ಬೆಂಗಳೂರಿಗರ ದಿನಚರಿ ಬದಲಿಸಿದ ಬಿಎಂಟಿಸಿ ಮುಷ್ಕರ
ಬೆಂಗಳೂರು, ಜುಲೈ 26 : ಬಿಎಂಟಿಸಿ ಬಸ್ ಇಲ್ಲದಿದ್ದರೆ ಏನಾಯಿತು? ಮೆಟ್ರೋ ಇದೆಯಲ್ಲ, ಇದು ಸಾಮಾನ್ಯ ಬೆಂಗಳೂರಿಗರಿಂದ ಕೇಳಿಬಂದ ಮಾತು.
ಸಾರಿಗೆ ಮುಷ್ಕರ ಎಂದು ಅರಿವಾದ ತಕ್ಷಣವೇ ಜನ ಮೆಟ್ರೋ ಕಡೆ ವಾಲಿದ್ದಾರೆ. ಮೈಸೂರು ರಸ್ತೆ ಯಿಂದ ಬೈಯಪ್ಪನಹಳ್ಳಿಗೆ ಸಂಪರ್ಕ ಸಾಧ್ಯವಾಗಿರುವುದರಿಂದ ಜನರಿಗೆ ಮೆಜೆಸ್ಟಿಕ್ ತಲುಪುವುದು ಕಷ್ವೇನಾಗಿಲ್ಲ.[ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]
ಬೆಂಗಳೂರಿಗರ ದಿನಚರಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಎದ್ದು ಬಿಎಂಟಿಸಿ ಹಿಡಿದು ತೆರಳುತ್ತಿದ್ದವರು, ಸ್ವಂತ ವಾಹನವನ್ನೋ ಅಥವಾ ಆಟೋವನ್ನೋ ಏರಿ ಹತ್ತಿರದ ಮೇಟ್ರೋ ನಿಲ್ದಾಣ ತಲುಪುತ್ತಾರೆ. ಅಲ್ಲಿಂದ ಬೇಕಾದಲ್ಲಿಗೆ ತೆರಳಿ ಮತ್ತೆ ಆಟೋ ಹಿಡಿದು ಕಚೇರಿಗೆ ತೆರಳುತ್ತಿದ್ದಾರೆ. ಐದು ಕನಿಮಿಷಕ್ಕೆ ಒಂದು ಮೆಟ್ರೋ ರೈಲು ಬಿಡುತ್ತಿರುವುದರಿಂದ ಯಾವ ತಾಪತ್ರಯ ಆಗಿಲ್ಲ.
ಅವಧಿ ವಿಸ್ತರಣೆ
ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದಲ್ಲಿ ರಾತ್ರಿ 11 ಗಂಟೆಯ ತನಕ ಸೋಮವಾರ ಮೆಟ್ರೋ ಸಂಚಾರವನ್ನು ವಿಸ್ತರಣೆ ಮಾಡಲಾಗಿತ್ತು. ಮಂಗಳವಾರ ಸಹ ಇದೇ ರೀತಿಯಲ್ಲಿ ಸೇವೆ ಒದಗಿಸಲಾಗುತ್ತದೆ.
ಮುಂಜಾನೆ ಜನಜಂಗುಳಿ
ಮೆಟ್ರೋ ದಲ್ಲಿ ಎಂದಿಗಿಂತ ಹೆಚ್ಚಿನ ಜನ ಸಂಚಾರ ಮಾಡುತ್ತಿದ್ದಾರೆ. ಅದರಲ್ಲೂ ಮುಂಜಾನೆ 7.30 ರಿಂದ 10 ಗಂಟೆ ಅವಧಿಯಲ್ಲಿ ಮೆಟ್ರೋ ರೈಲುಗಳು ಕಿಕ್ಕಿರಿದಿದ್ದವು.
ಮೂರು ಬೋಗಿಯ ರೈಲು
ಬೆಳಗ್ಗಿನ ಜನನಂಗುಳಿಗೆ ಮೂರು ಬೋಗಿಯ ಮೆಟ್ರೋ ರೈಲು ಸಾಕಾಗುವುದಿಲ್ಲ ಎಂದೇ ಅನಿಸಿತ್ತು. ಆದರೆ 11 ಗಮಟೆ ನಂತರ ಜನ ಸಂಚಾರ ಕಡಿಮೆಯಾಗುತ್ತ ಬಂದಿತು.
ಮುಷ್ಕರದ ಬಿಸಿ ಇಲ್ಲ
ಬಿಎಂಟಿಸಿ ಬಸ್ ಇಲ್ಲ ಎಂದರೆ ಸಂಚಾರ ವ್ಯವಸ್ಥೆ ಹದಗೆಡುತ್ತದೆ ಎಂದು ಮಾಡಿದ್ದ ನಿರೀಕ್ಷೆ ಹುಸಿಯಾಗಿದೆ. ಆಟೋ, ಕ್ಯಾಬ್, ಸ್ವಂತ ವಾಹನ, ನಮ್ಮ ಮೆಟ್ರೋ ಸಮಸ್ಯೆ ಬಿಗಡಾಯಿಸುವುದನ್ನು ತಡೆದಿವೆ.
ತುಂಬಿದ ಪಾರ್ಕಿಂಗ್ ಜಾಗ
ಮೆಟ್ರೋ ನಿಲ್ದಾಣದ ಅಕ್ಕಪಕ್ಕ, ಕೆಳಗಡೆ ಉಚಿತ ಪಾರ್ಕಿಂಗ್ ಅವಕಾಶ ಕೊಟ್ಟಿದ್ದು ಜನರಿಗೆ ಉಪಕಕಾರಿಯಾಗಿ ಪರಿಣಮಿಸಿದೆ. ನಾಯಂಡಹಳ್ಳಿಯ ಪಾರ್ಕಿಂಗ್ ಜಾಗ ಮಂಗಳವಾರ ತುಂಬಿತ್ತು.
ಖಾಸಗಿ ಬಸ್ ಸಂಚಾರ
ಸೋಮವಾರದಂತೆ ಮಂಗಳವಾರ ಸಹ ಮೆಜೆಸ್ಟಿಕ್ ನಿಂದ ಖಾಸಗಿ ಬಸ್ ಸಂಚಾರ ನಿರಂತರವಾಗಿದೆ. ಪ್ರಯಾಣಿಕರಿಗೆ ಪೊಲೀಸರು ಮಾಹಿತಿ ನೀಡುತ್ತಿದ್ದು ಎಲ್ಲ ವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದಾರೆ.