ತಮಿಳು ಧಾರಾವಾಹಿ ಪೋಸ್ಟ್: ಕ್ಷಮೆ ಕೇಳಿದ ಮಾಳವಿಕಾ
ಬೆಂಗಳೂರು, ಸೆಪ್ಟೆಂಬರ್ 20: ಅಂತೂ ನಟಿ ಮಾಳವಿಕಾ ಅವಿನಾಶ್ ಅವರು ಕ್ಷಮೆ ಕೋರಿದ್ದಾರೆ. ಅವರು ಪೋಸ್ಟ್ ಮಾಡಿದ್ದ ತಮಿಳು ಧಾರಾವಾಹಿಯೊಂದರ ಬಗೆಗಿನ ನೆನಪಿನ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಂದಹಾಗೆ ಅವರು ಮೊದಲು ಪೋಸ್ಟ್ ಮಾಡಿದ್ದು ಏನು ಗೊತ್ತಾ?
ನಾನು ಅಭಿನಯಿಸಿದ್ದ 'ಅಣ್ಣಿ' ಧಾರಾವಾಹಿ ಮತ್ತೆ ಜಯಾ ಟಿ.ವಿ.ಯಲ್ಲಿ ಮಧ್ಯಾಹ್ನ 1.30ಕ್ಕೆ ಪ್ರಸಾರವಾಗಲಿದೆ. ಆ ಧಾರಾವಾಹಿಯ ಒಂದು ಎಪಿಸೋಡ್ ಕೂಡ ಜಯಲಲಿತಾ ಅವರು ತಪ್ಪಿಸುತ್ತಿರಲಿಲ್ಲ...ಹೀಗೆ ತಮಿಳು ಧಾರಾವಾಹಿ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಆ ನಂತರ ಮಾಳವಿಕಾ ಅವಿನಾಶ್ ಅವರ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು, ಕ್ಷಮೆ ಕೇಳಬೇಕು ಎಂದು ಆಗ್ರಹಿಸಲಾಗಿತ್ತು.[ಬಿಜೆಪಿ ಬ್ಲೂ ಫಿಲಂ ಮುಗಿದ ಸರಕು: ಮಾಳವಿಕಾ]
ಅದಕ್ಕೆ ಆಕೆ, ನಾನು ಕನ್ನಡ ವಿರೋಧಿಯೂ ಅಲ್ಲ, ಕರ್ನಾಟಕ ವಿರೋಧಿಯೂ ಅಲ್ಲ. ಕಾವೇರಿ ವಿಚಾರವನ್ನು ಬಿಟ್ಟು ಹೇಳುವುದಾದರೆ ನಾನು ಹದಿನೈದು ವರ್ಷದ ಹಿಂದೆ ಕೆ.ಬಾಲಚಂದರ್ ಅವರ ಜೊತೆ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡಿದ್ದೇನೆ ಅಷ್ಟೇ. ಕೆ.ಬಾಲಚಂದರ್ ಅವರು ಹಲವು ಕನ್ನಡ ಸಿನಿಮಾಗಳನ್ನು ಮಾಡಿದ್ದಾರೆ. ನನ್ನ ಪೋಸ್ಟ್ ಡಿಲೀಟ್ ಮಾಡಿದ್ದೀನಿ. ಯಾರಿಗಾದರೂ ನೋವಾಗಿದ್ದರೆ ಕ್ಷಮೆಯೂ ಕೇಳ್ತೀನಿ ಎಂದಿದ್ದಾರೆ.[ಪ್ರಧಾನಿ ಮೋದಿ ಅವರಿಂದ ಕಾವೇರಿ ವಿವಾದ ಅಂತ್ಯ ಸಾಧ್ಯ : ದೇವೇಗೌಡ]
ಮುಂದುವರಿದು, ಕರ್ನಾಟಕದಲ್ಲಿ ಕಾವೇರಿ ಅಗತ್ಯದ ಬಗೆಗಿನ ಹಲವು ಪ್ರತಿಭಟನೆ ಹಾಗೂ ಚರ್ಚೆಯಲ್ಲಿ ಭಾಗವಹಿಸಿದ್ದೇನೆ. ಕನ್ನಡಿಗರಿಗೆ ನನ್ನ ಕನ್ನಡಾಭಿಮಾನದ ಬಗ್ಗೆ ಚೆನ್ನಾಗಿಯೇ ಗೊತ್ತಿದೆ. ಅವರು ನನ್ನನ್ನು ಕ್ಷಮಿಸುತ್ತಾರೆ. ಯಾರಿಗಾದರೂ ನೋವಾಗಿದ್ದರೆ ಮತ್ತೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.