ಸಾರಿಗೆ ಮುಷ್ಕರ, ಬೆಂಗಳೂರಿನಲ್ಲಿ ಬಸ್ ಗಳ ಬರ
ಬೆಂಗಳೂರು, ಏ. 30: ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಗಳೂರಲ್ಲಿ ಮಿಶ್ರ ಪ್ರತಿಕ್ರಿಯೆ. ಮುಷ್ಕರದ ಬಗ್ಗೆ ಗೊತ್ತಿಲ್ಲದೇ ನಿಲ್ದಾಣಕ್ಕೆ ಆಗಮಿಸಿದವರಿಗೆ ಮನೆಗೂ ತೆರಳಲಾರದ, ಊರಿಗೂ ತೆರಳಲಾರದ ಸ್ಥಿತಿ. ಹೆಚ್ಚಿನ ಹಣ ವಸೂಲಿಗಿಳಿದ ಆಟೋ ಮತ್ತು ಟ್ಯಾಕ್ಸಿ ಕ್ಯಾಬ್ ಗಳು, ಡ್ಯೂಟಿ ಇಲ್ಲದಿದ್ದರೂ ಬಸ್ ಕಾಯುವ ಜವಾಬ್ದಾರಿ ಚಾಲಕರದ್ದು... ಇವೆಲ್ಲ ಗುರುವಾರದ ಮುಷ್ಕರದ ವೇಳೆ ಕಂಡುಬಂದ ದೃಶ್ಯಗಳು.
ನಗರದ ಶಿವಾಜಿನಗರ, ಮೆಜೆಸ್ಟಿಕ್, ಶಾಂತಿನಗರ, ಜಯನಗರ ಸೇರಿದಂತೆ ಯಾವ ಬಸ್ ನಿಲ್ದಾಣಗಳಿಂದಲೂ ಬಿಎಂಟಿಸಿ ಬೆಳಗ್ಗೆ ಹೊರಡಲಿಲ್ಲ. ಆದರೆ ನಿಮಾನ್ಸ್, ಜಯದೇವ, ವಿಕ್ಟೋರಿಯಾ ಆಸ್ಪತ್ರೆಗೆ ತೆರಳುವವರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. 11 ಗಂಟೆ ನಂತರ ಕೆಲ ಬಸ್ ಗಳ ಸಂಚಾರ ಆರಂಭ ಮಾಡಲಾಯಿತಾದರೂ ಅದಾಗಲೇ ಜನರು ಬೇರೆ ದಾರಿ ಕಂಡುಕೊಂಡಿದ್ದರು.[ಗುರುವಾರದ ಸಾರಿಗೆ ಮುಷ್ಕರ ಯಾಕಾಗಿ?]
ಮುಷ್ಕರದ ಬಿಸಿ ನಿಜವಾಗಿ ತಟ್ಟಿದ್ದು ಯಾರಿಗೆ? ಕೇಂದ್ರ ಸರ್ಕಾದರದ ಮೇಲೆ ನಿಜಕ್ಕೂ ಇದು ಒತ್ತಡ ತರುವುದೇ? ನಷ್ಟವಾಗಿದ್ದು ಯಾರಿಗೆ? ಎಂಬ ಹಲವಾರು ಅಂಶಗಳನ್ನು ನಾವು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ಬಸ್ ಮುಷ್ಕರ ಯಾಕೆ?
ಕೇಂದ್ರ ಸರ್ಕಾರದ "ರಸ್ತೆ ಸಾರಿಗೆ ಮತ್ತು ಸುರಕ್ಷತಾ ವಿಧೇಯಕ- 2015 ವಿರೋಧಿಸಿ ನಾನಾ ಸಾರಿಗೆ ನೌಕರರ ಒಕ್ಕೂಟ ಹಾಗೂ ಕಾರ್ಮಿಕ ಸಂಘಟನೆಗಳು ಗುರುವಾರ ಮುಷ್ಕರಕ್ಕೆ ಕರೆ ನೀಡಿದ್ದವು. ಹೊಸ ಕಾನೂನು ಖಾಸಗೀಕರಣಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ಸಂಘಟನೆಗಳ ಪ್ರಮುಖ ಆರೋಪ.
ಸಂಜೆ ಬಸ್ ಸಂಚಾರ ಎಂದಿನಂತೆ
ಸಂಘಟನೆಗಳು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಿದ್ದು ಸಂಜೆ ಎಂದಿನಂತೆ ಬಸ್ ಸಂಚಾರ ಆರಂಭವಾಗಲಿದೆ. ಹೊರ ರಾಜ್ಯಗಳು ಮತ್ತು ಜಿಲ್ಲೆಗಳಿಗೂ ಬಸ್ ಸಂಚರಿಸಲಿದೆ.
ಮಿಶ್ರ ಪ್ರತಿಕ್ರಿಯೆ
ಮೊದಲು ಹೇಳಿದಂತೆ ಸಾರ್ವಜನಿಕ ಸಾರಿಗೆ ಜತೆಗೆ ಆಟೋಗಳು ಬೆಂಬಲ ನೀಡಿದ್ದವು. ಆದರೆ ಗುರುವಾರ ಬೆಳಗ್ಗೆ ಅರ್ಧದಷ್ಟು ಆಟೋಗಳು ರಸ್ತೆಗಿಳಿದಿದ್ದು ನಾಗರೀಕರಿಗೆ ಅನುಕೂಲವಾಗಿ ಪರಿಣಮಿಸಿತು.
ಬುಕಿಂಗ್ ಫುಲ್ ಆಗಿದೆ
ರಾಜ್ಯದ ವಿವಿಧ ಜಿಲ್ಲೆಗಳಿಗೆ ಮತ್ತು ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಗೋವಾ ಮತ್ತು ಮಹಾರಾಷ್ಟ್ರಕ್ಕೆ ದಿನನಿತ್ಯ ಚಲಿಸುವ 10 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್ಗಳು ಸಂಜೆ ಎಂದಿನಂತೆ ನಿಗದಿತ ಮಾರ್ಗಗಳಲ್ಲಿ ಕಾರ್ಯಾಚರಣೆ ಆರಂಭಿಸಲಿವೆ. ಗುರುವಾರದ ಟಿಕೆಟ್ ಬುಕಿಂಗ್ ಸಹ ಫುಲ್ ಆಗಿದೆ ಎಂದು ಖಾಸಗಿ ಬಸ್ ಮಾಲೀಕರು ತಿಳಿಸಿದ್ದಾರೆ.
ಕೆಆರ್ ಪೇಟೆಗೆ ಹೋಗಬೇಕು
ನನಗೆ ಮುಷ್ಕರದ ಬಗ್ಗೆ ಗೊತ್ತಿರಲಿಲ್ಲ. ಬೆಳಗ್ಗೆ ಶಾಂತಿನಗರ ಬಸ್ ನಿಲ್ದಾಣಕ್ಕೆ ಆಗಮಿಸಿದಾಗಲೇ ಅರಿವಿಗೆ ಬಂತು. ಜೆಪಿ ನಗರದಲ್ಲಿರುವ ತಂಗಿಯ ಮನೆಗೆ ಬಂದಿದ್ದೆ. ಕೆಆರ್ ಪೇಟೆಗೆ ಹೋಗಬೇಕಿತ್ತು. ಈಗ ಬಸ್ ನಿಲ್ದಾಣದಲ್ಲಿ ದಿನ ಕಳೆಯುವಂತಾಗಿದೆ ಎಂದು ಶಿವನಂಜಪ್ಪ ಮುಷ್ಕರ ಮಾಡಿದವರಿಗೆ ಹಿಡಿಶಾಪ ಹಾಕಿದರು.
ಸಾಲು ಹಚ್ಚಿದ ಬಸ್ ಗಳು
ಶಾಂತಿನಗರ ಡಿಪೋದಲ್ಲಿ ಬಸ್ ಗಳು ಸಾಲುಗಟ್ಟಿ ನಿಂತಿದ್ದವು. ಬಿಎಂಟಿಸಿ ಬಸ್ ಗಳು, ಐರಾವತ, ಸಾಮಾನ್ಯ ಬಸ್ ಗಳು ಎಲ್ಲದಕ್ಕೂ ಗುರುವಾರ ರಜೆ ಸಿಕ್ಕಿತ್ತು. ಸುಮಾರು ಒಂದು ಸಾವಿರಕ್ಕೂ ಅಧಿಕ ಬಸ್ ಗಳು ನಿಂತಿದ್ದವು. ಡಿಪೋದಲ್ಲಿ ಜಾಗವಿಲ್ಲದೆ ಹೊರಗಿನ ರಸ್ತೆಯಲ್ಲೂ ಬಸ್ ಗಳನ್ನು ಪಾರ್ಕ್ ಮಾಡಲಾಗಿತ್ತು.
ಆಟೋದವರ ಜತೆ ಮಾತುಕತೆ
ಬೆಳಗ್ಗೆಯಿಂದ ಬಸ್ ಇಲ್ಲದೇ ಪರಿತಪಿಸಿದ್ದ ಹಿರಿಯ ನಾಗರೀಕರೊಬ್ಬರುಮನೆಗೆ ತೆರಳಲು ಆಟೊದವನ ಜತೆ ಮಾತುಕತೆ ನಡೆಸಿದರು. ಆದರೆ ಅವರು ಹೇಲಿದ ಜಾಗಕ್ಕೆ ಆಟೋದವರು ಬರಲು ಒಪ್ಪದ ಕಾರಣ ಪುನಃ ಬಸ್ ನಿಲ್ದಾಣಕ್ಕೆ ಆಗಮಿಸಿ ಕುಳಿತುಕೊಳ್ಳಬೇಕಾಯಿತು.
ಯಾವ ಬಸ್ ಆದ್ರೂ ಸಿಕ್ಕರೆ ಸಾಕು
ಬಸ್ ಇಲ್ಲದೇ ಬಂದು ಸಿಕ್ಕಿಹಾಕಿಕೊಂಡಿದ್ದೇವೆ. ನಾವಿರುವ ಏರಿಯಾದ ಸಮೀಪ ತೆರಳುವ ಯಾವ ಬಸ್ ಆದರೂ ಸಿಕ್ಕರೆ ಸಾಕು ಎಂದು ಜನರು ಶಾಂತಿನಗರದಲ್ಲಿ ಸಿಕ್ಕ ಬಸ್ ಏರಿದರು.
ಬಿಕೋ ಎನ್ನುತ್ತಿರುವ ನಿಲ್ದಾಣ
ಪ್ರತಿದಿನ ಜನ ಜಂಗುಳಿಯಿಂದ ತುಂಬಿರುತ್ತಿದ್ದ ಶಾಂತಿನಗರ ಬಸ್ ನಿಲ್ದಾಣ ಗುರುವಾರ ಬಿಕೋ ಎನ್ನುತ್ತಿತ್ತು. ಆಗಮಿಸಿದ ಕೆಲ ನಾಗರೀಕರು ಪಕ್ಕದ ಬೇಂಚ್ ಮೇಲೆ ಕುಳಿತುಕೊಂಡು ಮನೆಯ ದಾರಿ ಹುಡುಕುತ್ತಿದ್ದರು.