ಜಯಲಲಿತಾ ಸ್ಥಳಾಂತರ ಮಾಡಲು ವಿರೋಧವಿಲ್ಲ
ಬೆಂಗಳೂರು, ಅ.14 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರನ್ನು ಚೆನ್ನೈಗೆ ಸ್ಥಳಾಂತರ ಮಾಡಲು ರಾಜ್ಯ ಸರ್ಕಾರದ ವಿರೋಧವಿಲ್ಲ. ಈ ಬಗ್ಗೆ ನ್ಯಾಯಾಲಯ ಆದೇಶ ನೀಡಿದರೆ ಸ್ಥಳಾಂತರ ಮಾಡಲು ಒಪ್ಪಿಗೆ ನೀಡಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಗೃಹ ಸಚಿವ ಕೆ.ಜೆ.ಜಾರ್ಜ್, ಸೆ.27ರಿಂದ ಜಯಲಲಿತಾ ಮತ್ತು ಅಕ್ರಮ ಆಸ್ತಿಗಳಿಕೆ ಪ್ರಕರಣದ ಮೂವರು ಅಪರಾಧಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಅವರನ್ನು ತಮಿಳುನಾಡಿಗೆ ಸ್ಥಳಾಂತರ ಮಾಡುವ ಕುರಿತು ಅಲ್ಲಿನ ಸರ್ಕಾರ ನ್ಯಾಯಾಲಯದ ಒಪ್ಪಿಗೆ ಪಡೆದರೆ ನಮ್ಮ ವಿರೋಧವೇನಿಲ್ಲ ಎಂದು ತಿಳಿಸಿದರು. [ಸುಪ್ರೀಂನಲ್ಲೂ ಜಯಾ ಜಾಮೀನು ಅರ್ಜಿ ಮುಂದೂಡಿಕೆ]
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಕೆಲವು ನಾಯಕರು ಜಯಲಲಿತಾ ಅವರನ್ನು ತಮಿಳುನಾಡಿಗೆ ಸ್ಥಳಾಂತರ ಮಾಡಿ, ಅವರು ಕರ್ನಾಟಕದಲ್ಲಿದ್ದರೆ ಇಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕಷ್ಟವಾಗುತ್ತದೆ ಎಂದು ಒತ್ತಾಯಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು ಕಾನೂನು ಪ್ರಕಾರವಾಗಿ ಆದೇಶ ಹೊರಬಿದ್ದರೆ ಜಯಲಲಿತಾ ಸ್ಥಳಾಂತರಕ್ಕೆ ನಮ್ಮ ವಿರೋಧವೇನಿಲ್ಲ ಎಂದರು. [ಬೆಂಗಳೂರಿನಿಂದ ಅಮ್ಮ ತಮಿಳುನಾಡಿಗೆ ಸ್ಥಳಾಂತರ?]
ಸೆ.27ರಂದು ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ, ಸುಧಾಕರನ್, ಇಳವರಸಿ ಮತ್ತು ಶಶಿಕಲಾ ಅವರಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿತ್ತು. ಅಂದಿನಿಂದಲೂ ನಾಲ್ವರು ಅಪರಾಧಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜಯಲಲಿತಾ ಮತ್ತು ಮೂವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದ್ದು, ಜಯಲಲಿತಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಅ.17ರಂದು ಅಲ್ಲಿ ಅರ್ಜಿಯ ವಿಚಾರಣೆ ನಡೆಯಲಿದೆ.
ತಮಿಳುನಾಡು ಸರ್ಕಾರ ಜಯಲಲಿತಾ ಅವರನ್ನು ಸ್ಥಳಾಂತರ ಮಾಡುವ ಕುರಿತು ಮನವಿ ಸಲ್ಲಿಸಿದರೆ ಆ ರಾಜ್ಯದ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆ ಕುರಿತು ಪರಿಶೀಲಿಸಲಾಗುತ್ತದೆ. ಜಯಲಲಿತಾ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ, ಸುಪ್ರೀಂ ಆದೇಶದಂತೆ ವಿಚಾರಣೆ ಬೆಂಗಳೂರಿನಲ್ಲಿ ನಡೆಯುತ್ತಿದೆ ಎಂದು ಕಳೆದ ವಾರ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದರು.