ಕೆಪಿಎಸ್ ಸಿ: 316 ಅಭ್ಯರ್ಥಿಗಳು ನೇಮಕ ಆಗುವರೇ?
ಬೆಂಗಳೂರು,ಜನವರಿ 13: 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಅವ್ಯವಹಾರ ಸಂಬಂಧ ಸಿಐಡಿಗೆ ಪ್ರಕರಣ ವಹಿಸಲಾಗಿತ್ತು. ಸಿಐಡಿ ವರದಿ ಹಿನ್ನೆಲೆ ಹೆಸರಿಸಿರುವ 46 ಅಭ್ಯರ್ಥಿಗಳನ್ನು ವಜಾಗೊಳಿಸಿ ಉಳಿದವರನ್ನು ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರಕಾರ ಮುಂದಾಗಿದೆ. ಅದರೆ ಇದರಲ್ಲಿ ಕೆಎಟಿ ನಿಯಮದ ತೊಡಕಿದೆ.
2011ನೇ ಸಾಲಿನ 'ಎ' ಗ್ರೂಪ್ನ162 ಮತ್ತು 'ಬಿ' ಗ್ರೂಪ್ನ 200 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು ವರದಿಯಾಗಿತ್ತು. ಈ ಸಂಬಂಧ ಎ.ಜಿರವರ ಸಲಹೆ ಮೇರೆಗೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ತನಿಖೆ ನಂತರ 46 ಜನ ಕಳಂಕಿತರು ಎಂದು ವರದಿನೀಡಿತ್ತು.[ಕೆಪಿಎಸ್ ಸಿಯಿಂದ 1203 ಹುದ್ದೆಗೆ ಅರ್ಜಿ: ಜ.15 ಕೊನೆ ದಿನ]
ಸಿಐಡಿ ತನಿಖೆ ಅಂತಿಮ ವರದಿ ಅನುಸಾರ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ನಿಯಮದ ಪ್ರಕಾರ ಎಲ್ಲರಿಗೂ ಸರಕಾರ ನೇಮಕಾತಿ ಆದೇಶ ನೀಡಬೇಕು ಎಂದು ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ) ಆದೇಶದಲ್ಲಿದೆ. ಅಲ್ಲದೆ ಸಿಐಡಿ ವರದಿಯಲ್ಲಿರುವ 46 ಮಂದಿಯನ್ನು ಅಡ್ವೊಕೇಟ್ ಜನರಲ್ (ಎ.ಜಿ)ಯವರೇ ಪಟ್ಟಿಮಾಡಿದ್ದರು ಎಂದು ಮೂಲಗಳು ಹೇಳಿವೆ.
ಸಿಐಡಿ ವರದಿ ಬರುವವರೆಗೂ ಅಧಿಸೂಚನೆಯನ್ನೇ ಸರಕಾರ ರದ್ದುಪಡಿಸಿತ್ತು. ಈ ಕ್ರಮವನ್ನು ಕೆಎಟಿ ಅ. 19ರಂದು ವಜಾಗೊಳಿಸಿತ್ತು. ಕೆಎಟಿ ಆದೇಶ ಕುರಿತು ಹೈಕೋರ್ಟಿಗೆ ಮೇಲ್ಮನವಿ ಸಂಬಂಧ ಎ.ಜಿ ಮಧುಸೂದನ್ ನಾಯಕ್ ಅವರಿಂದ ಸರಕಾರ ಅಭಿಪ್ರಾಯ ಕೇಳಿತ್ತು. ಹೀಗಾಗಿ ಸಿಐಡಿ ತನಿಖೆಯಲ್ಲಿ ಹೆಸರಿಸಲಾದ ಅಭ್ಯರ್ಥಿಗಳನ್ನು ಬಿಟ್ಟು ಮಿಕ್ಕವರನ್ನು ನೇಮಕ ಮಾಡಲು ಸಲಹೆ ನೀಡಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.[ಕೆಪಿಎಸ್ ಸಿ: ವ್ಯಕ್ತಿತ್ವ ಪರೀಕ್ಷೆ ನಿಯಮ ಅಂತಿಮಗೊಳಿಸಿದ ಸರಕಾರ]
ಇನ್ನು ಈ ಕ್ರಮದ ಬಗ್ಗೆ ಎ.ಜಿ ಸರಕಾರಕ್ಕೆ ಸಲಹೆಯನ್ನು ರವಾನೆ ಮಾಡಿದ್ದು, ಎಲ್ಲವನ್ನು ಪರಿಶೀಲಸಿದ ಬಳಿಕ ಮುಖ್ಯಮಂತ್ರಿಗಳಿಗೆ ಕಳುಹಿಸಲಾಗುತ್ತದೆ. ಈ ಹಿಂದೆ ಅಧಿಸೂಚನೆಯನ್ನು ರದ್ದುಗೊಳಿಸುವ ಮೊದಲು ಸರಕಾರ ಕಳಂಕಿತರನ್ನು ಬೇರ್ಪಡಿಸುವ ಪ್ರಯತ್ನವನ್ನೇ ಮಾಡಿಲ್ಲ. ರದ್ದು ಗೊಳಿಸುವುದು ಕಾನೂನು ಬಾಹಿರವಾದ್ದರಿಂದ ಆದೇಶ ಕೈಸೇರಿದ ಎರಡು ತಿಂಗಳ ಒಳಗಾಗಿ ಎಲ್ಲರನ್ನು ನೇಮಿಸಬೆಕು ಎಂಬುದು ಕೆಎಟಿ ವಾದವಾಗಿದೆ.