ಕೆಎಸ್ ಈಶ್ವರಪ್ಪ ಅವರ ಪಿಎ ವಿನಯ್ ರನ್ನು ಅಪಹರಿಸಲು ಯತ್ನ
ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅವರ ಮೇಲೆ ಹಲ್ಲೆ ನಡೆಸಿ, ಕಿಡ್ನಾಪ್ ಮಾಡುವ ಯತ್ನ ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಈ ಘಟನೆಯಲ್ಲಿ ವಿನಯ್ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಬೆಂಗಳೂರು, ಮೇ 11: ವಿಧಾನಪರಿಷತ್ ವಿಪಕ್ಷ ನಾಯಕ, ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅವರ ಮೇಲೆ ಹಲ್ಲೆ ನಡೆಸಿ, ಕಿಡ್ನಾಪ್ ಮಾಡುವ ಯತ್ನ ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಈ ಘಟನೆಯಲ್ಲಿ ವಿನಯ್ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಮಹಾಲಕ್ಷ್ಮಿ ಲೇ ಔಟ್ ಬಳಿ ತೆರಳುತ್ತಿದ್ದಾಗ ದುಷ್ಕರ್ಮಿಗಳ ಗುಂಪೊಂದು ಘೆರಾವ್ ಮಾಡಿದೆ. ಮಾರಾಕಾಸ್ತ್ರಗಳನ್ನು ಹೊಂದಿದ್ದರೂ ಹಲ್ಲೆ ಮಾಡಿಲ್ಲ. ಆದರೆ, ವಿನಯ್ ಅವರ ಕೈ ತಿರುಚಿ, ಎಳೆದಾಡಲಾಗಿದೆ. ಈ ಘಟನೆಯಲ್ಲಿ ವಿನಯ್ ಅವರ ಕೈ ಮೂಳೆ ಮುರಿದಿದೆ. ಸದ್ಯ ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
'ಎಲ್ಲರೂ ಕನ್ನಡದಲ್ಲೇ ಮಾತನಾಡುತ್ತಿದ್ದರು. ಯಾರ ಮುಖವೂ ಪರಿಚಿತವಲ್ಲ. ಎಲ್ಲರೂ ಹೊಸಬರು, ನನ್ನ ಕೈ ಎಳೆದು ಕಾರಿನೊಳಗೆ ತಳ್ಳಲು ಯತ್ನಿಸಿದರು' ಎಂದು ವಿನಯ್ ಅವರು ಖಾಸಗಿ ವಾಹಿನಿ ಜತೆ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿದ್ದಾರೆ.
ವಿನಯ್ ಜೋರಾಗಿ ಕಿರುಚಾಡಿದ್ದರಿಂದ ಹತ್ತಿರದಲ್ಲಿದ್ದ ಸಾರ್ವಜನಿಕರು ಇವರಿದ್ದ ಕಡೆಗೆ ಬರುತ್ತಿದ್ದಂತೆ ವಿನಯ್ ಅವರನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಯಶವಂತಪುರ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.