ಜಮೀನಲ್ಲಿ ಹನಿ ಹನಿಯಾಗಿ ಬೀಳಲಿದೆ ನೀರು
ಬೆಂಗಳೂರು, ನ. 26: ದೇಶದಲ್ಲಿಯೇ ಬರ ಪೀಡಿತ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಉಂಟಾಗಿರುವ ನೀರು ಹಾಗೂ ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಬೃಹತ್ ಯೋಜನೆ ರೂಪಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಬ್ಬು ಬೆಳೆಗೆ ಹನಿ ನೀರಾವರಿ ಪದ್ಧತಿಯನ್ನು 2015ರ ಫೆಬ್ರವರಿ ತಿಂಗಳಿನಿಂದ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಯೋಜಿಸಿದೆ. ಈ ಯೋಜನೆಗಾಗಿ 4,500 ಕೋಟಿ ರೂ.ಗಳನ್ನು ಸರ್ಕಾರ ತೆಗೆದಿರಿಸಿದೆ. ರಾಜ್ಯದ 7 ಲಕ್ಷ ರೈತರ ಜಮೀನುಗಳಲ್ಲಿ ವಿವಿಧ ಹಂತಗಳಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಲು ಯೋಜನೆ ರೂಪಿಸಿದೆ. ಯೋಜನೆ ಪೂರ್ಣಗೊಳಿಸಲು ಮೂರು ವರ್ಷಗಳ ಅವಧಿ ನಿಗದಿಪಡಿಸಲಾಗಿದೆ. [ಹನಿ ನೀರಾವರಿಗೆ 1,800 ಕೋಟಿ ರೂ.]
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮಾಹಿತಿ ನೀಡಿದ್ದಾರೆ. ಈಗ ಕಬ್ಬು ಬೆಳೆಗಾಗಿ ಪ್ರತಿ ವರ್ಷ 250 ರಿಂದ 330 ಟಿಎಂಸಿ ಅಡಿ ನೀರನ್ನು ಪ್ರತಿವರ್ಷ ಉಪಯೋಗಿಸಲಾಗುತ್ತಿದೆ. ಇಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿದರೆ ಸುಮಾರು 186 ಟಿಎಂಸಿ ಅಡಿ (ಕೃಷ್ಣರಾಜಸಾಗರ ಜಲಾಶಯದಲ್ಲಿ ಸಂಗ್ರಹವಾಗುವ ನೀರಿನ ನಾಲ್ಕುಪಟ್ಟು) ನೀರು ಉಳಿಯಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ, ನೀರನ್ನು ಪಂಪ್ ಮಾಡಲು ಉಪಯೋಗಿಸುವ ಸುಮಾರು 400 ಕೋಟಿ ರೂ. ಮೌಲ್ಯದ ವಿದ್ಯುತ್ ಉಳಿತಾಯವಾಗಲಿದೆ ಎಂದು ತಿಳಿಸಿದ್ದಾರೆ. [ರೈತರಿಗೆ ಆಸರೆಯಾಯ್ತು ಎರೆಹುಳು ಗೊಬ್ಬರ]
ಕಬ್ಬು ಬೆಳೆಗೆ ದ್ರವ ರೂಪದ ಗೊಬ್ಬರ ಬಳಸಿದರೆ ಪ್ರತಿ ಎಕರೆಗೆ 35 ಟನ್ ಕಬ್ಬು ಇಳುವರಿ ಬರುತ್ತಿರುವ ಜಾಗದಲ್ಲಿ 68 ಟನ್ ಬರುತ್ತದೆ. ಇದರಿಂದ ರೈತರಿಗೆ ಆರ್ಥಿಕ ಲಾಭವಾಗುತ್ತದೆ. ಕಾರ್ಖಾನೆಗಳಿಗೆ 1,200 ಮೆ.ವ್ಯಾ. ನಷ್ಟು ಹೆಚ್ಚಿನ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಹನಿ ನೀರಾವರಿ ಯೋಜನೆಯನ್ನು ರೈತರು, ಕಾರ್ಖಾನೆ ಹಾಗೂ ಸರ್ಕಾರದ ಸಹಯೋಗದೊಂದಿಗೆ ಜಾರಿಗೆ ತರಲಾಗುವುದೆಂದು ತಿಳಿಸಿದರು. [ಎತ್ತಿನ ಹೊಳೆ ಯೋಜನೆ ಕುಡಿಯುವ ನೀರಿಗೆ ಮಾತ್ರ]
ಸಹಾಯಧನ: ಪ್ರತಿ ಎಕರೆಗೆ ಹನಿ ನೀರಾವರಿ ಅಳವಡಿಸಲು 40 ಸಾವಿರ ರೂ. ವೆಚ್ಚವಾಗಲಿದೆ. ಪ್ರತಿ ಎಕರೆಗೆ ಸರ್ಕಾರದಿಂದ 10 ಸಾವಿರ ರೂ. ಹಾಗೂ ಸಕ್ಕರೆ ಕಾರ್ಖಾನೆಯಿಂದ 5 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು. 5 ಸಾವಿರ ರೂ.ಗಳನ್ನು ವಿವಿಧ ಕಾರ್ಪೊರೆಟ್ ಸಂಸ್ಥೆಗಳಿಂದ ಕೊಡಿಸಲು ಪ್ರಯತ್ನಿಸಲಾಗುವುದು. ಆಗ ರೈತರಿಗೆ ಕೇವಲ ಶೇ. 50ರಷ್ಟು ಖರ್ಚು ಮಾತ್ರ ತಗಲುತ್ತದೆ ಎಂದು ತಿಳಿಸಿದರು. [ಭತ್ತದ ಕಣಜದಲ್ಲಿ ದ್ರಾಕ್ಷಿ ಬೆಳೆದ ಛಲವಾದಿ]
ಅಲ್ಲದೆ, 2015ರ ಜೂನ್ ತಿಂಗಳಿನಿಂದ ಭತ್ತದ ಬೆಳೆಗೆ ಕೂಡ ನೀರಾವರಿ ಪದ್ಧತಿ ಜಾರಿಗೊಳಿಸಲು ಸರ್ಕಾರ ಯೋಜಿಸಿದೆ ಎಂದು ತಿಳಿಸಿದರು.