'ಬೆಂಗಳೂರು ನನಗೆ ಹೊಸದಲ್ಲ' : ನೂತನ ಆಯುಕ್ತ ಮೇಘರಿಕ್
ಬೆಂಗಳೂರು, ಆಗಸ್ಟ್ 1 : ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ 1987ನೇ ಬ್ಯಾಚ್ ಐಪಿಎಸ್ ಅಧಿಕಾರಿ ಎನ್.ಎಸ್.ಮೇಘರಿಕ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನನ್ನ ಮುಂದಿರುವ ಸವಾಲು' ಎಂದು ನೂತನ ಆಯುಕ್ತರು ಹೇಳಿದ್ದಾರೆ.
ನಗರ ಪೊಲೀಸ್ ಆಯುಕ್ತರಾಗಿದ್ದ ಎಂ.ಎನ್.ರೆಡ್ಡಿ ಅವರಿಗೆ ಸರ್ಕಾರ ಶುಕ್ರವಾರ ಬಡ್ತಿ ನೀಡಿದೆ. ಅಗ್ನಿಶಾಮಕ ದಳ ವಿಭಾಗದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಜಿಪಿ)ಯಾಗಿ ಅವರು ಬಡ್ತಿ ಪಡೆದಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ಎನ್.ಎಸ್.ಮೇಘರಿಕ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. [ಬೆಂಗಳೂರಿಗೆ ನೂತನ ಪೊಲೀಸ್ ಆಯುಕ್ತರು]
ಶುಕ್ರವಾರ ಸಂಜೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು ಕಮಿಷನರೇಟ್ನ 31ನೇ ಕಮೀಷನರ್ ಆಗಿ ಎನ್.ಎಸ್.ಮೇಘರಿಕ್ ಅವರು ನಿಕಟಪೂರ್ವ ಆಯುಕ್ತ ಎಂ.ಎನ್.ರೆಡ್ಡಿ ಅವರಿಂದ ಅಧಿಕಾರ ಸ್ವೀಕರಿಸಿದರು.
'ಬೆಂಗಳೂರು ನಗರ ಹೊಸದೇನೂ ಅಲ್ಲ. 1992, 1998ರಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದೇನೆ. 2006 ರಿಂದ 2008ರವರೆಗೆ ಸಶಸ್ತ್ರ ಮೀಸಲು ಪಡೆಯ ಹೆಚ್ಚುವರಿ ಆಯುಕ್ತರಾಗಿ ಕೆಲಸ ಮಾಡಿದ್ದೇನೆ. ಐದು ವರ್ಷ ನಗರದಲ್ಲಿ ಸೇವೆ ಸಲ್ಲಿಸಿದ ಅನುಭವವಿದೆ' ಎಂದು ಮೇಘರಿಕ್ ಹೇಳಿದರು. ಮೇಘರಿಕ್ ಹೇಳುವುದೇನು ಚಿತ್ರಗಳಲ್ಲಿ ನೋಡಿ...
ಬಿಬಿಎಂಪಿ ಚುನಾವಣೆಯೇ ಸವಾಲು
'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯೇ ನನ್ನ ಮುಂದಿರುವ ಸವಾಲು' ಎಂದು ನೂತನ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಹೇಳಿದ್ದಾರೆ. 'ಬಿಬಿಎಂಪಿ ಚುನಾವಣೆ ಬಂದಿದ್ದು ಹೋಗಿದ್ದು ಗೊತ್ತಾಗದಂತೆ ಕಾನೂನು ಸುವ್ಯವಸ್ಥೆ ನಿರ್ವಹಿಸಿ ತೋರಿಸುತ್ತೇನೆ. ಎರಡು ಹಂತದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ನಿರ್ವಹಿಸಿದ ಅನುಭವವಿದೆ' ಎಂದು ಅವರು ತಿಳಿಸಿದ್ದಾರೆ.
'ಬೆಂಗಳೂರು ನನಗೆ ಹೊಸದಲ್ಲ'
'1996ರ ಲೋಕಸಭೆ ಚುನಾವಣೆ, 2008ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಬೆಂಗಳೂರು ನಗರದಲ್ಲಿಯೇ ನಾನು ಕರ್ತವ್ಯ ನಿರ್ವಹಿಸಿದ್ದೇನೆ. ನನಗೆ ಬೆಂಗಳೂರು ಹೊಸದಲ್ಲ. ಬಿಬಿಎಂಪಿ ಚುನಾವಣೆಯನ್ನು ಎದುರಿಸಲು ಈ ಅನುಭವಗಳು ನನಗೆ ನೆರವಾಗುತ್ತವೆ' ಎಂದು ಮೇಘರಿಕ್ ಹೇಳಿದ್ದಾರೆ.
'ಎಲ್ಲರೂ ನನ್ನ ಜೊತೆಗಿದ್ದಾರೆ'
'ನನ್ನ ಕೈ ಕೆಳಗೆ ಯಾರೂ ಇಲ್ಲ, ಎಲ್ಲರೂ ನನ್ನ ಜೊತೆಗಿದ್ದಾರೆ ಎಂಬಂತೆ ಕಾರ್ಯ ನಿರ್ವಹಿಸುವುದು ನನ್ನ ಶೈಲಿ. ಜನರು ಮತ್ತು ಪೊಲೀಸರು ಒಟ್ಟಿಗೆ ಇರುವಂತೆ ಕಾರ್ಯನಿರ್ವಹಿಸುತ್ತೇನೆ' ಎಂದು ಮೇಘರಿಕ್ ಹೇಳಿದ್ದಾರೆ.
'ಎಲ್ಲಾ ಠಾಣೆಗಳಿಗೂ ಭೇಟಿ'
'ಸಿಬ್ಬಂದಿ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಠಾಣೆಗಳಿಗೂ ಭೇಟಿ ನೀಡಿ, ಬಳಿಕ ಅಗತ್ಯವಿರುವ ಸುಧಾರಣೆಗಳನ್ನು ತರುತ್ತೇನೆ' ಎಂದು ಮೇಘರಿಕ್ ಹೇಳಿದರು.
ಎಂ.ಎನ್.ರೆಡ್ಡಿಗೆ ಅವರಿಗೆ ಬಡ್ತಿ
ನಗರ ಪೊಲೀಸ್ ಆಯುಕ್ತರಾಗಿದ್ದ ಎಂ.ಎನ್.ರೆಡ್ಡಿ ಅವರಿಗೆ ಸರ್ಕಾರ ಶುಕ್ರವಾರ ಬಡ್ತಿ ನೀಡಿದೆ. ಅಗ್ನಿಶಾಮಕ ದಳ ವಿಭಾಗದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಜಿಪಿ)ಯಾಗಿ ಅವರು ಬಡ್ತಿ ಪಡೆದಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ಎನ್.ಎಸ್.ಮೇಘರಿಕ್ ಅವರನ್ನು ನೇಮಿಸಲಾಗಿದೆ.