ಮನಿ ಲಾಂಡ್ರಿಂಗ್: ಡಿಕೆ ಶಿವಕುಮಾರ್ ವಿರುದ್ಧ ಸಿಬಿಐಗೆ ದೂರು
ಬೆಂಗಳೂರು, ಆಗಸ್ಟ್ 06: ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಶಾಲೆಯಲ್ಲಿ ಅಪನಗದೀಕರಣದ ನಂತರವೂ ಹಳೆ ನೋಟುಗಳ ಚಲಾವಣೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ಸಾಕ್ಷ್ಯ ಕಲೆ ಹಾಕಲು ಜಾರಿ ನಿರ್ದೇಶನಾಲಯ ಮುಂದಾಗಿದೆ.
ಈ ನಡುವೆ ಡಿಕೆ ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ಆಗಸ್ಟ್ 03ರಂದು ದೂರು ಸಲ್ಲಿಸಿದ್ದ ಬಿಡದಿ ನಿವಾಸಿ ಗುರುಪ್ರಸಾದ್ ಅವರು ಈಗ ಸಿಬಿಐಗೆ ದೂರು ಸಲ್ಲಿಸಿದ್ದಾರೆ.
ಇಂಧನ ಸಚಿವ ಡಿಕೆ ಶಿವಕುಮಾರ್, ಹಾಸನದ ಉದ್ಯಮಿ ಸಚಿನ್ ನಾರಾಯಣ್, ಆರ್. ಟಿ ನಗರದ ನಿವಾಸಿ ಜ್ಯೋತಿಷಿ ದ್ವಾರಕನಾಥ್, ಗುತ್ತಿಗೆದಾರ ಪುಟ್ಟಸ್ವಾಮಿಗೌಡ, ಇಂಧನ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ವಿ ಬಲರಾಮ್ ಹಾಗೂ ಡಿಕೆಶಿ ಆಪ್ತ ಕಾರ್ಯದಶಿ ಶ್ರೀಧರ್ ವಿರುದ್ಧ ದೂರು ನೀಡಲಾಗಿದೆ.
ಬೇನಾಮಿ ಹೆಸರಿನಲ್ಲಿ ರೈತರ ಭೂಮಿ ವಶಕ್ಕೆ ಪಡೆದಿರುವುದು, ಸೋಲಾರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾಕ್ಕೆ ಇದೇ ಭೂಮಿಯನ್ನು ಗುತ್ತಿಗೆಗೆ ನೀಡಿರುವುದು ಸೇರಿದಂತೆ ಹಲವು ಆರೋಪಗಳನ್ನು ಡಿಕೆ ಶಿವಕುಮಾರ್ ಮೇಲೆ ಹೊರೆಸಲಾಗಿದೆ.
ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಕೇಂದ್ರದಿಂದ ಬಿಡುಗಡೆಯಾದ ಅನುದಾನ ದುರ್ಬಳಕೆ, ಭ್ರಷ್ಟಾಚಾರ ಸೇರಿದಂತೆ ಅನೇಕ ಆರೋಪಗಳಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಕೋರಲಾಗಿದೆ.