ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸದ್ಯಕ್ಕೆ ಊಹಾಪೋಹ ಸುದ್ದಿ : ಖರ್ಗೆ
ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜನ ಖರ್ಗೆ ಅವರು ಕರ್ನಾಟಕ ರಾಜ್ಯ ರಾಜಕೀಯಕ್ಕೆ ಮರಳುವ ಸುದ್ದಿ ಒನ್ಇಂಡಿಯಾದಲ್ಲಿ ಮೊದಲಿಗೆ ನೀವು ಓದಿರುತ್ತೀರಿ. ಈಗ ಈ ಸುದ್ದಿಯ ಬಗ್ಗೆ ಖರ್ಗೆ ಅವರು ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು, ಮೇ 11: ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜನ ಖರ್ಗೆ ಅವರು ಕರ್ನಾಟಕ ರಾಜ್ಯ ರಾಜಕೀಯಕ್ಕೆ ಮರಳುವ ಸುದ್ದಿ ಒನ್ಇಂಡಿಯಾದಲ್ಲಿ ಮೊದಲಿಗೆ ನೀವು ಓದಿರುತ್ತೀರಿ. ಈಗ ಈ ಸುದ್ದಿಯ ಬಗ್ಗೆ ಖರ್ಗೆ ಅವರು ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯಕ್ಕೆ ಇದು ಊಹಾಪೋಹ ಸುದ್ದಿ, ಇದಕ್ಕೆ ಹೆಚ್ಚಿನ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದಿದ್ದಾರೆ.
2018ರ ವಿಧಾನಸಭೆ ಚುನಾವಣೆ ಎದುರಿಸಲು ಸಮರ್ಥ ನಾಯಕನ ಹುಡುಕಾಟದಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ಈಗ ಖರ್ಗೆ ಅವರನ್ನು ರಾಜ್ಯ ರಾಜಕೀಯದತ್ತ ಮರಳು ಸೂಚಿಸುವ ಸಾಧ್ಯತೆಯಿದೆ.[ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ತೇಲಿ ಬಂತು]
ಕೆ ಪಿ ಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಹೆಸರು ಅಂತಿಮವಾಗದ ಕಾರಣ, ಕಾಂಗ್ರೆಸ್ ಹೈಕಮಾಂಡ್ ಹೊಸ ಹೆಸರನ್ನು ಸೂಚಿಸಿದ್ದು, ಮಲ್ಲಿಕಾರ್ಜನ ಖರ್ಗೆ ಅವರು ಮುಂದಿನ ಅಧ್ಯಕ್ಷ ಹಾಗೂ ಸಿಎಂ ಅಭ್ಯರ್ಥಿಯಾಗಿ ಮುಂದಿನ ಚುನಾವಣೆ ಎದುರಿಸಲಿದ್ದಾರೆ ಎಂಬ ಸುದ್ದಿ ಬಂದಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಖರ್ಗೆ, ಇಲ್ಲಿ ತನಕ ಈ ಬಗ್ಗೆ ನನಗೆ ಹೈಕಮಾಂಡ್ ನಿಂದ ಯಾವುದೇ ಮಾಹಿತಿ ಬಂದಿಲ್ಲ. ಹೈಕಮಾಂಡ್ ಬಯಸಿದರೆ ಯಾವುದೇ ಹುದ್ದೆ ವಹಿಸಿಕೊಳ್ಳಲು ಸಿದ್ಧ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಯಸಿಲ್ಲ, ಹೈಕಮಾಂಡ್ ಸೂಚನೆ ಪಾಲಿಸುತ್ತೇನೆ ಎಂದು ಹೇಳಿದರು.