ಉತ್ತರಹಳ್ಳಿ ಕೆರೆ ಅಂಗಳದಲ್ಲಿ ವಿಜೃಂಭಣೆಯ ಕೆರೆ ಸಂಕ್ರಾಂತಿ
ಬೆಂಗಳೂರು, ಜನವರಿ 15: ಮೂರು ದಿನಗಳ ಕಾಲ ನಡೆದ ಉತ್ತರ ಹಳ್ಳಿಯ ಕೆರೆ ಸಂಕ್ರಾಂತಿ ಹಬ್ಬಕ್ಕೆ ಶನಿವಾರ ವಿದ್ಯುಕ್ತ ತೆರೆಬಿತ್ತು. ಯುನೈಟೆಡ್ ಬೆಂಗಳೂರು, ಬೆಂಗಳೂರು ಮಹಾನಗರ ಪಾಲಿಕೆ, ಕಾರ್ಪೊರೇಟ್ ಪಾರ್ಟ್ ನರ್ ಇನ್ಫಿನೆರಾ ಹಾಗೂ ಉತ್ತರ ಹಳ್ಳಿ ಮಾಘೇಕೆರೆ ನಡಿಗೆದಾರರ ವೇದಿಕೆ (ಯುಎಂಎನ್ ವಿ) ಸಂಘವು ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಜನವರಿ 12ರಂದು ಚಾಲನೆಗೊಂಡಿದ್ದ ಕೆರೆ ಸಂಕ್ರಾಂತಿ ಅಭಿಯಾನದಲ್ಲಿ ಮೊದಲಿಗೆ ಕೌಡೇನಹಳ್ಳಿ ಕೆರೆಯ ಅಂಗಳದಲ್ಲಿ ಪೂಜೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಆನಂತರ, 13ನೇ ದಿನದಂದು ಸೀಗೇ ಹಳ್ಳಿ ಹಾಗೂ ಸೌಳಕೆರೆಗಳಲ್ಲಿ ಈ ಕೈಂಕೈರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನು, ಅಭಿಯಾನದ ಕೊನೆಯ ದಿನವಾದ ಜನವರಿ 14ರಂದು ಉತ್ತರಹಳ್ಳಿ ಕೆರೆಯಂಗಳದಲ್ಲಿ ಸಂಕ್ರಾಂತಿ ಹಬ್ಬವು ವಿಜೃಂಭಣೆಯಿಂದ ಜರುಗಿತು.
ಉತ್ತರ ಹಳ್ಳಿ ಕೆರೆ ಸಂಕ್ರಾಂತಿ ಕಾರ್ಯಕ್ರಮದಲ್ಲಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಎಂ. ಕೃಷ್ಣಪ್ಪ, ಉತ್ತರಹಳ್ಳಿಯ ವಾರ್ಡ್ ನಂ. 184ರ ಬಿಬಿಎಂಪಿ ಕಾರ್ಪೊರೇಟರ್ ಹನುಮಂತಯ್ಯ, ಯುನೈಟೆಡ್ ವೇ ಬೆಂಗಳೂರು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಮನೀಶ್ ಮೈಕಲ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಹನುಮಂತಪ್ಪ, "ಕಳೆದ ಮೂರು ವರ್ಷಗಳಿಂದ ಉತ್ತರ ಹಳ್ಳಿ ಕೆರೆಯನ್ನು ಸಾಕಷ್ಟು ಅಭಿವೃದ್ಧಿಗೊಳಿಸಲಾಗಿದೆ. ಈ ಕೆರೆಯನ್ನು ಕಸಮುಕ್ತವನ್ನಾಗಿಸಿ, ನಿತ್ಯ ವ್ಯಾಯಾಮಕ್ಕಾಗಿ ಜಿಮ್ ಗಳಂಥ ಅನುಕೂಲಗಳನ್ನು ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆರೆಯ ಅಂಗಣದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪಿಸಿ ಅಲ್ಲಿ ಶುದ್ಧೀಕರಿಸಿದ ನೀರನ್ನು ಕೆರೆಗೆ ಬಿಡುವ ವ್ಯವಸ್ಥೆ ಅನುಷ್ಠಾನಗೊಳಿಸಲಾಗುವುದು. ಅಲ್ಲದೆ, ಕೆರೆಯ ಸುತ್ತಲೂ ಮಳೆ ಕೊಯ್ಲು ಅಳವಡಿಸಿ ಕೆರೆಯ ನೀರಿನ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಹವ್ಯಾಸಿ ಮೀನುಗಾರರಿಗೆ ಇಲ್ಲಿ ಫಿಶಿಂಗ್ ಅನುಕೂಲ ಕಲ್ಪಿಸಲಾಗುವುದು" ಎಂದು ತಿಳಿಸಿದರು.
ಇದೇ ವೇಳೆ, ಕೆರೆಯ ಸುತ್ತಲಿನ ಉದ್ಯಾನದಲ್ಲಿರುವ ಸುಮಾರು 10 ಸಾವಿರ ಮರ, ಗಿಡಗಳಿಗೆ ನೀರುಣಿಸಲು ನಿರ್ಮಿಸಲಾಗಿರುವ 1.5 ಮೀಟರ್ ವರೆಗಿನ ಪೈಪ್ ಲೈನ್ ಅನ್ನು ಉದ್ಘಾಟಿಸಲಾಯಿತು.
ಇದೇ ವೇಳೆ, ಬಿಬಿಎಂಪಿಯೊಂದಿಗೆ ಕೈ ಜೋಡಿಸಿ ಕೆರೆ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸುತ್ತಿರುವ ಯುನೈಟೆಡ್ ವೇ ಬೆಂಗಳೂರು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಮನೀಶ್ ಮೈಕಲ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, '''ಮಳೆ ಕೊಯ್ಲು ಅಳವಡಿಕೊಂಡಿರುವ ಕೆರೆಗಳು ದಿನೇ ದಿನೇ ಅಭಿವೃದ್ಧಿ ಕಾಣುತ್ತಿವೆ. ಹೀಗೆ, ಅಭಿವೃದ್ಧಿ ಕಾಣುತ್ತಿರುವ ಕೆರೆಗಳು ಸಂಬಂಧಪಟ್ಟ ಜನರಿಗೆ ಅಪಾರವಾಗಿ ನೆರವಾಗುತ್ತಿವೆ. ನೀರಿನ ಪ್ರಮಾಣ ಕಡಿಮೆ ಇರುವ ಎಲ್ಲಾ ಕೆರಗಳಲ್ಲೂ ಇಂಥ ಮಳೆ ಕೊಯ್ಲು ಪದ್ಧತಿ ಜಾರಿಗೊಂಡರೆ ಜನರಿಗೆ ಹೆಚ್ಚು ಪ್ರಯೋಜನವಾಗುತ್ತದೆ. ಯುನೈಟೆಡ್ ವೇ ಬೆಂಗಳೂರು ಸಂಸ್ಥೆಯು ಇಂಥ ಜನಪರ ಕಾಳಜಿಯುಳ್ಳ ಯೋಜನೆಗಳಿಗೆ ಕೈ ಜೋಡಿಸಲು ಉತ್ಸುಕವಾಗಿದೆ'' ಎಂದರು.