ಬಿಜೆಪಿ, ಕಾಂಗ್ರೆಸ್ ಭ್ರಷ್ಟಾಚಾರದಿಂದ ಜೆಡಿಎಸ್ಗೆ ಮತ್ತೆ ಅವಕಾಶ
ಬೆಂಗಳೂರು, ಜ. 24: ಜೆಡಿಎಸ್ ಪಕ್ಷ 40 ಶಾಸಕರನ್ನು ಹೊಂದಿದೆ. ಇಂತಹ ಪಕ್ಷಕ್ಕೆ ಭವಿಷ್ಯವಿಲ್ಲವೆಂಬಂತಹ ಚರ್ಚೆ ಏಕೆ ಆರಂಭವಾಯಿತು ಎಂಬುದೇ ನನಗೆ ತಿಳಿಯುತ್ತಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಪರಸ್ಪರ ಭ್ರಷ್ಟಾಚಾರದ ಆರೋಪ ಮಾಡಿಕೊಳ್ಳುತ್ತಿವೆ. ಆದರೆ, ಜೆಡಿಎಸ್ ಮೇಲೆ ಅಂತಹ ಯಾವುದೇ ಆರೋಪವಿಲ್ಲ. ಅಷ್ಟರ ಮಟ್ಟಿಗೆ ನಾವು ನೈತಿಕತೆ ಉಳಿಸಿಕೊಂಡಿದ್ದೇವೆ ಎಂದು ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. [ಜೆಡಿಎಸ್ ಸಮಾವೇಶದಲ್ಲಿ ಜಮೀರ್ ಫೋಟೊ ನಾಪತ್ತೆ]
ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ ಸಭಾಂಗಣದಲ್ಲಿ ಶನಿವಾರ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಸಮಾರಂಭದಲ್ಲಿ ಮಾತನಾಡಿದ ಕುಮಾರಸ್ವಾಮಿ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳ ವಿರುದ್ಧ ಹರಿಹಾಯ್ದರು.
ಜೆಡಿಎಸ್ ಸಭೆಯಲ್ಲಿ ಕುಮಾರಸ್ವಾಮಿ ಹೇಳಿದ್ದಿಷ್ಟು...
- ಬಿಜೆಪಿ ಹಾಕಿಕೊಟ್ಟ ಭ್ರಷ್ಟಾಚಾರ ಮಾರ್ಗದಲ್ಲೇ ಕಾಂಗ್ರೆಸ್ ಮುಂದುವರಿಯುತ್ತಿದೆ. [ಸಿದ್ರಾಮಣ್ಣ, BMW ಕಾರಿನಲ್ಲಿ ಬರುವ ಹೆಣ್ಣುಮಗಳು ಯಾರು?]
- ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಬಂದಾಗ ಅಭಿವೃದ್ಧಿ ಕಾಲ ಆರಂಭವಾಯಿತು.
- ಜೆಡಿಎಸ್ನಲ್ಲಿರುವ ಲೋಪ ದೋಷಗಳನ್ನು ಸುಧಾರಿಸಿಕೊಂಡು ಮುಂದುವರಿಯಬೇಕಾಗಿದೆ.
- ಪಕ್ಷದ ರಾಷ್ಟ್ರಾಧ್ಯಕ್ಷರು ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಸಾಂಕೇತಿಕ ಚಾಲನೆ ನೀಡಿದ್ದಾರೆ. ನಾಯಕರಾಗಿ ಬೆಳೆಯಲು ಇಚ್ಛಿಸುವವರು ತಳಮಟ್ಟದಲ್ಲಿ 25ರಿಂದ 30 ಕಾರ್ಯಕರ್ತರನ್ನು ನೋಂದಾಯಿಸಬೇಕು.
- ಸಿದ್ದರಾಮಯ್ಯ ಜೆಡಿಎಸ್ನಲ್ಲಿದ್ದಾಗ ಹುಲಿಯಂತೆ ಇದ್ದರು. ಇಂದು ಮುಖ್ಯಮಂತ್ರಿ ಆಗಿದ್ದರೂ ಗತ್ತು ಉಳಿಸಿಕೊಂಡಿಲ್ಲ. [ಚೆಲುವರಾಯಸ್ವಾಮಿ-ಕುಮಾರಸ್ವಾಮಿ ಹ್ಯಾಂಡ್ ಶೇಕ್]
- ಇಲ್ಲಿಯವರೆಗೆ ಸ್ವಚ್ಛ ರಾಜಕಾರಣ ಮಾಡಿಕೊಂಡಿದ್ದ ಸಿದ್ದರಾಮಯ್ಯ ಇನ್ನು ಮುಂದೆ ತಾವು ಪ್ರಾಮಾಣಿಕ ಎಂದು ಹೇಳಿಕೊಳ್ಳುವಂತಿಲ್ಲ.
- ಸದನದಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಕ್ಕಿಬಿದ್ದಾಗ ಸಿದ್ದರಾಮಯ್ಯ ಮೇಲೆ ಮೃದು ಧೋರಣೆ ತೋರಿದ್ದೇವೆ. ಇನ್ನು ಮುಂದೆ ಹಾಗಿರುವುದಿಲ್ಲ.
- ನಾನು ಜನರಿಗೆ ವಚನಭ್ರಷ್ಟನಾಗಿರಲಿಲ್ಲ. ಸಿದ್ದರಾಮಯ್ಯನವರೇ ಜನರಿಗೆ ಕೊಟ್ಟ ವಚನ ಮರೆಯಬೇಡಿ.
- ನಾವು ಬಿಜೆಪಿಗೆ ಅಧಿಕಾರ ಕೊಟ್ಟಿದ್ದೆವು. ಆದರೆ, ಅಧಿಕಾರ ಕಳೆದುಕೊಳ್ಳಲು ಅವರ ನಡವಳಿಕೆಯೇ ಕಾರಣ.
- ಜನತಾ ಸರ್ಕಾರ ದಲಿತರಿಗೆ ನಿವೇಶನ ನೀಡಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ಮಾಡಿದ್ದು ಲೂಟಿ. [ಸಿದ್ದರಾಮಯ್ಯ ಸರ್ಕಾರದಿಂದ 600-700 ಕೋಟಿ ರು. ಅವ್ಯವಹಾರ]
- ಸಿದ್ದರಾಮಯ್ಯನವರು ನೈತಿಕತೆ ಇದ್ದರೆ ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲಿ.
- ಜೆಡಿಎಸ್ ಶಾಸಕರು ತಮ್ಮ ಕ್ಷೇತ್ರದಲ್ಲಿ ಸದಸ್ಯತ್ವ ನೋಂದಣಿ ಆರಂಭಿಸಬೇಕು. ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡಬೇಕು. ಮತದಾರರಿಗೆ ಧ್ವನಿಯಾಗಬೇಕು.
- ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಭ್ರಷ್ಟಾಚಾರ ನಡೆಸುವ ಮೂಲಕ ಮತ್ತೆ ಜೆಡಿಎಸ್ಗೆ ಅವಕಾಶ ನೀಡಿದ್ದಾರೆ. ಅದರ ಸದುಪಯೋಗ ಪಡೆಯಬೇಕು.
- ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆಯ ಬೆಲೆ ಕುಸಿದುಹೋಗಿದೆ. ಆದರೆ, ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಸ್ಪಂದಿಸಿಲ್ಲ.
- ಈ ಸರ್ಕಾರ ಹೇಳಿದ್ದ ದರವನ್ನೂ ರೈತರಿಗೆ ನೀಡುತ್ತಿಲ್ಲ. ರೈತರಿಗೆ 3-4 ಸಾವಿರ ಕೋಟಿ ರು. ನೀಡಲು ಸಾಧ್ಯವಿಲ್ಲವಂತೆ. ಅಂತಹ ಸರ್ಕಾರದ ವಿರುದ್ಧ ಹೋರಾಡಲು ನಮಗೆ ನೈತಿಕ ಶಕ್ತಿ ಇದೆ.
- ನಾನೀಗ ದೈಹಿಕ ಆರೋಗ್ಯ ಸಮಸ್ಯೆ ಸರಿಪಡಿಸಿಕೊಂಡಿದ್ದೇನೆ. 20-30 ಕಿ.ಮೀ. ಪಾದಯಾತ್ರೆ ಮಾಡಬಲ್ಲ ಸಾಮರ್ಥ್ಯ ಗಳಿಸಿಕೊಂಡಿದ್ದೇನೆ. ಮತ್ತೆ ಹೋರಾಟಕ್ಕೆ ಇಳಿಯುತ್ತೇನೆ.
- ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್ ದರ ಇಳಿಯಿತು ಎಂದು ಬಿಜೆಪಿ ಹೇಳಿಕೊಳ್ಳುತ್ತಿದ್ದಾರೆ. ಇದು ಸುಳ್ಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿದ್ದೇ ಕಾರಣ. ದೇವೇಗೌಡರೇ ಪ್ರಧಾನಿಯಾಗಿದ್ದರೆ ಪೆಟ್ರೋಲ್ ಬೆಲೆ 18-20 ರು. ಇರುತ್ತಿತ್ತು.
ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಎಚ್.ಡಿ. ರೇವಣ್ಣ, ದತ್ತ ಸೇರಿದಂತೆ ಪಕ್ಷದ ಸಂಸದರು, ಶಾಸಕರು, ಹಿರಿಯ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.