ಕಾವೇರಿ–ಮಹದಾಯಿ ನದಿಗಳ ವಿವಾದ, ಇಂದು ಸರ್ವ ಪಕ್ಷಗಳ ಸಭೆ
ಬೆಂಗಳೂರು, ಆಗಸ್ಟ್ 14 : ಕಾವೇರಿ ಹಾಗೂ ಮಹದಾಯಿ ನದಿ ನೀರಿನ ಸಮಸ್ಯೆಗಳಿಗೆ ಪರಿಹಾರ ಮಾರ್ಗೋಪಾಯ ಹುಡುಕುವ ನಿಟ್ಟಿನಲ್ಲಿ ಅಗತ್ಯ ಸಲಹೆಗಳನ್ನು ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.
ಮಹಾದಾಯಿ: ರಾಜ್ಯದ ಮನವಿ ತಿರಸ್ಕರಿಸಿದ ಗೋವಾ ಸರ್ಕಾರ
ಎರಡೂ ಸಭೆಗಳು ಪ್ರತ್ಯೇಕವಾಗಿ ಇಂದು ವಿಧಾನಸಭೆಯಲ್ಲಿ 12ಕ್ಕೆ ನಡೆಯಲಿದ್ದು, ಆಯಾ ಭಾಗದ ಶಾಸಕರು, ಸಂಸದರು ಮತ್ತು ಎಲ್ಲ ಪಕ್ಷಗಳ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸಿದ್ದರಿಂದ ಬಿಜೆಪಿಯ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳು ಕಡಿಮೆ.
ಮುಂಗಾರು ಕೈ ಕೊಟ್ಟ ಪರಿಣಾಮ ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ ನೀರಿಲ್ಲದೆ ಸಂಕಷ್ಟ ಎದುರಾಗಿದೆ. ಸದ್ಯ ಲಭ್ಯವಿರುವ 45 ಟಿಎಂಸಿ ಅಡಿ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ.
ಕೃಷಿಗಾಗಿ ನೀರು ಬಿಡುವಂತೆ ರೈತರು ಬೇಡಿಕೆ ಇಟ್ಟಿರುವ ಕಾರಣ ಮುಂದೇನು ಮಾಡಬೇಕು. ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವ ಕಾನೂನು ಹೋರಾಟ ಯಾವ ದಿಕ್ಕಿನಲ್ಲಿ ಇರಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಮಹದಾಯಿ ನದಿ ನೀರು ಹಂಚಿಕೆ ಕುರಿತು ಚರ್ಚೆಗೆ ಬರಲು ಗೋವಾ ನಿರಾಕರಿಸಿರುವುದರಿಂದ ಉಳಿದಿರುವ ಆಯ್ಕೆಗಳೇನು ಎಂದು ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ.
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಸಿದ್ದರಾಮಯ್ಯ ಮೂರು ಬಾರಿ ಪತ್ರ ಬರೆದಿದ್ದಾರೆ. ಆದರೂ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿಲ್ಲ.
ಇದರಿಂದಾಗಿ ಪ್ರಧಾನಿ ಮಧ್ಯ ಪ್ರವೇಶಕ್ಕೆ ಒತ್ತಾಯಿಸಲು ಮತ್ತೊಮ್ಮೆ ಸರ್ವ ಪಕ್ಷಗಳ ನಿಯೋಗ ಒಯ್ಯಲು ತೀರ್ಮಾನಿಸುವ ಸಾಧ್ಯಗಳಿವೆ.