ಕೆಂಪೇಗೌಡ ಜಯಂತಿ ರದ್ದುಗೊಳಿಸಿದ ಸಿದ್ದು ಸರಕಾರ
ಕೆಂಪೇಗೌಡರ ಜನ್ಮದಿನದ ಬಗ್ಗೆ ಗೊಂದಲ ಇರುವುದರಿಂದ ಏಪ್ರಿಲ್ 17ರಂದು ರಾಜ್ಯ ಸರಕಾರ ನಡೆಸಲು ಉದ್ದೇಶಿಸಿದ್ದ ಕೆಂಪೇಗೌಡ ಜಯಂತಿಯನ್ನು ರದ್ದುಗೊಳಿಸಲಾಗಿದೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ
ಬೆಂಗಳೂರು, ಏಪ್ರಿಲ್ 15: ಏಪ್ರಿಲ್ 17ರಂದು ರಾಜ್ಯ ಸರಕಾರದಿಂದ ಆಚರಿಸಲು ನಿರ್ಧರಿಸಿದ್ದ ಕೆಂಪೇಗೌಡ ಜಯಂತಿಯನ್ನು ರದ್ದುಗೊಳಿಸಿರುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕೆಂಪೇಗೌಡರ ಜನ್ಮದಿನದ ಬಗ್ಗೆ ಗೊಂದಲ ಇರುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಆದರೆ, ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ ಸೂಚನೆ ಮೇರೆಗೆ ಈ ತೀರ್ಮಾನ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯ ಸರಕಾರದಿಂದ ಕೆಂಪೇಗೌಡ ಜಯಂತಿ ಆಚರಣೆಗೆ ನಿರ್ಧರಿಸಲಾಗಿತ್ತು. ಆದರೆ ಜನ್ಮದಿನದ ಬಗ್ಗೆ ಗೊಂದಲ ಇರುವುದರಿಂದ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಗಿದೆ.[ರಾಜ್ಯಾದ್ಯಂತ ಕೆಂಪೇಗೌಡ, ರಾಣಿ ಚೆನ್ನಮ್ಮ ಜಯಂತಿ: ಏನಿದರ ಗುಟ್ಟು?]
ಈ ಮಧ್ಯೆ ಸರಕಾರದ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಕೆಂಪೇಗೌಡ ಜಯಂತಿ ಆಚರಣೆ ಎಂಬುದೇ ಗಿಮಿಕ್ ಆಗಿತ್ತು. ಅದ್ಯಾವ ಉದ್ದೇಶವಿಟ್ಟುಕೊಂಡು ಸರಕಾರದಿಂದ ಘೋಷಣೆ ಮಾಡಲಾಗಿತ್ತೋ ಅದು ಈಡೇರಿದ ಬಳಿಕ ನೆಪ ಮಾಡಿಕೊಂಡು ಕಾರ್ಯಕ್ರಮ ರದ್ದು ಮಾಡುತ್ತಿದ್ದಾರೆ. ಘೋಷಣೆಗೆ ಮುನ್ನ ಈ ಬಗ್ಗೆ ಚರ್ಚೆ ಮಾಡಿರಲಿಲ್ಲವೆ? ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.