ಸಚಿವರಿಂದ ರಾಜ್ಯ ಬರ ಅಧ್ಯಯನ ಪ್ರವಾಸ
ರಾಜ್ಯದಲ್ಲಿ ಕೇಂದ್ರ ತಂಡ ಬರ ಪರಿಶೀಲನೆ ನಡೆಸಿತು, ಸ್ವತಃ ಮುಖ್ಯಮಂತ್ರಿಗಳೇ ಬರ ಅಧ್ಯಯನ ಮಾಡಿದರು. ಈಗ ಮತ್ತೆ ಸಮಿತಿಯನ್ನು ರಚಿಸಿ ತಂಡವನ್ನು ಕಳುಹಿಸಲಾಗಿದೆ.
ಬೆಂಗಳೂರು, ಡಿಸೆಂಬರ್ 16: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯದಲ್ಲಿ ಬರಪೀಡಿತ ಪ್ರದೇಶದ ಅಧ್ಯಯನ ಸಮಿತಿ ರಚಿಸಿದ್ದು, ಮೈಸೂರು ವಿಭಾಗದ ಆರು ಜಿಲ್ಲೆಗಳಿಗೆ ಐವರು ಸಚಿವರ ತಂಡವನ್ನು ನೇಮಕ ಮಾಡಲಾಗಿದೆ. ಈ ತಂಡ ಡಿಸೆಂಬರ್ 15 ರಿಂದ 17 ರ ತನಕ ಬರಪೀಡಿತ ಪ್ರದೇಶವನ್ನು ಸಂದರ್ಶಿಸಿ ಅಧ್ಯಯನ ವರದಿ ಸಲ್ಲಿಸಲಿದೆ.[ಬರ ಪರಿಹಾರ: ಕೇಂದ್ರದಿಂದ ರು 4703 ಕೋಟಿ ನೆರವು ಬೇಡಿದ ಸಿಎಂ]
ಕಂದಾಯ ಮತ್ತು ಮುಜರಾಯಿ ಇಲಾಖೆ ಸಚಿವರಾದ ಕಾಗೋಡು ತಿಮ್ಮಪ್ಪ ನೇತೃತ್ವದ ತಂಡದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ.ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ರಮೇಶ್ ಕುಮಾರ್, ಲೋಕೋಪಯೋಗಿ ಇಲಾಖೆ ಸಚಿವರಾದ ಎಚ್ ಸಿ ಮಹದೇವಪ್ಪ, ಸಹಕಾರ ಮತ್ತು ಸಕ್ಕರೆ ಸಚಿವರಾದ ಹೆಚ್ ಎಸ್ ಮಹದೇವಪ್ರಸಾದ್ ಇದ್ದಾರೆ.[ಬರ ಅಧ್ಯಯನ ತಂಡದೆದುರು ಕಣ್ಣೀರಾದ ಅನ್ನದಾತ!]
ಡಿಸೆಂಬರ್ 15 ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದ್ದು, 16ರಂದು ಮೈಸೂರು ಮತ್ತು ಕೊಡಗು ಜಿಲ್ಲೆ, 17ರಂದು ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯಲ್ಲಿ ಸಚಿವರ ತಂಡ ಅಧ್ಯಯನ ಪ್ರವಾಸ ನಡೆಸಲಿದೆ. ಅಧ್ಯಯನದಲ್ಲಿ ಭೂಮಿ, ಬೆಳೆ ನಷ್ಟ, ಮಳೆ ಕೊರತೆ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಬರ ಆವೃತವಾಗಿರುವ ಪ್ರದೇಶಗಳನ್ನು ಪರಿಶೀಲಿಸಲಿದ್ದಾರೆ.