ಕೆಐಎಡಿಬಿ ಅಧಿಕಾರಿ ಭೀಮಾನಾಯ್ಕ್ ವಿರುದ್ಧ ನೊಟೀಸ್ ಜಾರಿ
ಮದ್ದೂರು, ಡಿಸೆಂಬರ್ 9: ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆ ನೂರಾರು ಕೋಟಿ ಹಣವನ್ನು ಬದಲಿಸಿಕೊಟ್ಟ ಆರೋಪ, ವಾಹನ ಚಾಲಕ ರಮೇಶ್ ನಿಗೂಢ ಸಾವು ಹಿನ್ನೆಲೆ ಕೆಐಎಡಿಬಿ ಅಧಿಕಾರಿ ಭೀಮಾ ನಾಯ್ಕ್ ವಿರುದ್ಧ ಮದ್ದೂರು ಪೊಲೀಸರು ನೊಟೀಸ್ ಜಾರಿ ಮಾಡಿದ್ದಾರೆ.
ಹಣವನ್ನು ಬದಲಿಸಿಕೊಟ್ಟ ಭೀಮಾ ನಾಯ್ಕ್ ಸುದ್ದಿ ಹಬ್ಬುತ್ತಿದ್ದಂತೆ ತಲೆ ಮರೆಸಿಕೊಂಡಿದ್ದು, ಪೊಲೀಸರು ತೀವ್ರ ಶೋಧದಲ್ಲಿ ತೊಡಗಿದ್ದಾರೆ.[ಜನಾ ರೆಡ್ಡಿಗೆ 100 ಕೋಟಿ ಅರೇಂಜ್ ಮಾಡಿದ್ದು ಭೀಮಾ ನಾಯ್ಕ್, ಹೌದೇ?]
ಮಂಡ್ಯದ ಮದ್ದೂರಿನ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಚಾಲಕ ರಮೇಶ್ ಬರೆದಿರುವ ಮರಣ ಪತ್ರದಿಂದ ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾ ನಾಯ್ಕ್ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಚಾಲಕ ರಮೇಶ್ ಲೋಕಾಯುಕ್ತದಲ್ಲಿ ದಾಖಲಾಗಿದ್ದ ತಮ್ಮ ವಿರುದ್ಧದ ಪ್ರಕರಣದಲ್ಲಿ ಪ್ರಭಾವ ಬೀರಲು ಜಡ್ಜ್ ಗೆ ಹಣ ನೀಡಿದ್ದಾರೆ ಎಂದು ಮರಣ ಪತ್ರದಲ್ಲಿ ದಿನ ಮತ್ತಿತರ ಮಾಹಿತಿಯನ್ನು ಕೂಡ ಬರೆದಿದ್ದಾರೆ.
ಈ ಸಂಬಂಧ ಮದ್ದೂರಿನ ಪೊಲೀಸರು ಶುಕ್ರವಾರ ಭೀಮಾ ನಾಯ್ಕ್ ವಿರುದ್ಧ ನೊಟೀಸ್ ಜಾರಿ ಮಾಡಿದ್ದು, ಪ್ರಸ್ತುತ ತಲೆ ಮರೆಸಿಕೊಂಡಿರುವ ನಾಯ್ಕ್ ಶೋಧಕ್ಕೆ ಪೊಲೀಸರು ಮುಂದಾಗಿದ್ದಾರೆ. ಅಲ್ಲದೆ ನಾಯ್ಕ್ ಅಕ್ರಮ ಆಸ್ತಿ, ನಗದು, ಚಿನ್ನಾಭರಣಗಳ ಒಟ್ಟು ಗಳಿಕಿ ಹಿಂದೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಅಧಿಕಾರಿ ಭೀಮಾ ನಾಯ್ಕ್ ಅಕ್ರಮ ಸಂಪಾದನೆ ಮಾಡಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿತ್ತು, ಮೃತ ರಮೇಶ್ ಸಂಬಂಧಿಕರು ತನಿಖೆಗಾಗಿ ಆಗ್ರಹಿಸಿದ್ದರು. ಇದೇ ವೇಳೆ ಭೀಮಾ ನಾಯ್ಕ್ ಬಗ್ಗೆ ಅದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಸಲಾಗಿದೆ. ಜತೆಗೆ ಕಪ್ಪು ಹಣ ಕೈ ಬದಲಿಸಿದ ಬಗ್ಗೆ ಸಮಗ್ರವಾದ ತನಿಖೆಗೆ ಪೊಲೀಸರು ತೊಡಗಿದ್ದಾರೆ.