ಆಹಾ ಎಂಥಾ ಮಾವು, ಹಲಸು...ಬನ್ರೀ ಲಾಲ್ ಬಾಗ್ ಗೆ, ತಿನ್ರೀ ಮನಸಾರೆ
ಬೆಂಗಳೂರು, ಮೇ 5: ಲಾಲ್ ಬಾಗ್ ನಲ್ಲಿ ಮೇ 5ರ ಶುಕ್ರವಾರ ಮಾವು-ಹಲಸು ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಕೆಲವೇ ನಿಮಿಷದಲ್ಲಿ ಸೊಂಯ್ ಟಪಕ್ ಅಂತ ಬಂದು ಹೋಗಿಬಿಟ್ಟರು. ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮಳಿಗೆಗಳ ಉದ್ಘಾಟನೆ ಮಾಡಿದರು.
ಮಾವಿನ ಕೃಷಿಕರಿಗೆ ಕೈಪಿಡಿ ಬಿಡುಗಡೆ ಮಾಡಿದ ಅವರು, ಆ ನಂತರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ವರ್ಷ ಕರ್ನಾಟಕದಿಂದ 6795 ಟನ್ ಮಾವು ರಫ್ತು ಮಾಡಲಾಗಿತ್ತು ಅದರಿಂದ 590 ಕೋಟಿ ರುಪಾಯಿ ವಿದೇಶಿ ವಿನಿಮಯ ಬಂದಿತ್ತು. ಈ ಬಾರಿ ಹತ್ತು ಸಾವಿರ ಟನ್ ಮಾವಿನ ಹಣ್ಣು ರಫ್ತು ಮಾಡುವ ನಿರೀಕ್ಷೆ ಇದೆ ಎಂದರು.[ಮೇ 5ರಿಂದ ಮಾವು-ಹಲಸು ಮೇಳ, ಲಾಲ್ ಬಾಗ್ ಗೆ ಬಂದು ಖುಷಿಯಿಂದ ತಿನ್ನಿ]
ಇನ್ನೇನು ಕಾರಿನಲ್ಲಿ ಸಚಿವರು ಹೊರಟರು ಅನ್ನುವ ಹೊತ್ತಿಗೆ ಕೆಪಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ 'ಒನ್ಇಂಡಿಯಾ ಕನ್ನಡ' ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲಿಗೆ ಈ ತೀರ್ಮಾನ ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು. ಆ ನಂತರ ಮುಖ್ಯಮಂತ್ರಿ ನಿರ್ಧರಿಸುತ್ತಾರೆ ಎಂದು ಹೇಳಿದರು. ನಿಮ್ಮ ಸ್ವಂತ ಅಭಿಪ್ರಾಯ ಹೇಳಿ, ಬಹಳ ಜನ ಸ್ಪರ್ಧೆಯಲ್ಲಿರುವಂತೆ ಇದೆ ಎಂದು ಕೇಳಲಾಯಿತು.
ಎಂ.ಬಿ.ಪಾಟೀಲ್, ಎಸ್ ಆರ್ ಪಾಟೀಲ್, ಡಿಕೆ ಶಿವಕುಮಾರ್...ಎಲ್ಲರ ಹೆಸರು ಕೇಳಿಬರುತ್ತಿದೆ. ಮೇ 8ರವರೆಗೆ ಕಾಯಿರಿ, ಯಾರು ಕೆಪಿಸಿಸಿ ಅಧ್ಯಕ್ಷರು ಅಂತ ಗೊತ್ತಾಗುತ್ತದೆ ಎಂದು ಹೇಳಿದರು.
ಮಾವು ಮೇಳದಲ್ಲಿ ಯಾವುದರ ಬೆಲೆ ಎಷ್ಟು?
ಬಾದಾಮಿ 70, ಮಲ್ಲಿಕಾ 65, ಕೇಸರ್ 50, ಆಮ್ರಪಾಲಿ 50, ಬಂಗನಪಲ್ಲಿ 50, ಮಲಗೋವಾ 85, ರಸಪುರಿ 50, ಕಾಲಾಪಾಡ್ 45, ದಶೇರಿ 70, ಸಕ್ಕರೆ ಗುತ್ತಿ 60, ತೋತಾಪುರಿ 20, ಸೆಂಧೂರ 30, ನೀಲಂ 30- ಈ ಎಲ್ಲವೂ ಕೆಜಿಗಳಲ್ಲಿ ಬೆಲೆ ನೀಡಲಾಗಿದೆ. ನೀವು ಹಣ್ಣು ತೆಗೆದುಕೊಳ್ಳಬೇಕು ಅಂತ ನಿಶ್ಚಯಿಸಿ ಹೋದರೆ, ಬುಟ್ಟಿಯೋ ಮತ್ತೊಂದೋ ತೆಗೆದುಕೊಂಡು ಹೋಗಿ. ಇಲ್ಲದಿದ್ದರೆ ಬಾಕ್ಸ್ ಗೆ 50 ಅಥವಾ 30 ರುಪಾಯಿ ಹೆಚ್ಚುವರಿಯಾಗಿ ಕೊಡಬೇಕು.
ಶ್ರೀಕಾಂತ್ ವೃತ್ತಿಯಿಂದ ಸಿವಿಲ್ ಎಂಜಿನಿಯರ್
47ನೇ ಸಂಖ್ಯೆಯ ಮಳಿಗೆಯಲ್ಲಿದ್ದ ಶ್ರೀನಿವಾಸಪುರದ ಶ್ರೀಕಾಂತ್ ವೃತ್ತಿಯಿಂದ ಸಿವಿಲ್ ಎಂಜಿನಿಯರ್. ಮೈಸೂರಿನಲ್ಲಿ ತಮ್ಮ ಕೆಲಸಕ್ಕೆ ಒಂದು ದಿನ ರಜಾ ಹಾಕಿ, ಶನಿವಾರ-ಭಾನುವಾರ ಮಾಮೂಲಿನ ರಜಾ ಇದ್ದುದರಿಂದ ಮಾರಾಟಕ್ಕೆ ನಿಂತಿದ್ದರು. ನಮ್ಮಲ್ಲಿ ಪೇಟಿಎಂ ಅಕ್ಸೆಪ್ಟ್ ಮಾಡ್ತೀವಿ ಅನ್ನೋದನ್ನು ಇಂಗ್ಲಿಷ್ ನಲ್ಲಿ ಹೇಳಿದರು.
ಕಾಲೇಜು ಲೆಕ್ಚರರ್ ಮಂಜುನಾಥ್ ಶೆಟ್ಟಿ
ಶ್ರೀನಿವಾಸಪುರದಿಂದಲೇ ಬಂದಿದ್ದ ಮಂಜುನಾಥ್ ಶೆಟ್ಟಿ ಶ್ರೀನಿವಾಸಪುರದಿಂದ ಬಂದಿದ್ದರು. ಅವರು ವೃತ್ತಿಯಿಂದ ಉಪನ್ಯಾಸಕರು. ದಶೇರಿ, ಮಲ್ಲಿಕಾ, ಅಲ್ಫಾನ್ಸೋ, ಬಾದಾಮಿ, ಸಕ್ಕರೆ ಗುತ್ತಿ ಹಣ್ಣುಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಒಂದೂವರೆ ಟನ್ ನಷ್ಟು ಹಣ್ಣುಗಳನ್ನು ತಂದಿದ್ದರು.
ತಿಪಟೂರು ಹಿರೇಬಿದರೆ ತಿಮ್ಮ ಶೆಟ್ಟಿ
ಈ ಸಲ ಮಳೆಯೇ ಕಡಿಮೆ. ಒಂದು ಲೋಡ್ ನೀರಿಗೆ ಐನೂರು ರುಪಾಯಿಯ ಹಾಗೆ ಕೊಟ್ಟು, ಟ್ಯಾಂಕರ್ ನೀರನ್ನು ತೋಟಕ್ಕೆ ಬಿಡಿಸಿದ್ದೆ. ನಮ್ಮ ತಾಲೂಕು ತಿಪಟೂರಿನಲ್ಲಂತೂ ನೀರಿಲ್ಲದೆ ದನ-ಕರುಗಳು ಸಾಯುತ್ತಿವೆ. ಮಾವು ಅಭಿವೃದ್ಧಿ ನಿಗಮದವರು ಒಳ್ಳೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರನ್ನು ಸದಾ ನೆನಪಿಸಿಕೊಳ್ತೀವಿ ಎಂದರು.
ಆನಂದ್ ರೆಡ್ಡಿ
ಮಾವು-ಹಲಸಿನ ಮೇಳ ಇದೆ ಅಂತ ಸುದ್ದಿ ಗೊತ್ತಾದ ಮೇಲೆ ಇಲ್ಲಿಗೆ ರೈತರು ಎಂಥ ಹಣ್ಣು ತಂದಿರ್ತಾರೆ, ಎಷ್ಟು ಬೆಲೆ ಇರುತ್ತದೆ ಅಂತ ನೋಡುವುದಕ್ಕೇ ಇಲ್ಲಿಗೆ ಬಂದಿದ್ದೀವಿ. ಇನ್ನೊಂದು ಸುತ್ತು ನೋಡಿಬರ್ತೀನಿ. ಆ ನಂತರ ಯಾವುದು ತಗೊಳ್ಬೇಕು ಅಂತ ನಿರ್ಧಾರ ಮಾಡ್ತೀನಿ ಎಂದು ಹೇಳಿದರು.
ಇಪ್ಪತ್ತು ದಿನಗಳ ಮೇಳ
ಮೇ 5ರಿಂದ 24ರವರೆಗೆ ಅಂದರೆ ಇಪ್ಪತ್ತು ದಿನಗಳ ಕಾಲ ಬೆಳಗ್ಗೆ 8ರಿಂದ ರಾತ್ರಿ 7ರವರೆಗೆ ಲಾಲ್ ಬಾಗ್ ನಲ್ಲಿ ಮಾವು-ಹಲಸು ಮೇಳ ನಡೆಯಲಿದೆ. ಯಾವುದೇ ಪ್ರವೇಶ ಶುಲ್ಕ ಇಲ್ಲ. ಕಾರ್ಬೈಡ್, ರಾಸಾಯನಿಕವನ್ನು ಬಳಸದ ಮಾವಿನ ಹಣ್ಣು ಹಾಗೂ ವಿವಿಧ ತಳಿಯ ಹಲಸಿನ ಹಣ್ಣನ್ನು ಇಲ್ಲಿ ಖರೀದಿಸಬಹುದು.
ಬೆಂಗಳೂರಿನ ವಿವಿಧೆಡೆ ಮಾರಾಟ
ಲಾಲ್ ಬಾಗ್ ಮಾತ್ರವಲ್ಲದೆ ಬೆಂಗಳೂರಿನ ವಿವಿಧೆಡೆ ರೈತರು ಮಾವನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ನಾಯಂಡಹಳ್ಳಿ, ವಿವೇಕಾನಂದ, ಎಂಜಿ ರಸ್ತೆ, ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ, ಜಯನಗರ ಮೆಟ್ರೋ ನಿಲ್ದಾಣಗಳಲ್ಲಿ, ಇಂದಿರಾನಗರ, ಸಹಕಾರ ನಗರದಲ್ಲಿ ಕೂಡ ಮಾರಾಟ ವ್ಯವಸ್ಥೆ ಮಾಡಲಾಗಿದೆ.