ಬೆಂಗಳೂರಿನಲ್ಲಿ ಫೆ.19ರಂದು ಹನುಮಾನ್ ಚಾಲೀಸಾ ಮಹಾ ಜಪಯಜ್ಞ
ಫೆಬ್ರವರಿ 19ರಂದು ಜರುಗಲಿರುವ ಈ ಮಹಾಯಜ್ಞ ಜಪದಲ್ಲಿ ಭಾಗವಹಿಸಲು ಯಾವುದೇ ಜಾತಿ, ಧರ್ಮದ ಬೇಲಿಯಿಲ್ಲ. ಹನುಮಾನ್ ಚಾಲೀಸಾ ಜಪದಲ್ಲಿ ನಂಬಿಕೆ ಇರುವವರು, ಯಾವುದೇ ಧರ್ಮದವರಿದ್ದರೂ ಇದರಲ್ಲಿ ಭಾಗಿಯಾಗಬಹುದಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಂದು ಮಹಾಯಜ್ಞಕ್ಕೆ ಸಿದ್ಧಗೊಳ್ಳುತ್ತಿದೆ. ಗಿರಿನಗರದ ಕಾರ್ಯಸಿದ್ಧಿ ಆಂಜನೇಯ ಟ್ರಸ್ಟ್ ವತಿಯಿಂದ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞವನ್ನು ಆಯೋಜಿಸಲಾಗಿದೆ.
ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ 12ನೇ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞ ನಡೆಯಲಿದೆ. ಫೆ.19, ಭಾನುವಾರದಂದು ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಜಾತಿ, ಮತಭೇದಗಳನ್ನು ಮರೆತು ಸಹಸ್ರ ಸಹಸ್ರ ಮಂದಿ ಭಕ್ತರು ಭಾಗವಹಿಸುತ್ತಿದ್ದಾರೆ.
ಈ ಮಹಾಯಜ್ಞ ಜಪದಲ್ಲಿ ಭಾಗವಹಿಸಲು ಯಾವುದೇ ಜಾತಿ, ಧರ್ಮದ ಬೇಲಿಯಿಲ್ಲ. ಹನುಮಾನ್ ಚಾಲೀಸಾ ಜಪದಲ್ಲಿ ನಂಬಿಕೆ ಇರುವವರು, ಯಾವುದೇ ಧರ್ಮದವರಿದ್ದರೂ ಇದರಲ್ಲಿ ಭಾಗಿಯಾಗಬಹುದಾಗಿದೆ. [ತುಳಸೀದಾಸರು ರಚಿಸಿದ ಶ್ರೀ ಹನುಮಾನ್ ಚಾಲೀಸಾ]
ಈ ಕುರಿತು ಹರಿದಾಸ ಸಾಹಿತ್ಯದ ಹರಿಕಾರ ಅರಳುಮಲ್ಲಿಗೆ ಪಾರ್ಥಸಾರಥಿಯವರು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ವಿವರ ನೀಡಿದರು. ಸಾವಿರಾರು ಸಂಖ್ಯೆಯಲ್ಲಿ ಈ ಜಪದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕಾಗಿ ಕೋರಿದರು. ಈ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ ಸಂಪರ್ಕ : 90084-52605, 90029-22677 [ಐಕಾನಿಕ್ ಕಿತ್ತಳೆ ಭಜರಂಗಿಯ ಸೃಷ್ಟಿಕರ್ತ ಕರಣ್ ಆಚಾರ್ಯ]
ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ಮಹಾಸಂಕಲ್ಪ
ಗೋಸ್ವಾಮಿ ತುಲಸೀದಾಸರು ರಚಿಸಿರುವ ಮಹಾಮಂತ್ರ ಹನುಮಾನ್ ಚಾಲೀಸಾ. ಈ ಮಹಾಮಂತ್ರದಲ್ಲಿ ಹನುಮಂತನ ಮಹಾಶಕ್ತಿಯನ್ನು ಬಣ್ಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹನುಮಂತನ ಮಹಾನ್ ಭಕ್ತರಾಗಿರುವ ಮೈಸೂರಿನ ಅವಧೂತ ದತ್ತಪೀಠದ ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ 2015ರಲ್ಲಿ ವಿಶ್ವ ಶಾಂತಿಗಾಗಿ 1008 ಕೋಟಿ ಹನುಮಾನ್ ಚಾಲೀಸಾ ಜಪ ಯಜ್ಞ ನಡೆಸಲು ಸಂಕಲ್ಪಿಸಿದ್ದರು. ವಿಶೇಷವೆಂದರೆ ಸ್ವಾಮೀಜಿಗಳ ಈ ಮಹಾಸಂಕಲ್ಪ ಕೇವಲ ಒಂದೇ ವರ್ಷದಲ್ಲಿ ಈಡೇರಿದೆ. 1500 ಕೋಟಿ (15 ಬಿಲಿಯನ್)ಜಪ ಪೂರ್ಣಗೊಂಡಿದೆ. [ಶನಿಕಾಟದಲ್ಲಿ ಆಂಜನೇಯನಿಗೇಕೆ ಪೂಜೆ ಸಲ್ಲಿಕೆ?]
ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಂಡಿದೆ
ವಿಶೇಷವೆಂದರೆ 2015 ಜನವರಿ 31ರಂದು ಸ್ವಾಮೀಜಿಯವರ ಹನುಮಾನ್ ಚಾಲೀಸಾ ಮಹಾಯಜ್ಞ' ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಂಡಿದೆ. ಆಂಧ್ರಪ್ರದೇಶದ ತೆನಾಲಿಯ 60 ಎಕರೆ ಪ್ರದೇಶದಲ್ಲಿ ಏರ್ಪಡಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ 1 ಲಕ್ಷ 28 ಸಾವಿರದ 918 ಮಂದಿ ಏಕಕಾಲಕ್ಕೆ ಹನುಮಾನ್ ಚಾಲೀಸಾ ಪಠಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು. ಒಂದೇ ವೇದಿಕೆಯಲ್ಲಿ ಲಕ್ಷಾಂತರ ಮಂದಿ ಏಕಕಾಲಕ್ಕೆ 133 ಕೋಟಿ ಹನುಮಾನ್ ಚಾಲೀಸಾ ಜಪಿಸಿ ವಿಶ್ವದಾಖಲೆ ಬರೆದಿದ್ದರು.
ವೈಯಕ್ತಿಕ ಜೀವನದಲ್ಲಿ ಯಶಸ್ಸು
ಪಂಚಭೂತಗಳನ್ನು ಪ್ರತಿನಿಧಿಸುವ ಪವನಸುತ ಹನುಮಂತನನ್ನು ಸ್ತುತಿಸುವ ಈ ಮಹಾಮಂತ್ರವನ್ನು ಪ್ರತಿದಿನ ಪಠಿಸಿದರೆ ವೈಯಕ್ತಿಕ ಜೀವನದಲ್ಲಿ ಯಶಸ್ಸು, ನೆಮ್ಮದಿ ಲಭಿಸುತ್ತದೆ. ಕಲಿಯುಗದಲ್ಲಿ ಹನುಮಂತ ಪ್ರಾರ್ಥನೆ, ಆರಾಧನೆ ಮಾಡಿದರೆ ಇಚ್ಛಿತಫಲ, ಕಾರ್ಯಸಿದ್ಧಿ ಶತಸಿದ್ಧ.. ಎನ್ನುತ್ತಾರೆ ಪರಮಪೂಜ್ಯ ಶ್ರೀದತ್ತಾವಧೂತ ಗಣಪತಿ ಸಚ್ಚಿದಾನಂದ ಸ್ವಾಮೀಜಿ.
68 ರಾಷ್ಟ್ರಗಳಲ್ಲಿ ಹನುಮಾನ್ ಚಾಲೀಸಾ
ಭಾರತದ ಮಾತ್ರವಲ್ಲ, ಅಮೆರಿಕಾದ ಡಲ್ಲಾಸ್, ಟೆಕ್ಸಾಸ್, ವೆಸ್ಟ್ ಇಂಡೀಸ್ನ ಕಾರಾಪಿಚ್ಚೈಮಾ ಸೇರಿದಂತೆ ವಿಶ್ವದ 68ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹನುಮಾನ್ ಚಾಲೀಸಾ ಮಹಾಜಪ ಯಜ್ಞ ನಡೆದಿದೆ. ಗಿನ್ನೆಸ್ ದಾಖಲೆಯನ್ನೂ ಮೀರಿ ಮುಂದುವರಿದಿರುವ ಈ ಮಹಾಯಜ್ಞ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿದೆ. ಹೆಚ್ಚಿನ ಮಾಹಿತಿಗೆ: 90084-52605, 90029-22677