ಅಸೆಂಬ್ಲಿ ಚುನಾವಣೆ: ಬೆಂಗಳೂರು ನಗರದ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳು?
ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಬೆಂಗಳೂರು ನಗರದ 28 ಕ್ಷೇತ್ರಗಳ ಪೈಕಿ, ಕೆಲವೊಂದು ಕ್ಷೇತ್ರಗಳ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ. ಕೆಲವೊಂದು ಹಾಲೀ ಶಾಸಕರು ತಮ್ಮ ಕುಟುಂಬದವರಿಗಾಗಿ, ಕ್ಷೇತ್ರ ಬಿಟ್ಟುಕೊಡುವ ಸಾಧ್ಯತೆಯಿದೆ.
ಮುಂಬರುವ ಅಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅನಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿಯಾಗಿದೆ. ಮುಂದಿನ ವರ್ಷ ಮೇ ತಿಂಗಳೊಳಗೆ ನಡೆಯಬೇಕಾಗಿರುವ ಚುನಾವಣೆ,ಅವಧಿಗೆ ಮುನ್ನ ನಡೆದರೆ ಆಶ್ಚರ್ಯ ಪಡಬೇಕಾಗಿಲ್ಲ.
ಬಿಜೆಪಿಯೊಳಗಿನ ಗೊಂದಲದಿಂದ ಮತ್ತು ಇತ್ತೀಚೆಗೆ ನಡೆದ ಕೆಲವು ಸರ್ವೇಗಳ ಪ್ರಕಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಹೋಲಿಸಿದರೆ ಮತದಾರನ ಆಶೀರ್ವಾದ ಮುಂದಿನ ಚುನಾವಣೆಗೂ ಉಳಿಸಿಕೊಳ್ಳುವಲ್ಲಿ ಸದ್ಯದ ಮಟ್ಟಿಗೆ ಯಶಸ್ವಿಯಾಗಿದೆ ಎನ್ನುವುದು ಸಮೀಕ್ಷೆಯ ಫಲಿತಾಂಶ.
ಸಿ ಫೋರ್ ಸಮೀಕ್ಷೆ : ಸಿದ್ದರಾಮಯ್ಯ -ಕಾಂಗ್ರೆಸ್ ಸರ್ಕಾರಕ್ಕೆ ಮತ್ತೆ ಬಹುಮತ
ಹಾಗಾಗಿ, ಇತರ ಎರಡು ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ ಟಿಕೆಟಿಗೆ ಡಿಮಾಂಡ್ ಜಾಸ್ತಿ. ಮೂರೂ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.
ಇನ್ನು, ಜೆಡಿಎಸ್ ನಿಂದ ಹೊರನಡೆದಿರುವ ಏಳು ಬಂಡಾಯ ಶಾಸಕರ ಪೈಕಿ, ಇಬ್ಬರು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಲು 'ಟವೆಲ್' ಹಾಕಿರುವುದರಿಂದ, ಆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಅಸಮಾಧಾನವನ್ನು ಕಾಂಗ್ರೆಸ್ ಹೇಗೆ ನಿಭಾಯಿಸಲಿದೆ ಎಂದು ಕಾದು ನೋಡಬೇಕಿದೆ.
ಸಿ-ಫೋರ್ ಸಮೀಕ್ಷೆ : ಯಾರು, ಏನು ಹೇಳಿದರು?
ತನ್ನದೇ ಮೂಲದಿಂದ ಸಮೀಕ್ಷೆ ನಡೆಸಿ, ಟಿಕೆಟ್ ಯಾರಿಗೆ ನೀಡಬೇಕು ಎನ್ನುವ ಕೆಲಸವನ್ನು ನಮಗೆ ಬಿಡಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿರುವಂತೆ, ಕಾಂಗ್ರೆಸ್ ಕೂಡಾ ಅಳೆದು ತೂಗಿ ಟಿಕೆಟ್ ನೀಡಲು ನಿರ್ಧರಿಸಿದೆ. ಬೆಂಗಳೂರು ನಗರದ 28 ಕ್ಷೇತ್ರಗಳ ಪೈಕಿ, ಕೆಲವೊಂದು ಕ್ಷೇತ್ರದ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಂತಿದೆ..
ಜಯನಗರದಿಂದ ರಾಮಲಿಂಗ ರೆಡ್ಡಿ
ಹಾಲೀ ಸಾರಿಗೆ ಸಚಿವ, ಮೂಲ ಕಾಂಗ್ರೆಸ್ಸಿಗ ರಾಮಲಿಂಗ ರೆಡ್ಡಿ ಕ್ಷೇತ್ರ ಬದಲಿಸುವ ಸಾಧ್ಯತೆ ದಟ್ಟವಾಗಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ( 2013) ರಾಮಲಿಂಗ ರೆಡ್ಡಿ, ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ಬಿಜೆಪಿಯ ಎನ್ ಸುಧಾಕರ್ ಅವರನ್ನು ಭರ್ಜರಿ 49ಸಾವಿರ ಮತಗಳ ಅಂತರದಿಂದ ಸೋಲಿಸಿ, ಮರು ಆಯ್ಕೆಯಾಗಿದ್ದರು. ಜಯನಗರ ಕ್ಷೇತ್ರದಲ್ಲಿ ರೆಡ್ಡಿ ಈ ಬಾರಿ ಸ್ಪರ್ಧಿಸುವ ಸಾಧ್ಯತೆಯಿದ್ದು, ಸತತವಾಗಿ ಈ ಕ್ಷೇತ್ರದಿಂದ ಜಯಗಳಿಸುತ್ತಿರುವ 'ಪೀಪಲ್ ಫ್ರೆಂಡ್ಲಿ ಎಂಎಲ್ಎ' ಎಂದೇ ಹೆಸರಾಗಿರುವ ಬಿಜೆಪಿಯ ಬಿ ಎನ್ ವಿಜಯಕುಮಾರ್ ಅವರನ್ನು ಎದುರಿಸಬೇಕಾಗಬಹುದು.
ಬೊಮ್ಮನಹಳ್ಳಿ ಕ್ಷೇತ್ರದಿಂದ ರಾಮಲಿಂಗ ರೆಡ್ಡಿ ಪುತ್ರಿ
ಸಚಿವ ರಾಮಲಿಂಗ ರೆಡ್ಡಿ ಪುತ್ರಿ, ಸೌಮ್ಯ ರೆಡ್ಡಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಬೆಂಗಳೂರು ಘಟಕ ಯುವ ಕಾಂಗ್ರೆಸ್ ಉಪಾಧ್ಯಕ್ಷೆಯಾಗಿರುವ ಸೌಮ್ಯ, ಈಗಾಗಲೇ ಚುನಾವಣಾ ಪೂರ್ವ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಯ ಸತೀಶ್ ರೆಡ್ಡಿ, ಕಾಂಗ್ರೆಸ್ಸಿನ ನಾಗಭೂಷಣ್ ಅವರನ್ನು 26ಸಾವಿರ ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು.
ಶಿವಾಜಿನಗರ ಕ್ಷೇತ್ರದಿಂದ ರೋಷನ್ ಬೇಗ್ ಪುತ್ರ
ಸಚಿವ ರೋಷನ್ ಬೇಗ್, ಮಗ ರುಮಾನ್ ಬೇಗ್ ಗಾಗಿ ಶಿವಾಜಿನಗರ ಕ್ಷೇತ್ರ ಬಿಟ್ಟುಕೊಡುವ ಸಾಧ್ಯತೆಯಿದೆ. ಕಳೆದ ಚುನಾವಣೆಯಲ್ಲಿ ರೋಷನ್ ಬೇಗ್, ಬಿಜೆಪಿಯ ನಿರ್ಮಲ್ ಕುಮಾರ್ ಸುರಾನ ಅವರನ್ನು ಇಪ್ಪತ್ತು ಸಾವಿರ ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು. ನೀನು ಕೇಂದ್ರಕ್ಕೆ ಹೋಗು, ಮಗನನ್ನು ರಾಜ್ಯ ಪೊಲಿಟಿಕ್ಸಿಗೆ ಕಳುಹಿಸು ಎಂದು ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ರೋಷನ್ ಬೇಗ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಹುದು.
ಚಾಮರಾಜಪೇಟೆ ಕ್ಷೇತ್ರದಿಂದ ಜಮೀರ್ ಅಹಮದ್
ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್, ಚಾಮರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟಿನಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತ. ಕಳೆದ ಚುನಾವಣೆಯಲ್ಲಿ ಜಮೀರ್, ಕಾಂಗ್ರೆಸ್ಸಿನ ಜಿ ಎ ಬಾವಾ ಅವರನ್ನು ಮೂವತ್ತು ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ದೇವೇಗೌಡ್ರ ಪೊಲಿಟಿಕಲ್ ಮೈಂಡ್ ವರ್ಕೌಟ್ ಆದರೂ ಆಗಬಹುದು.
ಪುಲಿಕೇಶಿ ನಗರದಿಂದ ಅಖಂಡ ಶ್ರೀನಿವಾಸಮೂರ್ತಿ
ಜೆಡಿಎಸ್ ಮತ್ತೊಬ್ಬ ಬಂಡಾಯ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತೆ ಪುಲಿಕೇಶಿ ನಗರದಿಂದ ಸ್ಪರ್ಧಿಸುವುದು ಬಹುತೇಕ ಖಚಿತ. ಕಳೆದ ಬಾರಿ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿ, ಕಾಂಗ್ರೆಸ್ಸಿನ ಪ್ರಸನ್ನ ಕುಮಾರ್ ಅವರನ್ನು ಹತ್ತು ಸಾವಿರ ಮತಗಳ ಅಂತರದಿಂದ ಸೋಲಿಸಿದ್ದ ಶ್ರೀನಿವಾಸಮೂರ್ತಿಗೆ ಈ ಬಾರಿ ಕಾಂಗ್ರೆಸ್ ಪಕ್ಷದವರನ್ನೇ ಸಮಾಧಾನ ಪಡಿಸುವುದು ದೊಡ್ಡ ಕೆಲಸವಾಗಬಹುದು. ಇದು ಗೌಡ್ರು ಕಣ್ಣಿಟ್ಟಿರುವ ಇನ್ನೊಂದು ಕ್ಷೇತ್ರ.
ಚಿಕ್ಕಪೇಟೆ ಕ್ಷೇತ್ರದಿಂದ ಆರ್ ವಿ ದೇವರಾಜ್ ಪುತ್ರ
ಚಿಕ್ಕಪೇಟೆ ಕ್ಷೇತ್ರದ ಶಾಸಕ ಆರ್ ವಿ ದೇವರಾಜ್, ತಮ್ಮ ಮಗನಿಗಾಗಿ ಕ್ಷೇತ್ರವನ್ನು ಬಿಟ್ಟುಕೊಡುವ ಸಾಧ್ಯತೆಯಿದೆ. ಹಾಲೀ ಬಿಬಿಎಂಪಿ ಸದಸ್ಯ ಯುವರಾಜ್, ಚಿಕ್ಕಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನುವ ಮಾಹಿತಿಯಿದೆ. ಕಳೆದ ಚುನಾವಣೆಯಲ್ಲಿ ದೇವರಾಜ್, ಬಿಜೆಪಿಯ ಉದಯ್ ಗರುಡಾಚಾರ್ ಅವರನ್ನು ಹದಿಮೂರು ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.
ಬಿ ಕೆ ಶಿವರಾಂ ಪುತ್ರ ರಕ್ಷಿತ್ ಶಿವರಾಂ ಸ್ಪರ್ಧೆ?
ಹೈಕಮಾಂಡಿನಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ಬಿ ಕೆ ಹರಿಪ್ರಸಾದ್ ಸಹೋದರ, ಮಾಜಿ ಐಪಿಎಸ್ ಬಿ ಕೆ ಶಿವರಾಂ ಪುತ್ರ ರಕ್ಷಿತ್ ಶಿವರಾಂ, ಬೆಂಗಳೂರು ನಗರದಿಂದ ಸ್ಪರ್ಧಿಸುವ ಸಂಭಾವ್ಯ ಅಭ್ಯರ್ಥಿಗಳಲ್ಲೊಬ್ಬರು. ಇವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ ಎನ್ನುವ ಖಚಿತ ಮಾಹಿತಿಯಿಲ್ಲದಿದ್ದರೂ, ಮಲ್ಲೇಶ್ವರಂ ಅಥವಾ ಹೆಬ್ಬಾಳ ಕ್ಷೇತ್ರ ಇವರ ಆಯ್ಕೆ ಇರಬಹುದು. ಕಳೆದ ಚುನಾವಣೆಯಲ್ಲಿ ಬಿ ಕೆ ಶಿವರಾಂ, ಬಿಜೆಪಿಯ ಅಶ್ವಥನಾರಾಯಣ ಅವರ ಎದುರು ಇಪ್ಪತ್ತು ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.