ನಗರದಲ್ಲಿ ಮತ್ತಷ್ಟು ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣ: ಸಿದ್ದರಾಮಯ್ಯ
ಬ್ರಿಗೇಡ್ ಮತ್ತು ರೆಸಿಡೆನ್ಸಿ ರಸ್ತೆಗಳ ಜಂಕ್ಷನ್ ಬಳಿ ನಡೆದ ಟೆಂಡರ್ ಶ್ಯೂರ್ ರಸ್ತೆಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಮಾತನಾಡಿದರು.
ಬೆಂಗಳೂರು, ಮೇ 16: ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಟೆಂಡರ್ ಶ್ಯೂರ್ ರಸ್ತೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಬ್ರಿಗೇಡ್ ಮತ್ತು ರೆಸಿಡೆನ್ಸಿ ರಸ್ತೆಗಳ ಜಂಕ್ಷನ್ ಬಳಿ ನಡೆದ ಟೆಂಡರ್ ಶ್ಯೂರ್ ರಸ್ತೆಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಮಾತನಾಡಿದರು.
200ಕೋಟಿ ರೂ ವೆಚ್ಚ: ಸಾರ್ವಜನಿಕರಿಗೆ ಅನುಕೂಲ ಒದಗಿಸುವ ಸಲುವಾಗಿ ಟೆಂಡರ್ ಶ್ಯೂರ್ ಯೋಜನೆ ಕೈಗೊಂಡಿದ್ದೇವೆ. ಸಾರ್ವಜನಿಕರ ಸುಲಭ ಓಡಾಟಕ್ಕೆ ರಸ್ತೆಗಳ ನಿರ್ಮಾಣವಾಗಿದೆ ಎಂದು ನುಡಿದ ಮುಖ್ಯಮಂತ್ರಿಗಳು 200ಕೋಟಿ ರೂಪಾಯಿ ವೆಚ್ಚದಲ್ಲಿ 13ರಸ್ತೆಗಳಿಗೆ ಟೆಂಡರ್ ಕರೆಯಲಾಗಿದೆ.
ಇದೇ ಯೋಜನೆಯಡಿ ಇನ್ನೂ 25ರಸ್ತೆಗಳನ್ನು ನಿರ್ಮಿಸಲಾಗುವುದು ಎಂದರು. ಬೆಂಗಳೂರು ನಗರದಲ್ಲಿ 50ರಸ್ತೆಗಳ ನಿರ್ಮಾಣಕ್ಕೆ ಇದುವರೆಗೆ 700ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಹೇಳಿದರು.
ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಒಟ್ಟು 7 ಸಾವಿರ 300.ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಸಾವಿರ ಹೊಸ ಬಸ್ ಗಳನ್ನು ನಗರದಲ್ಲಿ ತರುತ್ತಿದ್ದೇವೆ, 46 ಕಿ.ಮಿ.ಮೆಟ್ರೋ ಪೂರ್ಣ ಗೊಂಡಿದೆ ಎಂದು ನುಡಿದ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಉದ್ಘಾಟನೆಗೊಂಡ ವಾರ್ ಮೆಮೋರಿಯಲ್ ಬಗ್ಗೆ ಮಾತನಾಡಿ ರೈತರು ಮತ್ತು ಯೋಧರನ್ನು ನಾವು ಪ್ರತಿ ದಿನ ನೆನೆಯಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಅವರು ಬ್ರಿಗೆಡ್ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆಗಳ ಜಂಕ್ಷನ್ ಬಳಿಯಲ್ಲಿ ಟೆಂಡರ್ ಶ್ಯೂರ್ ರಸ್ತೆಗಳನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದರು.
ಮುಖ್ಯಮಂತ್ರಿಗಳ ಜೊತೆ ಸಚಿವರುಗಳಾದ ಕೆ ಜೆ ಜಾರ್ಜ್, ರಾಮಲಿಂಗಾರೆಡ್ಡಿ ಮತ್ತು ಗಣ್ಯರು ಹಾಜರಿದ್ದರು. ಬೆಂಗಳೂರು ಮಹಾ ನಗರ ಪಾಲಿಕೆ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಅನುದಾನದಲ್ಲಿ ಟೆಂಡರ್ ಶ್ಯೂರ್ ರಸ್ತೆಗಳನ್ನು ನಿರ್ಮಾಣ ಮಾಡಿದೆ.
ಸನ್ಮಾನ: ಟೆಂಡರ್ ಶ್ಯೂರ್ ರಸ್ತೆಗಳನ್ನು ಲೋಕಾರ್ಪಣೆ ಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.