ಸ್ಪೀಕರ್ ಮುಂದೆ ಹಾಜರಾಗಲು ರವಿ ಬೆಳಗೆರೆಗೆ ಕೋರ್ಟ್ ಆದೇಶ
ಬೆಂಗಳೂರು, ಜುಲೈ 01 : ಸೋಮವಾರ (ಜುಲೈ 3) ಮಧ್ಯಾಹ್ನ 3 ಗಂಟೆಯೊಳಗೆ ಕರ್ನಾಟಕ ವಿಧಾನಸಭಾಧ್ಯಕ್ಷ ಕೆಬಿ ಕೋಳಿವಾಡ್ ಅವರ ಮುಂದೆ ಖುದ್ದಾಗಿ ಹಾಜರಾಗಬೇಕೆಂದು ಕರ್ನಾಟಕ ಹೈಕೋರ್ಟ್ ಪತ್ರಕರ್ತ ರವಿ ಬೆಳಗೆರೆಗೆ ಶನಿವಾರ ಆದೇಶಿಸಿದೆ.
ಮಾನನಷ್ಟವಾಗುವಂಥ ಲೇಖನ ಪ್ರಕಟಿಸಿದ್ದಕ್ಕಾಗಿ ವಿಧಾನಸಭೆಯ ಹಕ್ಕುಬಾಧ್ಯತಾ ಸಮಿತಿ ಆದೇಶಿಸಿದಂತೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಮತ್ತು ಯಲಹಂಕ ವಾಯ್ಸ್ ಪತ್ರಿಕೆಯ ಸಂಪಾದಕ ಅನಿಲ್ ರಾಜ್ ಅವರಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರುಪಾಯಿ ದಂಡ ವಿಧಿಸಿತ್ತು.
ಪತ್ರಕರ್ತ ರವಿ ಬೆಳಗೆರೆ ಶಿಕ್ಷೆ ಹಿಂಪಡೆದಿಲ್ಲ: ಸ್ಪೀಕರ್ ಕೋಳಿವಾಡ
ಈ ಆದೇಶವನ್ನು ಪ್ರಶ್ನಿಸಿ ರವಿ ಬೆಳಗೆರೆ ಮತ್ತು ಅನಿಲ್ ರಾಜ್ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿ ಅಶೋಕ್ ಹಿಂಚಿಗೇರಿ ಅವರು, ಮೇಲಿನಂತೆ ಆದೇಶ ಹೊರಡಿಸಿದ್ದಾರೆ.
ಜೊತೆಗೆ, ಜೈಲು ಶಿಕ್ಷೆ ಎದುರಿಸುತ್ತಿರುವ ಇಬ್ಬರೂ ಪತ್ರಕರ್ತರನ್ನು ಬಂಧಿಸದಿರಲು ಕರ್ನಾಟಕ ಸರಕಾರಕ್ಕೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಹೀಗಾಗಿ, ಯಾವುದೇ ಕಾರಣಕ್ಕೂ ಪತ್ರಕರ್ತರನ್ನು ಪೊಲೀಸರು ಬಂಧಿಸುವಂತಿಲ್ಲ.
ಶರಣಾಗುವ ಸ್ಥಿತಿ ಬಂದರೆ ಆತ್ಮಹತ್ಯೆ ಮಾಡಿಕೊಳ್ತೀನಿ : ರವಿ ಬೆಳಗೆರೆ
ನಾನು ಯಾವುದೇ ಕಾರಣಕ್ಕೂ ರಾಜಕಾರಣಿಗಳ ಮುಂದೆ ತಲೆ ಬಾಗುವುದಿಲ್ಲ. ಒಂದು ವೇಳೆ ಬಂಧನಕ್ಕೊಳಗಾಗುವ ಅಥವಾ ಅವರ ಮುಂದೆ ತಲೆ ಬಾಗುವ ಪರಿಸ್ಥಿತಿ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ರವಿ ಬೆಳಗೆರೆ ಬೆದರಿಸಿದ್ದರು. ಅಲ್ಲದೆ, ನಾನು ಹೈಕೋರ್ಟ್ ಸುಪ್ರೀಂ ಕೋರ್ಟ್ ಮುಂದೆಯೂ ಬಡಿದಾಡಲು ಸಿದ್ಧ ಎಂದಿದ್ದರು.
ಪ್ರಸ್ತುತ, ರವಿ ಬೆಳಗೆರೆಯವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಯಲಹಂಕ ವಾಯ್ಸ್ ಸಂಪಾದಕ ಅನಿಲ್ ಅವರು ತಲೆಮರೆಸಿಕೊಂಡಿದ್ದಾರೆ.
ರವಿ ಬೆಳಗೆರೆಯವರು ತಮ್ಮ ಪತ್ರಿಕೆಯಲ್ಲಿ ಸಿರಗುಪ್ಪ ಶಾಸಕ ಬಿಎಂ ನಾಗರಾಜ್ ಮತ್ತು ಕೋಳಿವಾಡ್ ಅವರ ವಿರುದ್ಧ ಲೇಖನ ಬರೆದಿದ್ದರೆ, ಅನಿಲ್ ರಾಜ್ ಅವರು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರ ವಿರುದ್ಧ ಮಾನನಷ್ಟವಾಗುವಂಥಹ ಲೇಖನ ಬರೆದಿದ್ದರು ಎಂದು ಆರೋಪಿಸಲಾಗಿದೆ.