ವಿಬ್ ಗಯಾರ್ ಶಾಲೆ : ಸಿಸಿಟಿವಿಯಲ್ಲಿ ಚಿರತೆ ಸೆರೆಯಾಗಿಲ್ಲ
ಬೆಂಗಳೂರು, ಫೆಬ್ರವರಿ 10 : ವಿಬ್ ಗಯಾರ್ ಶಾಲೆಯ ಸಮೀಪ ಪುನಃ ಚಿರತೆ ಪ್ರತ್ಯಕ್ಷವಾಗಿರುವ ವದಂತಿ ಹಬ್ಬಿದೆ. ಆದರೆ, ಶಾಲೆಯಲ್ಲಿನ ಸಿಸಿಟಿವಿಯಲ್ಲಿ ಚಿರತೆಯ ಸಂಚಾರದ ಯಾವುದೇ ದೃಶ್ಯಗಳು ಸೆರೆಯಾಗಿಲ್ಲ.
ಹಿಂದಿನ ಸುದ್ದಿ : ಬೆಂಗಳೂರಿನ ವಿಬ್ ಗಯಾರ್ ಶಾಲೆಯ ಸಮೀಪ ಪುನಃ ಚಿರತೆ ಪ್ರತ್ಯಕ್ಷವಾಗಿರುವ ವದಂತಿ ಹಬ್ಬಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಮಂಗಳವಾರ ರಾತ್ರಿ ಶಾಲೆಯ ಸುತ್ತ-ಮುತ್ತಲಿನ ಜನರು ಆತಂಕದಿಂದ ನಿದ್ದೆ ಬಿಟ್ಟು ಕಾವಲು ಕಾದಿದ್ದಾರೆ. ಭಾನುವಾರ ಶಾಲೆಯ ಆವರಣದೊಳಗೆ ನುಗ್ಗಿದ್ದ ಚಿರತೆಯನ್ನು ಜೀವಂತವಾಗಿ ಸೆರೆ ಹಿಡಿಯಲಾಗಿತ್ತು.
ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ವಿಬ್ ಗಯಾರ್ ಶಾಲೆ ಬಳಿ 2 ಚಿರತೆಗಳು ಬಂದಿವೆ ಎಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದರೂ ಚಿರತೆಗಳು ಪತ್ತೆಯಾಗಲಿಲ್ಲ. ಆದರೆ, ಜನರ ಆತಂಕ ಮಾತ್ರ ದೂರವಾಗಿಲ್ಲ. [ಚಿತ್ರಗಳು : ಬೆಂಗಳೂರು ಶಾಲೆಗೆ ಲಗ್ಗೆ ಹಾಕಿದ ಚಿರತೆ]
ಚಿರತೆಗಳು ಮನೆಗೆ ನುಗ್ಗದಂತೆ ಬೆಂಕಿ ಹಚ್ಚಿ, ಪಟಾಕಿ ಸಿಡಿಸಿ ಜನರು ರಾತ್ರಿಪೂರ್ತಿ ಕಾವಲು ಕಾದಿದ್ದಾರೆ. ಹೊಯ್ಸಳ ವಾಹನದಲ್ಲಿ ಗಸ್ತು ತಿರುಗಿದ ಪೊಲೀಸರು ಮನೆಯಿಂದ ಹೊರಬರಬೇಡಿ ಎಂದು ಜನರಿಗೆ ಮೈಕ್ ಮೂಲಕ ಮನವಿ ಮಾಡಿದರು. 15ಕ್ಕೂ ಅಧಿಕ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಚಿರತೆಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.[ವಿಬ್ ಗಯಾರ್ ಬಳಿ ಚಿರತೆ ಪ್ರತ್ಯಕ್ಷ, ವದಂತಿ ತಂದ ಆತಂಕ]
ಚಿರತೆ ಬಂದಿರುವ ವದಂತಿ ಹಿನ್ನಲೆಯಲ್ಲಿ ಬುಧವಾರ ವಿಬ್ ಗಯಾರ್ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಮೊದಲು ಚಿರತೆ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಿದ್ದು, ನಂತರ ಅದನ್ನು ಸೆರೆ ಹಿಡಿಯುವುದೋ ಅಥವ ಕಾಡಿಗೆ ಅಟ್ಟುವುದೋ ಎಂದು ತೀರ್ಮಾನ ಕೈಗೊಳ್ಳಲಿದೆ.
'ರಾತ್ರಿಯ ಕಾರ್ಯಾಚರಣೆ ವೇಳೆ ಚಿರತೆ ಪತ್ತೆಯಾಗಿಲ್ಲ. ಇಂದು ಬೆಳಗ್ಗೆ ಪುನಃ ಕಾರ್ಯಾಚರಣೆ ಆರಂಭಿಸಿದ್ದೇವೆ' ಎಂದು ಡಿಎಫ್ಓ ಪುಟ್ಟಣ್ಣ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಫೆ.7ರ ಭಾನುವಾರ ಮುಂಜಾನೆ 4.15ರ ಸುಮಾರಿಗೆ ವಿಬ್ ಗಯಾರ್ ಶಾಲೆಗೆ ಚಿರತೆ ನುಗ್ಗಿತ್ತು. ಸತತ 13 ಗಂಟೆಗಳ ಕಾರ್ಯಾಚರಣೆ ಬಳಿಕ ಅದನ್ನು ಜೀವಂತವಾಗಿ ಸೆರೆ ಹಿಡಿದು, ಬನ್ನೇರುಘಟ್ಟ ಉದ್ಯಾನಕ್ಕೆ ಸಾಗಿಸಲಾಗಿದೆ.