ರಂಗಶಂಕರದಲ್ಲಿ ಕೆಂಪು ಕಣಗಿಲೆ ನಾಟಕ ನೋಡಿ ಆನಂದಿಸಿ
ಬೆಂಗಳೂರ, ಜೂನ್ 13: ನೊಬೆಲ್ ಪಾರಿತೋಷಕ ವಿಜೇತ ರವೀಂದ್ರ ನಾಥ ಠಾಗೋರರ ಕೃತಿ 'ರಕ್ತ ಕರಾಬಿ' ಕನ್ನಡಕ್ಕೆ ಬಂದಿದೆ. ಕೆವಿ ಸುಬ್ಬಣ್ಣ ಅವರು ರಚಿಸಿರುವ ಸುಧಾ ಆಡುಕಳ ಅವರ ರಂಗ ರೂಪಾಂತರ ಕನ್ನಡ ಅವತರಣಿಕೆಯನ್ನು ಮಂಡ್ಯ ರಮೇಶ್ ಅವರ ನಟನಾ ತಂಡ ಪ್ರಸ್ತುತ ಪಡಿಸುತ್ತಿದೆ.
ಜೂನ್ 16ರಂದು ಜೆಪಿ ನಗರದ ರಂಗಶಂಕರದಲ್ಲಿ 90 ನಿಮಿಷಗಳ ನಾಟಕ ನೋಡಿ ಅನಂದಿಸಬಹುದು. ಶ್ರೀಪಾದ್ ಭಟ್ ಅವರ ನಿರ್ದೇಶನದ ನಾಟಕದಲ್ಲಿ ದಿಶಾ ರಮೇಶ್, ಮೇಘ ಸಮೀರ ಅವರು ಪ್ರಮುಖ ಪಾತ್ರದಲ್ಲಿದ್ದಾರೆ. ಟಿಕೆಟ್ ಗಳು ಬುಕ್ ಮೈಶೋ.ಕಾಂ ಹಾಗೂ ರಂಗಶಂಕರದಲ್ಲಿ ಲಭ್ಯವಿದೆ. ನಾಟಕದ ಬಗ್ಗೆ ಅಂಕಣಗಾರ್ತಿ ಕುಸುಮಾ ಆಯರಹಳ್ಳಿ ಅವರು ಬರೆದಿದ್ದನ್ನು ಓದಿ ನಂತರ ನಾಟಕ ನೋಡಿ ಆನಂದಿಸಿ...
ಇವಳು ನಂದಿನಿ... 'ಕೆಂಪು ಕಣಗಿಲೆ' ನಾಟಕ ಮುಖ್ಯ ಪಾತ್ರಧಾರಿ. ಚಿನ್ನದ ಗಣಿಗಾರಿಕೆ ಮಾಡುತ್ತಾ ಚಿನ್ನದೊಳಗೆ ಬಂಧಿಯಾದ ರಾಜ. ಎಂಥದೋ ಆಸೆ ಹೊತ್ತು ಯಕ್ಷನಗರಿಗೆ ಬಂದು ಗೇಯುತ್ತಾ ತೇಯುತ್ತಾ ಹೋಗುವ ಬಡಜನ. ಇವರ ನಡುವಿನ ಹಾಡಾಗಿ, ತಂಗಾಳಿಯಾಗಿ, ಬಂಡೆಗಳನಡುವೆ ಬೆರಳಾಡಿಸಿಯೇ ಹೂವ ಚಿಗುರಿಸುವವಳಾಗಿ ಓಡಾಡುವವಳೇ ನಂದಿನಿ. ಈ ನಾಟಕ ಎಂದೋ ರವೀಂದ್ರರು ಬರೆದದ್ದು. ಆದರೆ ಇಂದಿಗೆ ಅದು ಎಷ್ಟು ಪ್ರಸ್ತುತ!! ಆ ರಾಜ ಗವರ್ನರ್ ಪುರಾಣಿಕ, ಪ್ರೊಫೆಸರ್ ಎಲ್ಲರೂ ಇಂದಿನ ಕಾರ್ಪೋರೆಟ್ ಕಂಪನಿ, ರಾಜಕಾರಣ, ಯೂನಿವರ್ಸಿಟಿಗಳ ಸ್ಥಿತಿ, ಧರ್ಮದ ಹೆಸರಿನ ಮೋಸ ಎಲ್ಲವನ್ನೂ ಪ್ರತಿನಿಧಿಸುತ್ತವೆ. ಯಕ್ಷನಗರಿ ಸ್ಮಾರ್ಟ್ ಮಹಾ ನಗರಗಳೇ ಆಗಿದೆ. ಸರಳತೆ ಮತ್ತು ಐಶಾರಾಮಿಯ ನಡುವಿನ ಜಗ್ಗಾಟ ಅದು. ಅಲ್ಲಿ ಸತ್ಯ ಹೇಳಲು ಹೊರಟವನನ್ನು ಈ ಎಲ್ಲವೂ ಒಟ್ಟು ಸೇರಿ ಬಂಧಿಸುವ ದೃಶ್ಯ ಅದ್ಭುತ ರೂಪಕದಂತಿದೆ.
ಭೂತ ಭವಿಷ್ಯಗಳು ವರ್ತಮಾನವನ್ನು ಅಂಕೆಯಲ್ಲಿಡಲು ಬಳಸುವ ಗುರಾಣಿಗಳು ಎನ್ನುತ್ತಾಳೆ ನಂದಿನಿ. ಹಗ್ಗ ಹರಿದ ನಾವೆ ಗುರಿ ನಿರ್ಧರಿಸಬಲ್ಲುದೇ? ಅಂತ ಕೇಳುತ್ತಾಳೆ. ಕೃತಕ ಸೆರೆಯಿಂದ ಬಿಡಿಸಿಕೊಂಡು ಸಹಜತೆಯ ಕಡೆ ಬಾ ಅಂತ ಕರೆಯುತ್ತಾಳೆ. ನಂದಿನಿ ಅಂದರೆ ಇವತ್ತು ಅಲ್ಲಿ ಹೋಗಲಾರದೇ ಇಲ್ಲಿರಲಾದೇ ಒದ್ದಾಡುತ್ತಿರುವ ನಮ್ಮೆಲ್ಲರೆದೆಗಳ ಹಾಡು..ನಮ್ಮೊಳಗಿನ ನಿಜದ ಎಚ್ಚರ!!
ನಂದಿನಿಯಾಗಿ ಏಕಕಾಲಕ್ಕೆ ಹಾಡುತ್ತಾ, ಕುಣಿಯುತ್ತಾ ಅಷ್ಟುದ್ದ ಮಾತುಗಳನೂ ಒಪ್ಪಿಸುತ್ತಾ, ರಂಗವನೆಲ್ಲ ಪುಟ್ಟದೇವತೆಯಂತೆ ಆವರಿಸಿಕೊಂಡು, ಮನೋಜ್ಞವಾಗಿ ಅಭಿನಯಿಸಿದ Disha Rameshಮರಿ ಜಯಶ್ರೀಯಂತೆ ಕಂಡಳು. Megha Sameera ನ ಧ್ವನಿಯ ಏರಿಳಿತಕೆ ಸೋತೆ. ಬಿಶು, ಕಿಶೋರನ ಪಾತ್ರಗಳೂ ಚೆಂದ.Mandya Ramesh Satish Baikady Ramu Natanaನಿಮ್ಮ ರಂಗಪ್ರೀತಿಗೆ ಋಣಿಗಳು. ಪ್ರತಿಭಾವಂತ ನಿರ್ದೇಶಕ Shripad Bhat ಅವರಿಗೆ ಅಭಿನಂದನೆಗಳು. ಅವರ ಈ ಪ್ರಯೋಗ ಜೂನ್ 16ರಂದು ರಂಗಶಂಕರದಲ್ಲಿದೆ. ನಂದಿನಿಯ ಎಚ್ಚರದ ಹಾಡು ಕಡೆಗೆ ಎಚ್ಚರದ ಗಂಟೆಯಂತೆ ಕೇಳುವುದನ್ನು ನೀವೂ ಅನುಭವಿಸಿ.