ಮಹದೇವ ಪ್ರಸಾದ್ ನಿಧನ : ಮುಖಂಡರ ಅಂತಿಮ ನುಡಿ
ಬೆಂಗಳೂರು, ಜನವರಿ 3: ಸಕ್ಕರೆ, ಸಹಕಾರಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ನಿಧನ ಹೊಂದಿರುವ ಹಿನ್ನೆಲೆ ಕಾಂಗ್ರೆಸ್ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದರು. ಕಾಂಗ್ರೆಸ್ ಪಕ್ಷವಲ್ಲದೆ ಎಲ್ಲ ಪಕ್ಷದ ಪ್ರಮುಖ ಮುಖಂಡರು ಒಬ್ಬ ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡ ದುಃಖವನ್ನು ವ್ಯಕ್ತಪಡಿಸಿದರು.
ಸಕ್ಕರೆ, ಸಹಕಾರಿ ಸಚಿವರಾಗಿದ್ದ ಎಚ್. ಎಸ್. ಮಹದೇವ ಪ್ರಸಾದ್ ಪಕ್ಷಕ್ಕೆ ನಿಷ್ಠರಾಗಿ ಯಾರೊಂದಿಗೂ ಯಾವುದೇ ರೀತಿಯ ಕಲಹ ಮಾಡಿಕೊಂಡಿರಲಿಲ್ಲ. ಅವರೊಬ್ಬ ಅಜಾತ ಶತ್ರುವಾಗಿದ್ದರು. ಜೆಡಿಎಸ್, ಕಾಂಗ್ರೆಸ್ ಪಕ್ಷ ನೀಡಿದ ಸ್ಥಾನ, ಅಧಿಕಾರ, ಕರ್ತವ್ಯವನ್ನು ಯಾವುದೇ ಲೋಪದೋಷವಿಲ್ಲದೆ ನೆರವೇರಿಸಿ, ಸಚಿವರಲ್ಲಿ ಸಂಸರ್ಗ ಕಾಯ್ದುಕೊಂಡಿದ್ದರು.
ಕೋಪಗೊಳ್ಳದ ಅಜಾತ ಶತ್ರು ಮಹದೇವ ಪ್ರಸಾದ್
ರಾಜಕೀಯದಲ್ಲಿ ಶುದ್ಧ ಹಸ್ತರಾಗಿ, ಜನಾನುರಾಗಿಯಾಗಿ, ಅಭಿವೃದ್ಧಿಯ ಹರಿಕಾರರಾಗಿ ಎಲ್ಲರೊಂದಿಗೂ ಬೆರೆತು, ಕೇತ್ರದ ಜನರ ದುಃಖ ದುಮ್ಮಾನಗಳನ್ನು ಪರಿಹರಿಸುತ್ತಿದ್ದರು.ಯಾವುದೇ ವ್ಯಕ್ತಿಯೊಂದಿಗೆ ಕೋಪ ಮಾಡಿಕೊಂಡದ್ದೇ ಇಲ್ಲ. ಎಂದು ಮುಖ್ಯಮಂತ್ರಿ ಹೇಳಿದರೆ, ಪಕ್ಷದ ಕಟ್ಟಾಳು ಎಂದು ಗೃಹಸಚಿವ ಹೇಳಿದ್ದಾರೆ ಇನ್ನು ಅನೇಕ ಮುಖಂಡರು ಎಚ್.ಎಸ್ ಮಹದೇವಪ್ರಸಾದ್ ಅವರ ಬಗ್ಗೆ ಏನೇನು ಹೇಳಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.
ದುಃಖದಲ್ಲಿ ತೊದಲಿದ ಸಿದ್ದರಾಮಯ್ಯ
ಮಹದೇವ್ ಪ್ರಸಾದ್ ಒಬ್ಬ ಅಜಾತಶತ್ರು, ಮಿತಭಾಷಿ, ಬಹಳ ಸೌಮ್ಯ ಸ್ವಾಭಾವದ ವ್ಯಕ್ತಿ ಅವರನ್ನು ಕಳೆದುಕೊಂಡಿರುವುದು ವೈಯಕ್ತಿಕವಾಗಿ ಹಾಗು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರದು ಮಾದರಿ ಕುಟುಂಬ, ಅವರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ಆ ದೇವರು ನೀಡಲಿ
ರಾಜಕಾರಣ ಬಡವಾಗಿದೆ: ಮೊಯ್ಲಿ ಸಂತಾಪ
ದಿವಂಗತ ಜೆ.ಹೆಚ್. ಪಟೇಲರ ಕಾಲದಿಂದಲೂ ರಾಜಕೀಯದಲ್ಲಿ ತೊಡಗಿಕೊಂಡಿದ್ದವರು ಮಹದೇವಪ್ರಸಾದ್, ಮಂತ್ರಿಯಾಗಿ ಹಲವು ಖಾತೆಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದರು. ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಅವರು ಎಲ್ಲರೊಡನೆ ಆತ್ಮೀಯ ಸಂಬಂಧವನ್ನು ಹೊಂದಿದ್ದರು.
ಇಂತಹ ವ್ಯಕ್ತಿಯನ್ನು ಕಳೆದುಕೊಂಡು ರಾಜ್ಯದ ರಾಜಕಾರಣ ಬಡವಾಗಿದೆ. ಅವರ ಕುಟುಂಬ ವರ್ಗದವರಿಗೆ ಈ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತನ್ನು ನೀಡಲಿ
ಅನಿರೀಕ್ಷಿತ ಆಘಾತ ತಂದಿದೆ: ಮುರುಘಾ ಶ್ರೀ
ಮಹದೇವ ಪ್ರಸಾದ್ ಅವರ ನಿಧನ ಅನಿರೀಕ್ಷಿತ ಆಘಾತ ತಂದಿದೆ. ಅವರು ಮರುಘಾ ಮಠದ ಭಕ್ತರಾಗಿದ್ದರು, ಸಹಕಾರಿ ಮನೋಭಾವ ಮತ್ತು ಸಾತ್ವಿಕಗುಣದಿಂದ ಮಠದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಅವರ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ಕರುಣಿಸಲಿ
ಹಲವು ದಶಕಗಳ ಸಂಬಂಧ: ವೈಎಸ್ ವಿ ದತ್ತ
ಜೆಡಿಎಸ್ ನಲ್ಲಿ ನನ್ನದು ಮತ್ತು ಮಹದೇವ ಪ್ರಸಾದ್ ಅವರದ್ದು ಹಲವು ದಶಕಗಳ ಸಂಬಂಧ ಅವರು ನಾವು ಜೊತೆಯಲ್ಲಿಯೇ ಇರುತ್ತಿದ್ದೆವು. 2004 ರಲ್ಲಿ ಜೆಡಿಎಸ್ ಪಕ್ಷ ರಾಜ್ಯವಾಳುತ್ತಿದ್ದಾಗ ಅವರಿಗೆ ಹೃದಯಾಘಾತವಾಗಿತ್ತು. ಈ ವೇಳೆ ಅವರಿಗೆ ತಜ್ಞ ವೈದ್ಯರಿಂದ ದೇವೇಗೌಡರು ಚಿಕಿತ್ಸೆ ಕೊಡಿಸಿದ್ದರು. ಅಂದು ಅವರು ಮರುಜನ್ಮ ಪಡೆದಿದ್ದರು. ಅದರೆ ಅವರನ್ನು ಈಗ ಉಳಿಸಿಕೊಳ್ಳಲಾಗಲಿಲ್ಲ.
ನಿಷ್ಕಲ್ಮಷ ವ್ಯಕ್ತಿತ್ವ: ಗೃಹಸಚಿವ ಜಿ. ಪರಮೇಶ್ವರ
ಎಚ್, ಎಸ್. ಮಹದೇವ ಪ್ರಸಾದ್ ಕಾಂಗ್ರೆಸ್ ಪಕ್ಷದ ಕಟ್ಟಾಳುವಿನಂತೆ ದುಡಿದಿದ್ದಾರೆ. ಅವರು ಯಾರೊಂದಿಗೂ ಯಾವುದೇ ರೀತಿಯ ಕಲಹದ ಭಾಗವಾಗಿಲ್ಲ. ಯಾರ ಮೇಲೂ ಗುರುತರ ಆರೋಪವನ್ನೂ ಮಾಡದ ನಿಷ್ಕಲ್ಮಷ ವ್ಯಕ್ತಿತ್ವ ಅವರನ್ನು ಕಳೆದುಕೊಂಡಿರುವುದು ಪಕ್ಷಕ್ಕೆ ತುಂಬಲಾರದ ನಷ್ಟ.
ಸಿದ್ದರಾಮಯ್ಯನವರ ನೆರಳು: ಮಾಜಿ ಸಂಸದ ವಿಶ್ವನಾಥ್
ಮಹದೇವ ಪ್ರಸಾದ್ ಅವರು ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ನವರ ನೆರಳಿನಂತೆ ಪಕ್ಷದ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು. ಅವರು ಸಹ ಸಿಎಂ ಕ್ಷೇತ್ರದಿಂದಲೇ ಬಂದವರಾದ್ದರಿಂದ ಮೈಸೂರಿನ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ನಂಜನಗೂಡು ಕ್ಷೇತ್ರ ಅಭಿವೃದ್ಧಿಯಾಗಲು ಅಭಿವೃದ್ಧಿ ಪ್ರಾಧಿಕಾರದಿಂದ ಹಣವನ್ನು ಬಿಡುಗಡೆಗೊಳಿಸಿ ಮೊದಲು ಶ್ರಮಿಸಿದವರೇ ಇವರು.
ಒಳ್ಳೆಯ ನಂಬಿಕಸ್ಥ: ರಮೇಶ್ ಕುಮಾರ್
ಪಕ್ಷದಲ್ಲಿ ಯಾವುದೇ ವಿಷಯವಾಗಿಯಾದರೂ ಅವರೊಂದಿಗೆ ಪಕ್ಷಭೇದ ವಿಲ್ಲದೆ ಚರ್ಚೆ ಮಾಡಬಹುದಾಗಿತ್ತು. ಅವರು ಕಾಂಗ್ರೆಸ್ಸಿನ ನಂಬಿಕಸ್ಥ ವ್ಯಕ್ತಿಯಾಗಿದ್ದರು. ಯಾವುದೇ ಸಂಕೋಚವಿಲ್ಲದೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಮೈಸೂರಿಗೆ ಹೋದರೆ ಅವರ ಮೆನೆಯಲ್ಲಿಯೇ ಬ್ರೇಕ್ ಫಾಸ್ಟ್ ನಡೆಯುತ್ತಿದ್ದದ್ದು.
ತನ್ನ ಕಿವಿಗಳನ್ನೇ ನಂಬಲಾಗಲಿಲ್ಲ: ತನ್ನೀರ್ ಸೇಠ್
ಮಹದೇವ್ ಪ್ರಸಾದ್ ನಿಧನ ಎಂಬ ಸುದ್ದಿ ಕೇಳಿ ತನ್ನ ಕಿವಿಗಳನ್ನೇ ನಂಬಲಾಗಲಿಲ್ಲ. ಅವರು ತಮ್ಮ ತಂದೆ ಕಾಲದಿಂದಲೂ ಪಕ್ಷದಲ್ಲಿ ಬಾಂಧವ್ಯವನ್ನು ಹೊಂದಿದ್ದೇವೆ. ನಾವು ಎಷ್ಟೋ ಬಾರಿ ಅವರ ಮನೆಗೆ ಹೋಗಿದ್ದೇವೆ. ಅವರು ಎಲ್ಲರನ್ನು ತಮ್ಮಂತೆಯೇ ನೋಡುತ್ತಿದ್ದರು.
ಒತ್ತಡದ ನಡುವೆಯೂ ಹಸನ್ಮುಖಿ: ಬಸವರಾಜ ಎಸ್. ಹೊರಟ್ಟಿ
ಗುಂಡ್ಲುಪೇಟೆ ಶಾಸಕರಾಗಿದ್ದ ಮಹದೇವಪ್ರಸಾದ್ ಅವರು ಸಚಿವರಾದ ಬಳಿಕವೂ ಅನೇಕ ಕಾರ್ಯ ಒತ್ತಡದ ಮಧ್ಯೆಯೂ ಅವರು ಸದಾಕಾಲ ಹಸನ್ಮುಖಿಯಾಗಿರುತ್ತಿದ್ದರು. ಎಲ್ಲ ಶಾಸಕರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು. ಅವರ ಬಳಿ ರಾಜ್ಯದ ಸಹಕಾರ ಕ್ಷೇತ್ರ ಹಾಗೂ ಸಕ್ಕರೆ ಖಾತೆ ಬಗ್ಗೆ ಯಾವುದೇ ಸಮಸ್ಯೆಗಳನ್ನು ತೆಗೆದುಕೊಂಡು ಹೋದರೂ, ಅವುಗಳಿಗೆ ತಕ್ಷಣವೇ ಸ್ಪಂದಿಸುವ ಹಾಗೂ ಪರಿಹರಿಸುವ ಕ್ರಿಯಾಶೀಲ ಮನೋಭಾವ ಹೊಂದಿದ್ದರು.
ಅಪರೂಪದ ರಾಜಕಾರಣಿ: ಎನ್.ಹೆಚ್. ಕೋನರಡ್ಡಿ
ಮಹದೇವ್ ಪ್ರಸಾದ್ ಅವರು ಸರಳ, ಸಜ್ಜನಿಕೆಗೆ ಹೆಸರುವಾಗಿದ್ದರು ಎಲ್ಲರೊಂದಿಗೆ ಬೆರೆಯುವ ಅಪರೂಪದ ರಾಜಕಾರಣಿಯಾಗಿದ್ದರು. ಅಂತಹ ಧೀಮಂತ ಸಚಿವರೊಬ್ಬರು ಹೃದಯಾಘಾತದಿಂದ ಚಿಕ್ಕಮಗಳೂರಿನಲ್ಲಿ ಮಂಗಳವಾರ ಸಾವನ್ನಪ್ಪಿರುವುದು ವೈಯಕ್ತಿಕವಾಗಿ ತುಂಬಾ ನೋವು ತಂದಿದ್ದು, ಅವರ ನಿಧನ ತಡೆದುಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಆ ಭಗವಂತ ದಯಪಾಲಿಸಲಿ.