ಆದಿಚುಂಚನಗಿರಿ ಸ್ವಾಮೀಜಿ ಭೇಟಿಯಾದ ಪರಂ, ಇದು ಲಾಬಿಯ ಭಾಗವೇ?
ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಬೆಂಗಳೂರಿನ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದ ನಾಥ ಸ್ವಾಮೀಜಿಯನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ
ಬೆಂಗಳೂರು, ಮೇ 20: ಗೃಹ ಸಚಿವ- ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಬೆಂಗಳೂರಿನ ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ನಿರ್ಮಲಾನಂದ ನಾಥ ಸ್ವಾಮೀಜಿ ಜತೆಗೆ ಚರ್ಚೆ ನಡೆಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ವಿಧಾನಸಭೆ ಚುನಾವಣೆವರೆಗೆ ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲಿ ಮುಂದುವರಿಯಬೇಕು ಎಂಬುದು ಅವರ ಇಚ್ಛೆ.
ಆದರೆ, ದೆಹಲಿ ಮಟ್ಟದಲ್ಲಿ ತೀವ್ರ ಲಾಬಿ ಆರಂಭವಾಗಿದ್ದು, ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ್ ಹಾಗೂ ಒಕ್ಕಲಿಗ ಸಮುದಾಯದ ಡಿಕೆ ಶಿವಕುಮಾರ್ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ರಾಜ್ಯಕ್ಕೆ ಈಚೆಗೆ ಭೇಟಿ ನೀಡಿದ್ದ ಕಾಂಗ್ರೆಸ್ ಉಸ್ತುವಾರಿ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆದರೆ ಅಧ್ಯಕ್ಷ ಸ್ಥಾನದ ಆಯ್ಕೆ ಹೈ ಕಮಾಂಡ್ ಗೆ ಬಿಟ್ಟಿದ್ದು ಎಂದು ಸಹ ತಿಳಿಸಿದ್ದರು.[ಹೈಕಮಾಂಡ್ ಬುಲಾವ್: ದೆಹಲಿಗೆ ದೌಡಾಯಿಸಿದ ಪರಮೇಶ್ವರ್]
ಈ ಎಲ್ಲದರ ಹಿನ್ನೆಲೆಯಲ್ಲಿ ತಮಗೂ ವಿವಿಧ ಸಮುದಾಯದ ಬೆಂಬಲ ಇದೆ ಎಂದು ತೋರಿಸಿಕೊಳ್ಳುವ ಸಲುವಾಗಿಯೇ ಈ ಭೇಟಿ ಮಾಡಿದ್ದರೆ ಪರಂ ಎಂಬ ಚರ್ಚೆ ನಡೆದಿದೆ.ಈ ಭೇಟಿಯಲ್ಲಿ ರಾಜಕಾರಣ ಏನೂ ಇಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ. ಆದರೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯುವ ಸಂದರ್ಭದಲ್ಲಿ ಇಂಥ ವಿಚಾರ ಮಹತ್ವ ಪಡೆದುಕೊಳ್ಳುತ್ತದೆ. ಇದೇ ವೇಳೆ ಶಾಸಕ-ನಟ ಅಂಬರೀಶ್ ಜತೆಗೂ ಪರಂ ಚರ್ಚೆ ನಡೆಸಿದ್ದಾರೆ.