ಸದ್ಯದಲ್ಲೇ ಮೈಸೂರಿನಲ್ಲಿ ಕಾವೇರಿ ನದಿ ಗ್ಯಾಲರಿ
ಬೆಂಗಳೂರು,ಜನವರಿ,07: ಕಾವೇರಿ ನದಿಯ ಮಹತ್ವ, ಇತಿಹಾಸ, ಪಾವಿತ್ರತೆ, ನದಿಯಿಂದ ಆಗಿರುವ ಲಾಭ, ನದಿಗೆ ಮುಂದಿನ ದಿನಗಳಲ್ಲಿ ಎದುರಾಗುವ ಅಪಾಯ ಹೀಗೆ ರಾಜ್ಯದ ಜನತೆಗೆ ಕಾವೇರಿ ನದಿಯ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಐತಿಹಾಸಿಕ ನಗರಿ ಮೈಸೂರಿನಲ್ಲಿ ಕಾವೇರಿ ನದಿ ಗ್ಯಾಲರಿ ಸ್ಥಾಪಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆರ್. ವಿ .ದೇಶಪಾಂಡೆ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 'ರಾಷ್ಟ್ರೀಯ ವಿಜ್ಞಾನ ಅಕಾಡೆಮಿ(ಎನ್ಎಎಸ್ಐ) ಸಂಸ್ಥೆಯು ರಾಷ್ಟ್ರೀಯ ವಿಜ್ಞಾನ ಮ್ಯೂಸಿಯಂ ಸಹಯೋಗದಲ್ಲಿ ಕಾವೇರಿ ನದಿ ಯೋಜನೆ ಪೂರ್ಣಗೊಳಿಸಲಿದೆ. ಈ ಗ್ಯಾಲರಿಯಲ್ಲಿ ಕಲಾ ತಾಂತ್ರಿಕತೆ ಬಳಸಿ ಪ್ರವಾಸಿಗರು, ವಿದ್ಯಾರ್ಥಿಗಳಿಗೆ ಕಾವೇರಿ ನದಿ ಪಾತ್ರದ ಸಮಗ್ರ ನೈಜ ಚಿತ್ರಣ ಕಟ್ಟಿಕೊಡಲಾಗುವುದು' ಎಂದರು.['ನಮಾಮಿ ಗಂಗೆ' ಯೋಜನೆ ಮಾತಾ 'ಅಮ್ಮ' ಕಡೆಯಿಂದ ನೂರು ಕೋಟಿ!]
ನದಿಯ ಉಗಮಸ್ಥಾನದಿಂದ ಹಿಡಿದು ಅದರ ಸಂಪೂರ್ಣ ಪಯಣ, ನದಿಯ ಬಗೆಗಿರುವ ಕಾಲ್ಪನಿಕ ಕಥೆಗಳು, ನದಿಯಿಂದ ಆಗಿರುವ ಲಾಭ, ನದಿ ಪಾತ್ರದ ಜೀವ ವೈವಿಧ್ಯತೆ, ಸಾಮಾಜಿಕ ಆರ್ಥಿಕ ಪ್ರಾಮುಖ್ಯತೆ, ಪ್ರವಾಸೋದ್ಯಮ, ಸಂಸ್ಕೃತಿ, ನದಿಗೆ ಎದುರಾಗುವ ಅಪಾಯ, ನದಿಯ ಸಂರಕ್ಷಣೆ, ಪುನರುಜ್ಜೀವನ, ಸಂಶೋಧನೆ ಮುಂತಾದವುಗಳ ಬಗ್ಗೆ ಅನಿಮೇಶನ್, ಗ್ರಾಫಿಕ್ ತಂತ್ರಜ್ಞಾನ ಪ್ರದರ್ಶನ, ಸಂವಹನ, ಮ್ಯಾಪ್ ಬ್ರೌಸರ್, ಪ್ರವಾಸ ಮುಂತಾದವುಗಳ ಮೂಲಕ ಸಮಗ್ರ ಪರಿಚಯ ನೀಡಲಾಗುವುದು ಎಂದರು.[ಮೂಕ ಜೀವಗಳಿಗೆ ನೀರುಣಿಸುವ ಮೈಸೂರು ಭಗೀರಥರು...]
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನದಿ ಗ್ಯಾಲರಿಗಾಗಿ ೩.೫ ಕೋಟಿ ರೂಗಳನ್ನು ಮೀಸಲಿರಿಸಿದ್ದು, ಈ ಸಂಬಂಧ ಕರ್ನಾಟಕ ಪ್ರದರ್ಶನ ಮೈದಾನದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದು ಸಚಿವ ಆರ್.ವಿ ದೇಶಪಾಂಡೆ ಹೇಳಿದ್ದಾರೆ.[ಕಾವೇರಿ ನದಿಗೊಂದು ಗ್ಯಾಲರಿ]
ಎನ್ಎಎಸ್ಐ ಮತ್ತು ಎನ್ಸಿಎಸ್ಎಂ ಸಂಸ್ಥೆಗಳು ಈಗಾಗಲೇ ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿ ಗ್ಯಾಲರಿ ಮತ್ತು ಅಲಹಾಬಾದ್ನಲ್ಲಿ ಗಂಗಾ ನದಿ ಗ್ಯಾಲರಿ ಯೋಜನೆಯನ್ನು ಪೂರ್ಣಗೊಳಿಸಿದೆ. ರಾಜ್ಯದಲ್ಲಿ ಕಾವೇರಿ ನದಿ ಗ್ಯಾಲರಿ ಸಂಬಂಧ ಒಡಂಬಡಿಕೆಗೆ ಸಹಿ ಹಾಕಿವೆ. ಈ ಸಂದರ್ಭದಲ್ಲಿ ವಿಜ್ಞಾನಿ ಕಸ್ತೂರಿರಂಗನ್ ಸೇರಿದಂತೆ ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.