ಬೆಂಗಳೂರಿನ ಲಾಲ್ ಬಾಗಿನಲ್ಲಿ ಕುವೆಂಪು 'ಕವಿಶೈಲ'!
ಬೆಂಗಳೂರು, ಆಗಸ್ಟ್ 1: ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯ ದಿನಾಚರಣೆಗೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಪುಷ್ಪಗಳ ರಂಗವಲ್ಲಿ ಕಣ್ಮನ ಸೆಳೆಯುತ್ತೆ. ಈ ಪುಷ್ಪ ಮೇಳ ನೋಡುವುದಕ್ಕೆಂದೇ ನಾಡಿನ ಬೇರೆ ಬೇರೆ ಜಿಲ್ಲೆಯಿಂದ ಜನರು ಆಗಮಿಸುತ್ತಾರೆ. ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಗೆ ಈಗಾಗಲೇ ಸಂಭ್ರಮ ಶುರುವಾಗಿದೆ. ಸಸ್ಯಕಾಶಿ ಲಾಲ್ ಬಾಗ್ ಸಹ ಮದುವಣಗಿತ್ತಿಯಂತೇ ಸಿಂಗರಿಸಿಕೊಳ್ಳುತ್ತಿದೆ.
ಲಾಲ್ ಬಾಗ್ ಫ್ಲವರ್ ಶೋ; 'ಒನ್ ಇಂಡಿಯಾ' ಕಂಡಂತೆ.....
ಪ್ರತಿಬಾರಿ ಒಂದಿಲ್ಲೊಂದು ಹೊಸ ಪರಿಕಲ್ಪನೆಯೊಂದಿಗೆ ನಡೆಯುವ ಈ ಫಲಪುಷ್ಪ ಪ್ರದರ್ಶನ ಈ ಬಾರಿ ರಾಷ್ಟ್ರಕವಿ, ರಸಋಷಿ ಕುವೆಂಪು(ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ) ಅವರ ಕವಿಶೈಲವನ್ನು ಲಾಲ್ ಬಾಗಿಗೆ ಹೊತ್ತು ತರುತ್ತಿದೆ! ಲಾಲ್ ಬಾಗಿನ ಗ್ಲಾಸ್ ಹೌಸ್ ನಲ್ಲಿ ನಿರ್ಮಾಣವಾಗುತ್ತಿರುವ ಶಿವಮೊಗ್ಗ್ ಜಿಲ್ಲೆಯ ಕುಪ್ಪಳ್ಳಿಯಲ್ಲಿರುವ ಕುವೆಂಪು ಮನೆ 'ಕವಿಶೈಲ'ದ ಮಾದರಿಯೇ ಈ ಬಾರಿಯ ಫ್ಲವರ್ ಶೋ ಆಕರ್ಷಣೆ.
ಆಗಸ್ಟ್ 4 ರಿಂದ 15 ರವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನವನ್ನು ರಾಜ್ಯ ತೋಟಗಾರಿಕಾ ಇಲಾಖೆ, ಮೈಸೂರು ತೋಟಗಾರಿಕೆ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ನಡೆಸಲಾಗುತ್ತಿದೆ.
ಕುವೆಂಪು (29.12.1904 - 11.11.1994) ಅವರಿಗೆ ಜ್ಞಾನಪೀಠ ಪ್ರಶಸ್ತಿ(1967) ತಂದುಕೊಟ್ಟ ಕೃತಿ 'ಶ್ರೀರಾಮಾಯಣ ದರ್ಶನಂ', ಅವರ ಪ್ರಸಿದ್ಧ ಕಾದಂಬರಿಗಳಾದ 'ಕಾನೂರು ಸುಬ್ಬಮ್ಮ ಹೆಗ್ಗಡತಿ', 'ಮಲೆಗಳಲ್ಲಿ ಮದುಮಗಳು' ಸೇರಿದಂತೆ ಅವರ ಪ್ರಮುಖ ಕೃತಿಗಳನ್ನು ಈ ಸಮಯದಲ್ಲಿ ಪ್ರದರ್ಶನ ಮಾಡುವ ಯೋಚನೆಯೂ ಇದೆ ಎಂದು ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಡಾ.ಜಗದೀಶ್ ಹೇಳಿದ್ದಾರೆ.
ಕವಿಶೈಲ ಮಾದರಿ ಈಗಾಗಲೇ ಸಿದ್ಧವಾಗಿದ್ದು, ಅದಕ್ಕಾಗಿ ಲಕ್ಷಕ್ಕೂ ಹೆಚ್ಚು ಡಚ್ ಗುಲಾಬಿ ಹೂವುಗಳನ್ನು ಬಳಸಲಾಗುತ್ತಿದೆ. ಗ್ಲಾಸ್ ಹೌಸ್ ಎದುರು ರಾಷ್ಟ್ರಕವಿ ಕುವೆಂಪು ಅವರಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತದೆ.
ಒಟ್ಟಿನಲ್ಲಿ ವಿಶ್ವಮಾನವ ಸಂದೇಶವನ್ನು ಸಾರಿದ ಕರ್ನಾಟಕದ ಹೆಮ್ಮೆಯ ಕವಿ, ಕುವೆಂಪು ಅವರ ಕವಿಶೈಲವನ್ನು ಬೆಂಗಳೂರಿನಲ್ಲೇ ಕಣ್ತುಂಬಿಸಿಕೊಳ್ಳುವ ಅದೃಷ್ಟ ಬೆಂಗಳೂರಿಗರಿಗೆ ಈ ಮೂಲಕ ಸಿಕ್ಕಿದೆ.