ಪರಂ ರಾಜೀನಾಮೆ ಸ್ವೀಕರಿಸಿದ ರಾಜ್ಯಪಾಲ ವಜುಭಾಯಿ ವಾಲಾ
ಬೆಂಗಳೂರು, ಜೂನ್ 24: ಡಾ.ಜಿ.ಪರಮೇಶ್ವರ ಅವರು ರಾಜೀನಾಮೆ ಸಲ್ಲಿಸಿದ ಹತ್ತಿರಹತ್ತಿರ ಒಂದು ತಿಂಗಳ ಸುಮಾರಿಗೆ ಕರ್ನಾಟಕ ರಾಜ್ಯಪಾಲರು ಸ್ವೀಕರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರನ್ನಾಗಿ ಪರಮೇಶ್ವರ ಅವರನ್ನೇ ಮುಂದುವರಿಸಿದ ನಂತರ ಅವರು ಗೃಹಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಜೂನ್ ಒಂದರಂದೇ ರಾಜೀನಾಮೆಯನ್ನು ಸಲ್ಲಿಸಿದ್ದರೂ ಶುಕ್ರವಾರ ಸಂಜೆಯಷ್ಟೇ ರಾಜ್ಯಪಾಲರಿಗೆ ಸಿದ್ದರಾಮಯ್ಯ ಕಳಿಸಿದ್ದರು. ಇಪ್ಪತ್ನಾಲ್ಕು ಗಂಟೆ ಅವಧಿಯೊಳಗೆ ರಾಜೀನಾಮೆ ಸ್ವೀಕಾರವಾಗಿದೆ. ರಾಜೀನಾಮೆ ಕಳಿಸಲು ತಡ ಮಾಡಿದ್ದರಿಂದ ಕರ್ನಾಟಕದಲ್ಲಿ ಅವಧಿಪೂರ್ವ ವಿಧಾನಸಭೆ ಚುನಾವಣೆ ಸಾಧ್ಯತೆಗೆ ಮತ್ತಷ್ಟು ಪುಷ್ಟಿ ನೀಡಿತ್ತು.
ಕರ್ನಾಟಕದಲ್ಲಿ ಅವಧಿಗೆ ಮುನ್ನ ಎಲೆಕ್ಷನ್ ಗೆ ಈ 5 ಕಾರಣ ಸಾಲದೆ?
ಪರಮೇಶ್ವರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಸೂಚಿಸಿದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ತಿಳಿಸಲಾಗಿತ್ತು. ಮುಂದಿನ ವರ್ಷದ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮೂರನೇ ಅವಧಿಗೆ ಅವರನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ತೀರ್ಮಾನಿಸಲಾಗಿತ್ತು.
ಕೃಷಿ ಸಾಲ ಮನ್ನಾ, ಪರಮೇಶ್ವರ್ ಅವರ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಕೆ ಮಾಡಿದ್ದು...ಈ ಎಲ್ಲ ಅಂಶಗಳು ಮತ್ತೆ ಮತ್ತೆ ಕರ್ನಾಟಕದಲ್ಲಿ ಅವಧಿಪೂರ್ವ ವಿಧಾನಸಭೆ ಚುನಾವಣೆ ಕಡೆಗೆ ಬೊಟ್ಟು ತೋರಿಸುತ್ತಿದೆ.