ನಮ್ಮ ಅಪ್ಪಾಜಿ ಕ್ಯಾಂಟೀನ್ ಆರಂಭಕ್ಕೆ ನಿಮಗಿದೋ ಆಹ್ವಾನ!
ಬೆಂಗಳೂರು, ಜುಲೈ 28: ಸಿದ್ದರಾಮಯ್ಯ ಸರ್ಕಾರದ ಇಂದಿರಾ ಕ್ಯಾಂಟೀನ್ ಆರಂಭಕ್ಕೂ ಮುನ್ನವೇ ಜೆಡಿಎಸ್ ನ ಅಪ್ಪಾಜಿ ಕ್ಯಾಂಟೀನ್ ಆರಂಭೋತ್ಸವ ಆಹ್ವಾನ ಪತ್ರಿಕೆ ಬಂದಿದೆ. ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ನೇತೃತ್ವದಲ್ಲಿ 'ನಮ್ಮ ಅಪ್ಪಾಜಿ ಕ್ಯಾಂಟೀನ್' ಪ್ರಾರಂಭಿಸುತ್ತಿದ್ದಾರೆ.
ಇಂದಿರಾ ಕ್ಯಾಂಟೀನ್ ನಿರ್ಮಾಣ ಹೇಗೆ?
ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಸಾಧನೆಯನ್ನು ಸ್ಮರಿಸುತ್ತಾ ಕ್ಯಾಂಟೀನ್ ಗೆ ಅಪ್ಪಾಜಿ ಕ್ಯಾಂಟೀನ್ ಎಂದು ಹೆಸರಿಸಲಾಗಿದೆ. ಅಪ್ಪಾಜಿ ಕ್ಯಾಂಟೀನ್ ಉದ್ಘಾಟನಾ ದಿನಾಂಕ ನಿಗದಿಯಾಗಿದ್ದು, ಆಗಸ್ಟ್ 02ರಂದು ಕ್ಯಾಂಟೀನ್ ಬಾಗಿಲು ಓಪನ್ ಆಗಲಿದೆ.
ಏನು ವಿಶೇಷ: ಅಪ್ಪಾಜಿ ಕ್ಯಾಂಟೀನ್ನಲ್ಲಿ 5 ರೂ.ಗೆ ತಟ್ಟೆ ಇಡ್ಲಿ-ವಡೆ, ಖಾರಾಬಾತ್, ಕೇಸರಿಬಾತ್, 10 ರೂ.ಗೆ ಪೊಂಗಲ್, ಮುದ್ದೆ ಬಸ್ಸಾರು, ಅನ್ನ ಸಾಂಬಾರ್, ರೈಸ್ ಬಾತ್, 3 ರೂ.ಗೆ ಕಾಫಿ-ಟೀ ನೀಡಲಾಗುವುದು. ಬೆಳಗ್ಗೆ 8 ರಿಂದ ಮಧ್ಯಾಹ್ನ 3 ರ ತನಕ ಕ್ಯಾಂಟೀನ್ ಓಪನ್ ಇರಲಿದೆ ಎಂದು ವಿಧಾನಪರಿಷತ್ ಸದಸ್ಯ ಟಿ.ಎ.ಶವರಣ ಹೇಳಿದ್ದಾರೆ.
ಎಲ್ಲಿ? ಯಾವಾಗ ಆರಂಭ?
ಬಸವನಗುಡಿ ವಿಧಾನಸಭಾ ಕ್ಷೇತ್ರದ ಹನುಮಂತನಗರದ ರಸ್ತೆಯಲ್ಲಿ 'ಬಡವರ ಬಂಧು-ನಮ್ಮ ಅಪ್ಪಾಜಿ ಕ್ಯಾಂಟೀನ್ - ಹಸಿದವರಿಗಾಗಿ' ಆಗಸ್ಟ್ 2 ರಂದು ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 3 ರ ತನಕ ಕ್ಯಾಂಟೀನ್ ಓಪನ್ ಇರಲಿದೆ.
ಉದ್ಘಾಟನಾ ಕಾರ್ಯಕ್ರಮ
ಪಟ್ಟನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿಯ, ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಚನ್ನಮ್ಮ ದೇವೇಗೌಡರು ಕ್ಯಾಂಟೀನ್ ಉದ್ಘಾಟಿಸಲಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ವಿಧಾನ ಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ, ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಮುದ್ದೆ ಜತೆಗೆ ಚರ್ಚೆ ಕಾರ್ಯಕ್ರಮ
ನರೇಂದ್ರ ಮೋದಿ ಅವರ ಚಾಯ್ ಪೇ ಚರ್ಚಾ ಮಾದರಿಯಲ್ಲಿ ಮುದ್ದೆ ಜತೆಗೆ ಚರ್ಚೆ ಕಾರ್ಯಕ್ರಮ ಕೂಡಾ ಜೆಡಿಎಸ್ ರೂಪಿಸಿದೆ. 'ಕರ್ನಾಟಕ ಅಸ್ಮಿತೆ: ರೊಟ್ಟಿ ಮತ್ತು ಮುದ್ದೆ ಮೇಲೆ ಪ್ರಾದೇಶಿಕ ಪಕ್ಷಗಳ ಮೇಲೆ ಚರ್ಚೆ' ಎಂಬ ಕಾರ್ಯಕ್ರಮದ ಬಗ್ಗೆ ಘೋಷಿಸಿ ಹಲವು ತಿಂಗಳುಗಳು ಕಳೆದಿವೆ. ವಿವಿಧ ಮಟ್ಟಗಳಲ್ಲಿ ಚರ್ಚೆ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಶರವಣನ ಕನಸು
ಅಪ್ಪಾಜಿ ಕ್ಯಾಂಟೀನ್ ಗಾಗಿ ರೈತರಿಂದ ನೇರವಾಗಿ ಆಹಾರ ಧಾನ್ಯ, ತರಕಾರಿ ಖರೀದಿಸಲಾಗುತ್ತದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಿಗೂ ಅಪ್ಪಾಜಿ ಕ್ಯಾಂಟೀನ್ ವಿಸ್ತರಣೆಯಾಗಲಿದೆ ಎಂದು ವಿಧಾನಪರಿಷತ್ ಸದಸ್ಯ ಟಿ.ಎ.ಶವರಣ ಹೇಳಿದ್ದಾರೆ.