ಜಲಾಶಯಗಳಲ್ಲಿ ನೀರಿನ ಕೊರತೆ,ಬೆಂಗಳೂರಲ್ಲಿ 2 ಗಂಟೆ ಪವರ್ ಕಟ್
ಬೆಂಗಳೂರು, ಸೆ, 01 : ಮಳೆರಾಯ ಈ ವರ್ಷ ಕೊಂಚ ಬೇಸರಿಸಿಕೊಂಡಂತಿದೆ. ಇದರ ಪರಿಣಾಮ ಜಲಾಶಯಗಳಲ್ಲಿ ನೀರಿನ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಲೋಡ್ಶೆಡ್ಡಿಂಗ್ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ 56% ಕುಸಿದೆ. ಇದರಿಂದ ಜಲವಿದ್ಯುತ್ ಉತ್ಪಾದನೆ ಬಹುತೇಕ ಸ್ಥಗಿತಗೊಂಡಿದೆ. ಹೀಗಾಗಿ ಬೆಂಗಳೂರಿನಲ್ಲಿ ದಿನಕ್ಕೆ 2 ಗಂಟೆ ಕರೆಂಟ್ ತೆಗೆಯಲು ತೀರ್ಮಾನ ಕೈಗೊಳ್ಳಲಾಗಿದೆ.[ಮನೆಯಲ್ಲಿಯೇ ಬೆಸ್ಕಾಂ ಬಿಲ್ ಕಟ್ಟಿ, ರಶೀದಿ ಪಡೆಯಿರಿ]
ಲೋಡ್ ಶೆಡ್ಡಿಂಗ್ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ, ರಾಜ್ಯದಲ್ಲಿರುವ 13 ಜಲಾಶಯಗಳಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಪ್ರತಿ ವರ್ಷಕ್ಕಿಂತ ಈ ವರ್ಷ ತೀರಾ ಕಡಿಮೆಯಾಗಿದೆ.
ಶಾಖೋತ್ಪನ್ನ, ಉಷ್ಣ ವಿದ್ಯುತ್ ಸ್ಥಾವರಗಳಲ್ಲೂ ನಿರೀಕ್ಷಿತ ಪ್ರಮಾಣದ ವಿದ್ಯುತ್ ಉತ್ಪಾದನೆ ಸಾಧ್ಯವಾಗದ ಕಾರಣ ಲೋಡ್ ಶೆಡ್ಡಿಂಗ್ ಅನಿವಾರ್ಯ ಆದ ಕಾರಣ ಸಚಿವ ಸಂಪುಟ ಸಭೆ ಕೈಗೊಂಡಿದ್ದು, ಈ ತೀರ್ಮಾನಕ್ಕೆ ಬಂದಿದೆ.[ಕರ್ನಾಟಕದಲ್ಲಿ ಮತ್ತೊಂದು ಪರಮಾಣು ಸ್ಥಾವರ ನಿರ್ಮಾಣ?]
ಒಟ್ಟಿನಲ್ಲಿ ರಾಜ್ಯದಲ್ಲಿ 10,189 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿದೆ. ಆದರೆ ಪ್ರಸ್ತುತ 6,600 ರಿಂದ 7,300 ಮೆಗಾವ್ಯಾಟ್ ವಿದ್ಯುತ್ ಮಾತ್ರ ಲಭ್ಯವಾಗುತ್ತಿದೆ. ಇನ್ನೂ 3000 ಮೆಗವ್ಯಾಟ್ ವಿದ್ಯುತ್ ಉತ್ಪಾದನೆ ಕಷ್ಟ ಸಾಧ್ಯವಾಗುತ್ತಿದೆ ಎಂದು ಹೇಳಿದರು.