ಸ್ನಾನದ ಮನೆಯಲ್ಲಿ ಉಸಿರುಗಟ್ಟಿ ತಾಯಿ, ಮಗು ಸಾವು
ಬೆಂಗಳೂರು, ಡಿಸೆಂಬರ್, 08: ಮಗು ಮೂರು ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡು 15 ದಿನವೂ ಆಗಿರಲಿಲ್ಲ. ಹೆಂಡತಿಗೆ ಗಂಡ, ಮಗುವಿನೊಂದಿಗೆ ನಗರದಲ್ಲಿ ನಡೆಯುತ್ತಿರುವ ಕಡ್ಲೆಕಾಯಿ ಪರಿಷೆಗೆ ಹೋಗುವ ಸಂಭ್ರಮ. ಆದರೆ ಈ ಎರಡು ಸಂತೋಷ ಸ್ನಾನದ ಮನೆಯಲ್ಲಿ ಅಂತ್ಯ ಕಂಡಿದೆ.
ಗ್ಯಾಸ್ ಗೀಸರ್ ಆನ್ ಮಾಡಿಕೊಂಡು ಸ್ನಾನ ಮಾಡಲು ಹೋದ ತಾಯಿ ಅರ್ಪಿತಾ (23) ಮಗು ಅಮೃತ್ (3) ಸ್ನಾನದ ಮನೆಯಲ್ಲೇ ಉಸಿರುಗಟ್ಟಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚಿತ್ರದುರ್ಗದ ಹಿರಿಯೂರಿನವರಾದ ಅರ್ಪಿತ ಪುರೋಹಿತ ನಾಗಾರ್ಜುನ್ ಅವರನ್ನು ಮದುವೆಯಾಗಿ ಬೆಂಗಳೂರಲ್ಲಿ ನೆಲೆಸಿದ್ದರು.[ಸಾವಿನಂಚಿನಲ್ಲಿದ್ದ ಅಮ್ಮನಿಗೆ ಮರುಜನ್ಮ ನೀಡಿದ ಮಗು!]
ನಾಗಾರ್ಜುನ್ ಅವರು ತಮ್ಮ ಕುಟುಂಬದೊಂದಿಗೆ ಕೆಂಪೇಗೌಡ ನಗರದ ಲಕ್ಮೀಪುರದಲ್ಲಿ ಎರಡು ಅಂತಸ್ತಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಎಂದಿನಂತೆ ತಾಯಿ ಅರ್ಪಿತಾ ಮಗು ಅಮೃತ್ ನೊಂದಿಗೆ ಸ್ನಾನಕ್ಕೆ ಹೋಗಿದ್ದಾರೆ.
ಸ್ನಾನದ ಕೋಣೆಯಿಂದ ಒಂದು ಗಂಟೆಯಾದರೂ ಸೊಸೆ ಮತ್ತು ಮೊಮ್ಮಗ ಸ್ನಾನದ ಕೋಣೆಯಿಂದ ಬಾರದಿರುವುದನ್ನು ಕಂಡ ಅತ್ತೆ ಮಾವ ಬಾಗಿಲು ಬಡಿದಿದ್ದಾರೆ. ಆದರೆ ಸ್ನಾನದ ಮನೆಯಿಂದ ಯಾವುದೆ ಶಬ್ದ ಬಾರದಿರುವುದನ್ನು ಕಂಡು ಜೋರಾಗಿ ಬಾಗಿಲು ತಳ್ಳಿದಾಗ ತಾಯಿ, ಮಗು ಪ್ರಜ್ಞಾ ಹೀನರಾಗಿರುವುದನ್ನು ಕಂಡಿದ್ದಾರೆ.[ಅಮ್ಮಾ ನಿನ್ನನ್ನು ಒಂದೇ ಸಾರಿ ತಬ್ಬಿಕೊಳ್ಳಲಾ?]
ಅತ್ತೆ ಅನ್ನಪೂರ್ಣಮ್ಮ ಮತ್ತು ಮಾವ ಸೂರ್ಯನಾರಾಯಣ ತಕ್ಷಣ ಸೊಸೆ ಮತ್ತು ಮೊಮ್ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇವರಿಬ್ಬರನ್ನು ಪರೀಕ್ಷಿಸಿದ ವೈದ್ಯರು ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಗ್ಯಾಸ್ ಬಳಸುವ ಕೊಠಡಿಯಲ್ಲಿ ಕಿಟಕಿ ವ್ಯವಸ್ಥೆ ಇಲ್ಲದಿರುವುದೇ ಅವಘಡಕ್ಕೆ ಕಾರಣ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.