ಬಡ ವಿದ್ಯಾರ್ಥಿಯ ಓದಿಗೆ ಸಹಾಯ ಹಸ್ತ ಚಾಚಿದ ಸುರೇಶ್ ಕುಮಾರ್
ಮಹಾಶಿವರಾತ್ರಿಯ ದಿನ ವಿದ್ಯಾರ್ಥಿಯೊಬ್ಬನ ಶಿಕ್ಷಣಕ್ಕೆ ತಾವು ತಮ್ಮ ಗಳೆಯರು ನೆರವಾದ ಕಥೆಯನ್ನು ಬಿಜೆಪಿ ಶಾಸಕ ಸುರೇಶ್ ಕುಮಾರ್ ತಮ್ಮ ಫೇಸ್ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ. ಆ ಘಟನೆ ಇಲ್ಲಿದೆ ಓದಿ..
ಬೆಂಗಳೂರು, ಫೆಬ್ರವರಿ 24: ಮಹಾಶಿವರಾತ್ರಿಯ ದಿನ ವಿದ್ಯಾರ್ಥಿಯೊಬ್ಬನ ಶಿಕ್ಷಣಕ್ಕೆ ತಾವು ತಮ್ಮ ಗಳೆಯರು ನೆರವಾದ ಕಥೆಯನ್ನು ಬಿಜೆಪಿ ಶಾಸಕ ಸುರೇಶ್ ಕುಮಾರ್ ತಮ್ಮ ಫೇಸ್ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ. ಕಲ್ಬುರ್ಗಿಯ ಹುಡುಗನೊಬ್ಬನ ಖರ್ಚಿಗೆ ಹಣ ನೀಡಿ ಆತ ಶಿಕ್ಷಣ ಮುಂದುವರಿಸಲು ಅನುವು ಮಾಡಿಕೊಟ್ಟ ಘಟನೆ ಇದು. ಈ ಘಟನೆಯನ್ನು ನಾವು ವಿವರಿಸಲು ಹೋಗುವುದಿಲ್ಲ, ಅದನ್ನು ಸ್ವತಃ ಸುರೇಶ್ ಕುಮಾರ್ ಹೇಳಿದ್ದಾರೆ. ಮುಂದೆ ಓದಿ..
ಮಹಾ ಶಿವರಾತ್ರಿ ದಿನದಂದು ಎಲ್ಲರ ಗಮನಕ್ಕೆ ಒಂದು ಘಟನೆ ತರಲಿಚ್ಛಿಸುತ್ತೇನೆ.
ನಾವು ಕಳೆದ ಮೂರು ವರ್ಷಗಳಿಂದ ನಮ್ಮ "ವಿಕಸನ" ದ ಮೂಲಕ ಸರಕಾರಿ, ಅನುದಾನಿತ ಹಾಗೂ ಕೆಲ ಅನುದಾನ ರಹಿತ ಶಾಲೆಗಳ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಎಸ್ಎಸ್ಎಲ್ ಸಿ ಮಕ್ಕಳಿಗೆ ಉಚಿತ ತರಗತಿಗಳನ್ನು ನಡೆಸಿಕೊಂಡು ಬರುತ್ತಿರುವ ವಿಚಾರ ಈಗಾಗಲೇ ತಿಳಿದಿರಬಹುದು.[ಬಡವಿದ್ಯಾರ್ಥಿಗಳಿಗೆ 1 ಲಕ್ಷ ಉಚಿತ ನೋಟ್ ಬುಕ್ ವಿತರಣೆ: ಸುರೇಶ್ ಕುಮಾರ್]
ಈ ವರ್ಷದ ತರಗತಿಗಳಲ್ಲಿ ಐನೂರಕ್ಕಿಂತ ಹೆಚ್ಚು ಮಕ್ಕಳು ನಮ್ಮ ಈ ತರಗತಿಗಳ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಏನಾದರೂ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ನಮ್ಮಿಂದಾಗುವ ಪರಿಹಾರ ಕಾರ್ಯವನ್ನೂ ಮಾಡುತ್ತಿದ್ದೇವೆ. ಸುಮಾರು ಇಪ್ಪತೈದಕ್ಕೂ ಹೆಚ್ಚು ಮಕ್ಕಳಿಗೆ ಕಣ್ಣು ಪರೀಕ್ಷೆ ಮಾಡಿಸಿ ಕನ್ನಡಕ ಕೊಡಿಸಿದ್ದೇವೆ. ಆ ರೀತಿಯ ಬಾಲಕರಲ್ಲೊಬ್ಬನ ಕಥೆ-ವ್ಯಥೆ ಇದು.
ಆ ಹುಡುಗ ಕಲ್ಬುರ್ಗಿ ಕಡೆಯಿಂದ ಗುಳೆ ಬಂದ ಕುಟುಂಬಕ್ಕೆ ಸೇರಿದವನು. ಅವನ ಕಣ್ಣಿನ ಸಮಸ್ಯೆ ಅರಿತ ನಂತರ ಪರೀಕ್ಷೆ ಮಾಡಿಸಿ ಕನ್ನಡಕ ಕೊಡಿಸಿದೆವು. ಆದರೂ ಅವನ ತಲೆನೋವು ಕಡಿಮೆ ಆಗಲಿಲ್ಲ. ತರಗತಿಗಳಲ್ಲಿ ಏಕಾಗ್ರತೆಯಿಂದ ಪಾಠ ಕೇಳಲು ಸಾಧ್ಯವಾಗಲಿಲ್ಲ. ನಮ್ಮ ಬಳಿ ಬಂದು ಆ ಹುಡುಗ ತನ್ನ ಸ್ಥಿತಿ ವಿವರಿಸಿದ.
ತಲೆ ಕೆಡಿಸಿಕೊಂಡ ನಾವು ಅವನ ಬಗ್ಗೆ ಇನ್ನಷ್ಟು ವಿವರಗಳನ್ನು ಕೇಳಿದಾಗ ಮನಸ್ಸನ್ನು ಅಸ್ವಸ್ಥಗೊಳಿಸಿದ ವಿಚಾರ ಹೊರ ಬಂತು. ಅವನ ಮನೆಯಲ್ಲಿ ಅವನ ತಾಯಿ, ತಂಗಿ ಜೊತೆ ವಾಸಿಸುತ್ತಿದ್ದಾನೆ. ತಂದೆ ಮನೆ ಬಿಟ್ಟು ಬೇರೆಲ್ಲೋ ಇದ್ದಾನೆ. ತಾಯಿಯ ಗಾರೆ ಕೆಲಸದಿಂದ ಮನೆ ಸಾಗಬೇಕು. ಕಡಿಮೆ ಕೂಲಿ. ಆಗ ಈ ಬಾಲಕ ತಾನೂ ಕೆಲಸಕ್ಕೆ ಹೋಗಲು ನಿರ್ಧರಿಸಿದ. ಅದು ಹೇಗೆ?
ನಮ್ಮ "ವಿಕಸನ" ದ ತರಗತಿಗಳು ಮುಗಿಯುವುದು ಸಂಜೆ ಆರು ಗಂಟೆಗೆ. ಮನೆಗೆ ಹೋಗಿ ಹೊಟ್ಟೆಗೆ ಏನಾದರೂ ಹಾಕಿಕೊಂಡು ರಾತ್ರಿ ಎಂಟು ಗಂಟೆಗೆ ಕೆಲಸಕ್ಕೆ ಹಾಜರಾಗಬೇಕು. ಜಲಮಂಡಲಿಯಲ್ಲಿ ಕೈಗೊಂಡಿರುವ ನೀರು ಸೋರಿಕೆ ತಡೆಗಟ್ಟುವ ಯೋಜನೆಯ ಉಪಗುತ್ತಿಗೆದಾರನ ಬಳಿ ಕೆಲಸ. ರಾತ್ರಿ ಇಡೀ ಆ ಕೆಲಸ ಮಾಡಿದ ನಂತರ ಮನೆಗೆ ವಾಪಸ್ಸು ಬರುವುದು ಬೆಳಗಿನ ಜಾವ ಐದು ಗಂಟೆಗೆ. ಒಂದೆರಡು ಗಂಟೆ ಮಲಗಿ ಶಾಲೆಗೆ ತಯಾರಾಗಿ ಹೊರಡುತ್ತಾನೆ. ಇದರ ವಿಪರೀತ ಪರಿಣಾಮ ಅವನ ದೇಹದ ಮೇಲೆ ಆಗಿ ಹದಗೆಟ್ಟ ಪರಿಸ್ಥಿತಿ.
ನಮ್ಮ ಸ್ನೇಹಿತರೆಲ್ಲ ಹಣ ಕೂಡಿಸಿ ಅವನ ಮನೆ ಬಾಡಿಗೆ, ಮನೆಗೆ ಬೇಕಾದ ಪಡಿತರ ಹಾಗೂ ಇನ್ನಿತರ ಸಾಮಾನು ಕೊಡಿಸಿ, ಇನ್ನು ಮುಂದೆ ಪರೀಕ್ಷೆ ಮುಗಿಯುವ ವರೆಗೂ ಕೆಲಸಕ್ಕೆ ಹೋಗಬಾರದೆಂದು ಕಟ್ಟಪ್ಪಣೆ ಮಾಡಿದ್ದಾರೆ. ಮುಂದಿನ ತಿಂಗಳೂ ಆ ಕುಟುಂಬದ ಖರ್ಚನ್ನು ನೋಡಿಕೊಳ್ಳುತ್ತೇವೆ.
ಆ ಹುಡುಗ ಪರೀಕ್ಷೆಯನ್ನು ಒಳ್ಳೆಯ ಆರೋಗ್ಯದಿಂದ ಎದುರಿಸಿ ಜಯಗಳಿಸಲಿ ಎಂದು ಹಾರೈಸಿ.