ಈ ಅನುಭವ ಸಹಕಾರಿಯಾಗಲಿದೆ. ಇದಲ್ಲದೆ ಇಂತಹ ಯೋಜನೆಗಳ ಮೂಲಕ ಅಂತಾರಾಷ್ಟ್ರೀಯ ಸಹಕಾರ, ಬಾಂಧವ್ಯ ವೃದ್ಧಿಯಾಗಲಿದೆ - ಪ್ರಣಬ್ ಮುಖರ್ಜಿ.
ಪ್ರಯಾಣದ ಸಮಯ ಅರ್ಧಕ್ಕಿಂತಲೂ ಕಡಿಮೆಯಾಗಿದೆ
ನಮ್ಮ ಮೆಟ್ರೋದ ಪೂರ್ವ ಪಶ್ಚಿಮ ಮಾರ್ಗ ಪ್ರಯಾಣದ ಅವಧಿಯು 53 ನಿಮಿಷಗಳಾಗಿದ್ದು ಉತ್ತರ ದಕ್ಷಿಣ ಪ್ರಯಾಣದ ಅವಧಿಯು 45 ನಿಮಿಷಗಳಾಗಿದೆ. ಆ ಮೂಲಕ ಪ್ರಯಾಣದ ಸಮಯ ಅರ್ಧಕ್ಕಿಂತಲೂ ಕಡಿಮೆಯಾಗಿದೆ - ಮುಖ್ಯಮಂತ್ರಿ ಸಿದ್ದರಾಮಯ್ಯ.
ಅಧಿಕಾರಿಗಳು, ನಾಗರಿಕರನ್ನು ಸ್ಮರಿಸಿದ ಸಿದ್ದು
ನಮ್ಮ ಮೆಟ್ರೋ ಯೋಜನೆ ಯಶಸ್ವಿಯಾಗಿ ಪೂರ್ಣಗೊಳ್ಳಲು ಅಧಿಕಾರಿಗಳು, ತಂತ್ರಜ್ಞರು ಸರ್ಕಾರದ ಸಂಸ್ಥೆಗಳು ಹಾಗೂ ಬೆಂಗಳೂರಿನ ನಾಗರಿಕರ ಸಹಕಾರ ಮುಖ್ಯ. ಪ್ರಯಾಣಿಕರ ಅಗತ್ಯಗಳಿಗೆ ಸ್ಪಂದಿಸಲು ಸರ್ಕಾರ ಸದಾ ಸನ್ನದ್ದವಾಗಿದೆ - ಸಿದ್ದರಾಮಯ್ಯ.
ಕೇಂದ್ರದಿಂದ ಹೊಸ ಮೆಟ್ರೋ ನೀತಿ
ಭಾರತ ಸರ್ಕಾರವು ನಗರ ಪ್ರದೇಶಗಳಲ್ಲಿ ಮೆಟ್ರೋ ಯೋಜನೆಗಳ ಅನುಷ್ಠಾನಕ್ಕೆ ಪ್ರೋತ್ಸಾಹ ನೀಡಲು ಹೊಸ ಮೆಟ್ರೋ ನೀತಿಯನ್ನು ಜಾರಿಗೊಳಿಸಲಿದೆ. ಆ ಮೂಲಕ ಖಾಸಗಿ ಸಹಭಾಗಿತ್ವಕ್ಕೆ ಪ್ರೋತ್ಸಾಹ ಹಾಗೂ ವಿನೂತನ ಹಣಕಾಸು ವ್ಯವಸ್ಥೆ ಹಾಗೂ ಮೆಟ್ರೋ ಯೋಜನೆಯು ಸಮಗ್ರ ಸಂಚಾರ ವ್ಯವಸ್ಥೆಗೆ ಪೂರಕವಾಗಿರಲು ಈ ನೀತಿಯು ಸಹಾಯಕವಾಗಲಿದೆ - ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯನಾಯ್ಡು.
ಹಸಿರು ನಗರ ಸಂಚಾರ ಯೋಜನೆ
ಇದಲ್ಲದೆ ನಗರಾಭಿವೃದ್ಧಿ ಸಚಿವಾಲಯವು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡಲು ಹಸಿರು ನಗರ ಸಂಚಾರ ಯೋಜನೆ, ಹೊಸ ಮೆಟ್ರೋ ರೈಲು ನಿಯಮಗಳು, ನ್ಯಾಷನಲ್ ಟ್ರಾನ್ಸಿಟ್ ಓರಿಯೆಂಟೆಡ್ ಡೆವಲಪ್ಮೆಂಟ್ ಪಾಲಸಿ ಮತ್ತಿತರ ಉಪ ಕ್ರಮಗಳನ್ನು ಕೈಗೊಂಡಿದೆ - ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯನಾಯ್ಡು.
ಕಾರ್ಯಕ್ರಮದಲ್ಲಿದ್ದ ಇತರ ಗಣ್ಯರು
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ. ಸದಾನಂದ ಗೌಡ, ಕರ್ನಾಟಕ ವಿಧಾನ ಪರಿಷತ್ ಸಭಾಪತಿ, ಡಿ.ಎಚ್. ಶಂಕರಮೂರ್ತಿ, ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ್, ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ನಗರಾಭಿವೃದ್ಧಿ ಸಚಿವ ಆರ್. ರೋಷನ್ಬೇಗ್, ಜಪಾನ್ ದೇಶದ ರಾಯಭಾರಿ ಕೆಂಜಿ ಹಿರಮತ್ತು , ಫ್ರಾನ್ಸ್ ದೇಶದ ರಾಯಭಾರಿ ಅಲೆಕ್ಸಾಂಡರ್ ಜೀಗ್ಲರ್, ಮೇಯರ್ ಪದ್ಮಾವತಿ, ಮೊದಲಾದವರು ಅಧಿಕಾರಿಗಳು ಉಪಸ್ಥಿತರಿದ್ದರು.