ಬೆಂಗಳೂರು : ಕಾಚರಕನಹಳ್ಳಿಯ ದೇವಾಲಯ ಮುಜರಾಯಿ ವಶಕ್ಕೆ
ಬೆಂಗಳೂರು, ಏ.21 : ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ನಿರ್ಮಿಸಿದ್ದ ಕಾಚರಕನಹಳ್ಳಿಯ ಶ್ರೀರಾಮ ಮಂದಿರವನ್ನು ಮುಜರಾಯಿ ಇಲಾಖೆ ತನ್ನ ವಶಕ್ಕೆ ಪಡೆದಿದೆ. ದೇವಾಲಯವನ್ನು ವಶಕ್ಕೆ ಪಡೆದ ಅಧಿಕಾರಿಗಳ ವಿರುದ್ಧ ನೂರಾರು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಮಹೇಶ್ ಬಾಬು ನೇತೃತ್ವದಲ್ಲಿ ದೇವಾಲಯವನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ದೇವಾಲಯ ಇಲಾಖೆ ಸುಪರ್ದಿಗೆ ಒಳಪಟ್ಟಿದೆ ಎಂದು ಫಲಕ ಹಾಕಿದರು, ಭಕ್ತರು ಇದನ್ನು ಕಿತ್ತು ಹಾಕಿದರು. [ಗೊರವನಹಳ್ಳಿ ದೇವಾಲಯ ಜಿಲ್ಲಾಡಳಿತದ ವಶಕ್ಕೆ]
ಹಿಂದೆ ಮುಜರಾಯಿ ಇಲಾಖೆ ಅಧಿಕಾರಿಗಳು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿದ ಶ್ರೀರಾಮ ಮಂದಿರವನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು. ಆದರೆ, ಸ್ಥಳೀಯರು ಕೋರ್ಟ್ಗೆ ಹೋಗಿ ತಡೆಯಾಜ್ಞೆ ತಂದಿದ್ದರು. [ಕುಕ್ಕೆ ಸುಬ್ರಮಣ್ಯದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ?]
ಸದ್ಯ, ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ್ದು ದೇವಾಲಯ ವಶಕ್ಕೆ ಪಡೆಯಲು ಒಪ್ಪಿಗೆ ನೀಡಿತ್ತು. ಮಂಗಳವಾರ ದೇವಾಲಯದ ಆಡಳಿತ ಮಂಡಳಿ ಜೊತೆ ಸಭೆ ನಡೆಸಿದ ಅಧಿಕಾರಿಗಳು ದೇವಾಲಯವನ್ನು ವಶಕ್ಕೆ ಪಡೆದುಕೊಂಡರು.
ದೇವಾಲಯ ವಶಕ್ಕೆ ಪಡೆಯಲು ಆಗಮಿಸಿದ ಅಧಿಕಾರಿಗಳಿಗೆ ಭಕ್ತರು ಅಡ್ಡಿಪಡಿಸಿದರು. ಪೊಲೀಸರ ಸಹಕಾರದೊಂದಿಗೆ ಅಂತಿಮವಾಗಿ ಅಧಿಕಾರಿಗಳು ಕಾರ್ಯಾಚರಣೆ ಮುಗಿಸಿ, ದೇವಾಲಯ ಇಲಾಖೆ ವಶಕ್ಕೆ ಸೇರಿದೆ ಎಂಬ ಫಲಕ ಹಾಕಿದರು. ನಂತರ ಭಕ್ತರು ಅದನ್ನು ಕಿತ್ತುಹಾಕಿ ಅಸಮಾಧಾನ ಹೊರಹಾಕಿದರು.