ಪೊಲೀಸರ ಲಾಠಿಗಿಂತ ಪ್ರತಿಭಟನಾಕಾರರ ಬಡಿಗೆ ದೊಡ್ಡದಿತ್ತು!
ಬೆಂಗಳೂರು, ಸೆಪ್ಟೆಂಬರ್ 15: "ಬೆಂಗಳೂರಿನ ಜನಸಂಖ್ಯೆ ಎಷ್ಟು? ಇರುವ ಪೊಲೀಸರ ಸಂಖ್ಯೆ ಎಷ್ಟು ಹೇಳಿ? ವಾರಗಟ್ಟಲೆ ಬೆಳಿಗ್ಗೆ ಎಂಟರಿಂದ ರಾತ್ರಿ ಹನ್ನೊಂದು, ಹನ್ನೆರಡರವರೆಗೆ ಕೆಲಸ ಆಗ್ತಿದೆ. ಮನೆಯಲ್ಲಿ ಹೆಂಡತಿ-ಮಕ್ಕಳಿಗೆ ಹೀಗೇ ರೂಡಿ ಆಗಿರುವುದರಿಂದ ಹೊಂದಿಕೊಂಡು ಹೋಗ್ತಿದ್ದಾರೆ.
"ನಾನೂ ಈ ಕೆಲಸಕ್ಕೆ ಇಷ್ಟಪಟ್ಟು ಬಂದಿದ್ದೀನಿ, ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಲೇ ಬೇಕಿದೆ" ಎಂದು ಆ ಹಿರಿಯ ಪೊಲೀಸ್ ಅಧಿಕಾರಿ ನಿರ್ಭಾವುಕವಾಗಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.[ಕಬಿನಿ ಬಂದೋಬಸ್ತ್ಗೆ ಬಂದಿದ್ದ ಮುಖ್ಯಪೇದೆ ಸಾವು]
ಬೆಂಗಳೂರಿನಲ್ಲಿ ಸೋಮವಾರ ನಡೆದ ಕಾವೇರಿ ಹಿಂಸಾಚಾರದ ವೇಳೆ ಪೊಲೀಸರ ಅಸಹಾಯಕತೆ ಕಂಡಾಗ ಅಯ್ಯೋ, ಪಾಪ ಅನಿಸುತ್ತಿತ್ತು. ಇಲಾಖೆಯ ಕೆಲವು ವಿಚಾರಗಳ ಬಗ್ಗೆ ಆ ಅಧಿಕಾರಿ ಒನ್ ಇಂಡಿಯಾ ಕನ್ನಡದ ಜೊತೆಗೆ ತಮ್ಮ ವಿಚಾರ ಹಂಚಿಕೊಂಡಿದ್ದಾರೆ. ಅದನ್ನು ಇಲ್ಲಿ ಹಾಕಲಾಗಿದೆ.
ಗೃಹಸಚಿವ ಪರಮೇಶ್ವರ ಅವರು ಇದಕ್ಕೆ ಉತ್ತರಿಸಲೇ ಬೇಕಿದೆ. ಇಡೀ ರಾಜ್ಯಕ್ಕೆ ಜನಸಂಖ್ಯೆ ಹಾಗೂ ಇತರ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ಪೊಲೀಸ್ ಇಲಾಖೆಗೆ ಎಷ್ಟು ಮಂದಿಯನ್ನು ನೇಮಿಸಬೇಕಾಗಿದೆ? ಸದ್ಯಕ್ಕೆ ಇರುವ ಸಂಖ್ಯೆ ಎಷ್ಟು ಎಂಬುದನ್ನು ರಾಜ್ಯದ ಜನತೆಗೆ ತಿಳಿಸಬೇಕು.[ಕೆಪಿಎನ್ ಟ್ರಾವೆಲ್ಸ್ ಪ್ರಕರಣ ತನಿಖೆಗೆ ಪರಮೇಶ್ವರ ಆದೇಶ]
ಅವರಿಗೆ ಸಿಗುವ ಸಂಬಳ, ಸವಲತ್ತು, ಬಡ್ತಿ, ರಜೆ ಇತರ ಎಲ್ಲ ಅನುಕೂಲಗಳನ್ನು ಅವರ ಶ್ರಮಕ್ಕೆ ತಕ್ಕಂತೆ ಸಿಗುವ ಹಾಗೆ ಮಾಡಬೇಕು. ಮೊನ್ನೆಯ ಕಾವೇರಿ ಗಲಭೆ ಪರಿಸ್ಥಿತಿ ಬಗ್ಗೆಯೇ ಹೇಳೋದಾದರೆ ಪೊಲೀಸರನ್ನೇ ಯಾರಾದರೂ ಕಾಪಾಡಬೇಕು ಎಂಬ ಸ್ಥಿತಿ ಹಲವೆಡೆ ಇತ್ತು. ಪೊಲೀಸರ ಕೈಯಲ್ಲಿದ್ದ ಲಾಠಿಗಿಂತ ಪ್ರತಿಭಟನಾಕಾರರ ಬಳಿಯಿದ್ದ ಬಡಿಗೆ ದೊಡ್ಡದಿತ್ತು. ಇನ್ನು ಸಂಖ್ಯೆಯ ವಿಚಾರವಂತೂ ನೋ ಕಾಮೆಂಟ್ಸ್.
"ಸೋಮವಾರ ನಡೆದ ಗಲಭೆ ಇದೆಯಲ್ಲ ಅದನ್ನು ಆರಂಭದಲ್ಲಿ ನಿಯಂತ್ರಿಸುವುದಕ್ಕೆ ಸಾಧ್ಯವಾಗದಿದ್ದಕ್ಕೆ ಮುಖ್ಯ ಕಾರಣವೇ ಸಿಬ್ಬಂದಿ ಕೊರತೆ. ಬೆಂಗಳೂರಿನ ಜನಸಂಖ್ಯೆ ಒಂದು ಕೋಟಿಯಷ್ಟಿದೆ. ಗಲಭೆಯೇ ನಿಯಂತ್ರಿಸ್ತೀರೋ, ದಾಖಲಾಗುವ ದೂರುಗಳ ಬಗ್ಗೆ ಗಮನ ಕೊಡ್ತೀರೋ, ಕೋರ್ಟ್ ಗಳಿಗೆ ಸಾಕ್ಷ್ಯಾಧಾರ ಒದಗಿಸುವುದಕ್ಕೆ ಶ್ರಮ ಹಾಕ್ತೀರೋ" ಎಂದು ಬೇಸರ ವ್ಯಕ್ತಪಡಿಸಿದರು ಪೊಲೀಸ್ ಅಧಿಕಾರಿ.
ಬೆಂಗಳೂರಿಗೆ ಹಲವು ಕೋಡು. ಐಟಿ ಕಂಪೆನಿಗಳು, ಬಿಪಿಒ ಕಂಪೆನಿಗಳು, ಐಐಎಸ್ ಸಿ, ಇಸ್ಕಾನ್...ಇದು ಕೊನೆಯಾಗದ ಪಟ್ಟಿ. ಗಲಭೆ ಸಂದರ್ಭಗಳಲ್ಲಿ ಪೊಲೀಸರು ಎಲ್ಲಿ ಅಂತ ಗಮನ ಹರಿಸ್ತಾರೆ? ರಜೆ ಸಿಗದ ಕಾರಣಕ್ಕೆ ಮೇಲಧಿಕಾರಿ ಮೇಲೆ ಗುಂಡು ಹಾರಿಸುವುದು, ಆತ್ಮಹತ್ಯೆ ಮಾಡಿಕೊಂಡಿದ್ದು, ರಾಜಕೀಯ ಒತ್ತಡ, ಪ್ರಭಾವಿಗಳ ಧಮಕಿ, ಕನಿಷ್ಠ ಮಟ್ಟದ ಸವಲತ್ತು-ಸಿಕ್ಕಾಪಟ್ಟೆ ಜವಾಬ್ದಾರಿ...[ಕಾವೇರಿ ಕಿಚ್ಚು : ಬೆಂಗಳೂರಲ್ಲಿ 312 ಮಂದಿ ಬಂಧನ]
ಒಬ್ಬ ವ್ಯಕ್ತಿಯ ಮಾನಸಿಕ ಸ್ಥಿತಿ ಕುಗ್ಗಿ ಹೋಗುವುದಕ್ಕೆ ಇದಕ್ಕಿಂತ ಒಳ್ಳೆ ವಾತಾವರಣ ಇದೆಯಾ? ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಪರಮೇಶ್ವರ ಅವರ ಎದುರು ಹಲವು ಸವಾಲುಗಳಿದ್ದವು. ಆ ಪೈಕಿ ಇಂಥದ್ದನ್ನು ಸರಿ ಮಾಡಿದ್ದೀನಿ ಎಂದು ಹೇಳುವಷ್ಟು ಕೆಲಸ ಆಗಿದ್ದರೆ ತಿಳಿಸಿ. ಪೊಲೀಸರು ಇದ್ದಾರೆ ಎಂಬ ಕಾರಣಕ್ಕೆ ಸಮಾಜದಲ್ಲಿ ಇಷ್ಟಾದರೂ ನೆಮ್ಮದಿ ನೆಲೆಸಿದೆ.
"ಪೊಲೀಸರೂ ನಮ್ಮ ಹಾಗೆ, ತೊಂದರೆ-ತಾಪತ್ರಯಗಳ ಜೊತೆಗೆ ಕೆಟ್ಟ ಪರಿಸ್ಥಿತಿಯಲ್ಲಿ ಇದ್ದಾರೆ ಎಂಬಂತೆ ಮಾಡಿದರೆ ಹೇಗೆ?" ಎಂದು ಪ್ರಶ್ನಿಸಬೇಕಿದೆ, ಪರಮೇಶ್ವರ ಉತ್ತರಿಸಬೇಕು.