'ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಪಟ್ಟಿ ಪ್ರಕಟ
ಬೆಂಗಳೂರು, ಆಗಸ್ಟ್ 12: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2016-17ನೇ ಸಾಲಿನ ಅಕಾಡೆಮಿಯು 'ಕರ್ನಾಟಕ ಕಲಾಶ್ರೀ' ಪ್ರಶಸ್ತಿಗಾಗಿ ಕಲಾವಿದರನ್ನು ಆಯ್ಕೆ ಮಾಡಿದೆ.
ಕಲಾವಿದರನ್ನು ಆಯ್ಕೆ ಮಾಡಲು ಕಲಾವಿದರ ಪ್ರತಿಭೆ, ಸೇವಾ ಹಿರಿತನ, ಶಿಷ್ಯರನ್ನು ತಯಾರು ಮಾಡಿರುವುದು, ಗ್ರಂಥಗಳ ರಚನೆ, ಪ್ರಸ್ತುತ ಸಂಬಂಧಪಟ್ಟ ಪ್ರಕಾರಕ್ಕೆ ಮಾಡುತ್ತಿರುವ ಸೇವೆ ಇವುಗಳನ್ನೆಲ್ಲ ಗಣನೆಗೆ ತೆಗೆದುಕೊಳ್ಳಲಾಗಿದೆ.
ಹಿಂದೂಸ್ತಾನಿ ಸಂಗೀತ ತಬಲಾದಲ್ಲಿ ಧಾರವಾಡದ ಪಂ.ರವೀಂದ್ರ ಯಾವಗಲ್ ಹಾಗೂ ಗಮಕದಲ್ಲಿ ಕಾಸರಗೋಡಿನ ಸುಬ್ರಹ್ಮಣ್ಯ ಭಟ್ ಅವರನ್ನು ಗೌರವ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ಗಾಯನದಲ್ಲಿ ಬೆಂಗಳೂರಿನ ಡಾ.ಕೆ.ವರದರಂಗನ್, ಪಿಟೀಲಿನಲ್ಲಿ ಮೈಸೂರಿನ ನಾಗರತ್ನಮ್ಮ, ಮೃದಂಗದಲ್ಲಿ ಕೋಲಾರದ ಸೂರ್ಯನಾರಾಯಣಾಚಾರ್ಯ, ಮೋರ್ಚಿಂಗ್ನಲ್ಲಿ ಬಳ್ಳಾರಿಯ ಗುರುರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
ಹಿಂದೂಸ್ತಾನಿ ಸಂಗೀತ ಗಾಯನದಲ್ಲಿ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಪರಮೇಶ್ವರ ಹೆಗಡೆ, ಬೀದರ್ನ ರಾಮುಲು ಗಾದಗಿ, ತಬಲದಲ್ಲಿ ಬೆಳಗಾವಿಯ ಬಂಡೋಪಂತ್ ಕುಲಕರ್ಣಿ ಅವರು ಆಯ್ಕೆಯಾಗಿದ್ದಾರೆ.
ಯಾದಗಿರಿಯ ಆಮಯ್ಯ ಮಠ, ಗದಗದ ವೀರೇಶ ಕಿತ್ತೂರ ಹಾಗೂ ಬೆಂಗಳೂರಿನ ಸುಕುಮಾರ ಬಾಬು ಅವರನ್ನು ಲಯವಾದ್ಯದ ಮಾನದಂಡದ ಅಡಿ ಆಯ್ಕೆ ಮಾಡಲಾಗಿದೆ.
ಮೈಸೂರಿನ ಶೀಲಾ ಶ್ರೀಧರ್, ಬೆಂಗಳೂರಿನ ಸತ್ಯನಾರಾಯಣರಾಜು ಹಾಗೂ ಪೂರ್ಣಿಮಾ ಅಶೋಕ್ ನೃತ್ಯ ವಿಭಾಗದಲ್ಲಿ, ತುಮಕೂರಿನ ಹುನುಮಂತದಾಸ್ ಕಥಾಕೀರ್ತನ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.
ಬೆಳಗಾವಿಯ ಭಾರತಿ ಭಟ್ ಹಾಗೂ ಮಂಡ್ಯದ ಶೈಲಜಾ ಚಂದ್ರಶೇಖರ್ ಅವರನ್ನು ಗಮಕ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರು ತಿಳಿಸಿದ್ದಾರೆ.