ಯಡಿಯೂರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ; ನೋಟಿಸ್ ಜಾರಿ
ಬೆಂಗಳೂರು, ಫೆಬ್ರವರಿ 14: ಕಾಂಗ್ರೆಸ್ ಹೈಕಮಾಂಡ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1000 ಕೋಟಿ ರು. ನೀಡಿದ್ದಾರೆಂದು ಡೈರಿಯಲ್ಲಿ ಉಲ್ಲೇಖಿಸಿರುವುದಾಗಿ ತಮ್ಮ ವಿರುದ್ಧ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಿಧಾನ ಪರಿಷತ್ ಸದಸ್ಯ ಕೆ. ಗೋವಿಂದರಾಜು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ನೋಟಿಸ್ ಜಾರಿಯಾಗಿದೆ.
ಇತ್ತೀಚೆಗೆ, ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದ ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ಗೆ 1000 ಕೋಟಿ ರು. ಕಪ್ಪ ಕಾಣಿಕೆ ಸಲ್ಲಿಸಿದ್ದಾರೆ. ಹಾಗಾಗಿಯೇ ಅವರ ಕುರ್ಚಿ ಗಟ್ಟಿಯಾಗಿ ಉಳಿದಿದೆ ಎಂದು ಹೇಳಿದ್ದರು.[ಸಿದ್ದು ವಿರುದ್ಧ ಆರೋಪ ಸುಳ್ಳಾದರೆ ರಾಜಕೀಯ ನಿವೃತ್ತಿ: ಯಡಿಯೂರಪ್ಪ]
ತಮ್ಮ ಆರೋಪಕ್ಕೆ ಪೂರಕವಾಗಿ, ''ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಕೆ. ಗೋವಿಂದರಾಜು ಅವರ ಮನೆಯ ಮೇಲಾದ ತೆರಿಗೆ ಅಧಿಕಾರಿಗಳ ದಾಳಿಯ ವೇಳೆ ಅಧಿಕಾರಿಗಳ ಕೈಗೆ ಸಿಕ್ಕ ಗೋವಿಂದರಾಜು ಅವರ ಡೈರಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ ಎಂದೂ ಯಡಿಯೂರಪ್ಪ'' ತಿಳಿಸಿದ್ದರು.[ಚಿತ್ರ ಸುದ್ದಿ: ಕಾಂಗ್ರೆಸ್ ಸಿಡಿ ಸ್ಫೋಟ - ಈವರೆಗಿನ ಐದು ಬೆಳವಣಿಗೆ]
ಯಡಿಯೂರಪ್ಪ ಅವರ ಆರೋಪದ ವಿರುದ್ಧ ಕಿಡಿಕಾರಿದ್ದ ಗೋವಿಂದರಾಜು, ಯಡಿಯೂರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸೋಮವಾರ ಗುಡುಗಿದರು. ಅದರಂತೆ, ಮಂಗಳವಾರ ಹೈಕೋರ್ಟ್ ನಲ್ಲಿ ಅವರು ಮೊಕದ್ದಮೆ ಹೂಡಿದ್ದು, ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ನೋಟಿಸ್ ಜಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ.[ಹೈಕಮಾಂಡ್ ಗೆ ಕಪ್ಪ ವಿವಾದ: ಕುಮಾರಸ್ವಾಮಿ ಹೇಳಿದ್ದೇನು?]