ಎನ್ಐಎ ಚಾರ್ಜ್ಶೀಟ್ನಲ್ಲಿ ಬಯಲಾಯ್ತು ರುದ್ರೇಶ್ ಹಂತಕರ ಸಂಚು
ಹತ್ಯೆಯಲ್ಲಿ 5 ಜನ ಪಾಲ್ಗೊಂಡಿದ್ದರು ಎಂದು ಎನ್ಐಎ ದೋಷಾರೋಪ ಪಟ್ಟಿ ಹೇಳುತ್ತಿದೆ. ಇನ್ನು ಹತ್ಯೆಯಲ್ಲಿ ಪಾಲ್ಗೊಂಡಿದ್ದವರೆಲ್ಲಾ ಪಿಎಫ್ಐ ಹಾಗೂ ಇದರ ರಾಜಕೀಯ ವಿಭಾಗ ಎಸ್.ಡಿ.ಪಿ.ಐ ಕಾರ್ಯಕರ್ತರು ಎಂದು ಹೇಳಲಾಗಿದೆ.
ಬೆಂಗಳೂರು, ಏಪ್ರಿಲ್ 21: ಆರ್.ಎಸ್.ಎಸ್ ಕಾರ್ಯಕರ್ತ ರುದ್ರೇಶ್ ಹಂತಕರು ಸಂಘದ ಸಮವಸ್ತ್ರದಲ್ಲಿದ್ದ ಕನಿಷ್ಠ ಇಬ್ಬರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂಬ ಸ್ಪೋಟಕ ಸತ್ಯ ಬಯಲಾಗಿದೆ. ರಾಷ್ಟ್ರೀಯ ತನಿಖಾ ದಳ ಕೋರ್ಟಿಗೆ ಇಂದು ಚಾರ್ಜ್ ಶೀಟ್ ಸಲ್ಲಿಸಿದ್ದು ಅದರಲ್ಲಿ ಈ ಎಲ್ಲಾ ಅಂಶಗಳು ಉಲ್ಲೇಖವಾಗಿವೆ.
ಹತ್ಯೆಯಲ್ಲಿ 5 ಜನ ಪಾಲ್ಗೊಂಡಿದ್ದರು ಎಂದು ಎನ್ಐಎ ದೋಷಾರೋಪ ಪಟ್ಟಿ ಹೇಳುತ್ತಿದೆ. 2016ರ ಅಕ್ಟೋಬರಿನಲ್ಲಿ ಶಿವಾಜಿನಗರದಲ್ಲಿ ಹಾಡ ಹಗಲೇ ರುದ್ರೇಶ್ ಹತ್ಯೆ ನಡೆದಿತ್ತು. ಇದಾದ ನಂತರ ತನಿಖೆಯನ್ನು ಎನ್ಐಎ ಕೈಗೆತ್ತಿಕೊಂಡಿತ್ತು.[ರುದ್ರೇಶ್ ಹಂತಕರಿಗೆ ಭಯೋತ್ಪಾದಕ ನಂಟು, 'ಎನ್ಐಎ'ನಿಂದ ಸ್ಪೋಟಕ ಮಾಹಿತಿ]
ಇನ್ನು ಹತ್ಯೆಯಲ್ಲಿ ಪಾಲ್ಗೊಂಡಿದ್ದವರೆಲ್ಲಾ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಹಾಗೂ ಇದರ ರಾಜಕೀಯ ವಿಭಾಗ ಎಸ್.ಡಿ.ಪಿ.ಐ ಕಾರ್ಯಕರ್ತರು ಎಂದು ಹೇಳಿದೆ. ಆರೋಪಿಗಳಲ್ಲಿ ಯಾರಿಗೂ ರುದ್ರೇಶ್ ಮೇಲೆ ವೈಯಕ್ತಿಕ ದ್ವೇಷ ಇರಲಿಲ್ಲ ಎಂದು ಜಾರ್ಜ್ ಶೀಟ್ ಸ್ಪಷ್ಟಪಡಿಸಿದೆ.
ತನಿಖೆಯ ಪ್ರಕಾರ ಕೊಲೆ ಒಂದು ಭಯೋತ್ಪಾದನಾ ಕೃತ್ಯ ಎಂದು ಹೇಳಲಾಗಿದೆ. ಒಂದು ವರ್ಗದ ಜನರಲ್ಲಿ ಭಯ ಬಿತ್ತಲು ಈ ಕೃತ್ಯ ಎಸಗಲಾಗಿದೆ. ಕೊಲೆಗೂ ಮುನ್ನ ಬೆಂಗಳೂರಿನ ಚೋಟಾ ಚಾರ್ ಮಿನಾರ್ ಪಕ್ಕದ ಅಕ್ಸಾ ಮಸೀದಿಯಲ್ಲಿ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಎನ್ಐಎ ಹೇಳಿದೆ.
ಈ ಸಂಚಿನಲ್ಲಿ ಆರ್.ಎಸ್.ಎಸ್ ಯೂನಿಫಾರ್ಮ್ ನಲ್ಲಿರುವ ಕನಿಷ್ಠ ಇಬ್ಬರನ್ನು ಕೊಲ್ಲಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಎಂದು ಜಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ. ಕಾಫಿರರನ್ನು ಕೊಲ್ಲುವ ಮೂಲಕ ಇಸ್ಲಾಂ ಮತ್ತು ಜಿಹಾದ್ ನ ಗುರಿಯನ್ನು ನಾವು ಸಾಧಿಸುತ್ತಿದ್ದೇವೆ ಎಂಬ ನಂಬಿಕೆಯಲ್ಲಿ ನಾವು ಈ ಕೃತ್ಯ ಎಸಗಿದ್ದಾಗಿ ಆರೋಪಿಗಳು ಹೇಳಿದ್ದಾರೆ ಎಂದೂ ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.