ಈ ಟ್ರಾಫಿಕ್ ಪೊಲೀಸ್ ತೋರಿದ ಮಾನವೀಯತೆ ಎಂತದ್ದು ನೋಡಿ!
ನಿಂತಿರುವ ಜಾಗ ಮಹಿಳೆಗೆ ಸುರಕ್ಷಿತವಲ್ಲ ಎಂದರಿತ ಬೆಂಗಳೂರು ಟ್ರಾಫಿಕ್ ಎಎಸ್ಐ ಒಬ್ಬರು ತನ್ನ ವಾಹನವನ್ನೇ ಮಹಿಳೆಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಬೆಂಗಳೂರು, ಜ 28: ಅದು ರಾತ್ರಿ 8.30ರ ಸಮಯ, ಒಬ್ಬಂಟಿಯಾಗಿ ಮಹಿಳೆ ನಿಂತಿದ್ದ ಸ್ಥಳ ಸುರಕ್ಷಿತ ಅಲ್ಲ ಎನ್ನುವುದನ್ನು ಅರಿತ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಗೆ ತನ್ನ ದ್ವಿಚಕ್ರ ವಾಹನವನ್ನು ನೀಡಿ ನೆರವಾದ ಘಟನೆ ನಡೆದಿದೆ.
ಬೆಂಗಳೂರು ಸಂಚಾರಿ ಪೊಲೀಸ್ ಎಎಸ್ಐ ತೋರಿದ ಮಾನವೀಯತೆ ಬಗ್ಗೆ ನಿರ್ಮಲಾ ರಾಜೇಶ್ ಎನ್ನುವವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು ಹೀಗೆ..
ದಿನಾಂಕ 25.01.2017, ರಾತ್ರಿ 8.30ರ ಸುಮಾರಿಗೆ ಕಚೇರಿ ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದೆ. ಜೆ ಸಿ ನಗರದ ಟಿವಿ ಟವರ್ ಬಳಿ ಗಾಡಿಯಲ್ಲಿ ಪೆಟ್ರೋಲ್ ಖಾಲಿಯಾಯಿತು. ನನ್ನ ಪತಿಗೆ ಫೋನ್ ಮಾಡಿ ಈ ವಿಷಯ ತಿಳಿಸಿದೆ.
ಹಾಗಾಗಿ, ಬೇರೆ ದಾರಿಯಿಲ್ಲದೇ ಪತಿ ಬರುವುದನ್ನೇ ಕಾಯುತ್ತಿದ್ದೆ. ಆಗ ಕರ್ತವ್ಯದಲ್ಲಿದ್ದ ಕೆ ಜಿ ಹಳ್ಳಿ ಸಂಚಾರಿ ಠಾಣೆಯ ಎಎಸ್ಐ ನಾರಾಯಣ್ ಎನ್ನುವವರು ಅದೇ ದಾರಿಯಲ್ಲಿ ಬರುತ್ತಿದ್ದರು. ಯಾಕೆ ಇಲ್ಲಿ ನಿಂತಿದ್ದೀರಾ ಎಂದು ಪ್ರಶ್ನಿಸಿದರು.
ಪೆಟ್ರೋಲ್ ಖಾಲಿಯಾಗಿರುವ ವಿಚಾರವನ್ನು ಅವರಿಗೆ ತಿಳಿಸಿದೆ. ನಿಮ್ಮ ಪತಿ ಬರುವವರೆಗೆ ಇಲ್ಲಿ ನೀವು ಒಬ್ಬರೇ ಕಾಯುವುದು ಬೇಡ, ಇದು ಸುರಕ್ಷಿತ ಸ್ಥಳವಲ್ಲ ಎಂದು ನಾರಾಯಣ್ ತನ್ನ ವಾಹನವನ್ನು ನೀಡಿದರು. ನಂತರ ನನ್ನ ದ್ವಿಚಕ್ರ ವಾಹನವನ್ನು ತಳ್ಳಿಕೊಂಡು ಅವರು ಮೇಖ್ರಿ ವೃತ್ತದ ಪೆಟ್ರೋಲ್ ಬಂಕ್ ಬಳಿ ಬಂದರು.
ಅಷ್ಟೊತ್ತಿಗೆ ನನ್ನ ಪತಿಯೂ ಪೆಟ್ರೋಲ್ ಬಂಕ್ ಬಳಿ ಬಂದರು. ನಾವು ನಾರಾಯಣ್ ಅವರಿಗೆ ಧನ್ಯವಾದ ತಿಳಿಸಿ ಅವರ ದ್ವಿಚಕ್ರ ವಾಹನವನ್ನು ಅವರಿಗೆ ವಾಪಸ್ ನೀಡಿದೆವು, ನಾರಾಯಣ್ ತೋರಿದ ಮಾನವೀಯತೆ ಇತರರಿಗೂ ಮಾದರಿಯಾಗಲಿ ಎಂದು ಎಎಸ್ಐ ನಾರಾಯಣ್ ಅವರ ಭಾವಚಿತ್ರ ಸಹಿತ ಘಟನೆಯ ಬಗ್ಗೆ ನಿರ್ಮಲಾ ರಾಜೇಶ್ ತನ್ನ ಫೇಸ್ ಬುಕ್ ಟೈಂಲೈನಿನಲ್ಲಿ ಬರೆದುಕೊಂಡಿದ್ದಾರೆ.
ಪೊಲೀಸ್ ಅಧಿಕಾರಿ ನಾರಾಯಣ ತೋರಿದ ಮಾನವೀಯತೆ ವ್ಯಾಪಕ ಪ್ರಶಂಸೆಗೊಳಗಾಗಿದೆ. ಹಲವು ಸಂದರ್ಭದಲ್ಲಿ ಪೊಲೀಸರಿಗೂ ಸಾರ್ವಜನಿಕರು ಸಹಾಯ ಮಾಡುತ್ತಾರೆ, ನಾನು ಕರ್ತವ್ಯವನ್ನು ಮಾಡಿದ್ದೇನೆಂದು ನಾರಾಯಣ್ ಹೇಳುತ್ತಾರೆ.
ಉತ್ತಮ ಕರ್ತವ್ಯ ನಿರ್ವಹಣೆ ತೋರಿದ ಎಎಸ್ಐ ನಾರಾಯಣ್ ಅವರಿಗೆ ಗೃಹ ಸಚಿವ ಪರಮೇಶ್ವರ್ ವೈಯಕ್ತಿಕ ಹದಿನೈದು ಸಾವಿರ ರೂಪಾಯಿ ನೀಡಿ ಗೌರವಿಸಿದ್ದಾರೆ.