ಹಂಪಿ: ಪಾಳುಬಿದ್ದ ಹಿರೇಛತ್ರದ ಪುನರುತ್ಥಾನಕ್ಕೆ 2 ಕೋಟಿ ರು.
ಹಂಪಿಯಲ್ಲಿನ ಹಿರೇಛತ್ರದ ಅಭಿವೃದ್ಧಿಗಾಗಿ 2 ಕೋಟಿ ರು. ಹೆಚ್ಚುವರಿ ಅನುದಾನ ನೀಡಿದ ರಾಜ್ಯ ಸರ್ಕಾರ. ಈ ಮೊದಲು 1 ಕೋಟಿ ರು. ಅನುದಾನ ನೀಡಿದ್ದ ರಾಜ್ಯ ಸರ್ಕಾರ. ಇದೀಗ, ಹೆಚ್ಚುವರಿಯಾಗಿ ಹಣ ಮಂಜೂರು.
ಬೆಂಗಳೂರು, ಜುಲೈ 20: ಹಂಪಿಯಲ್ಲಿ ಪಾಳುಬಿದ್ದಿರುವ ವಿಜಯ ನಗರ ಅರಸರ ಕಾಲದ ಹಿರೇಛತ್ರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 2.75 ಕೋಟಿ ರು. ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ.
ಈ ಹಿಂದೆ, ಛತ್ರದ ಅಭಿವೃದ್ಧಿಗಾಗಿ 1 ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಿತ್ತು. ಆದರೆ, ಅದು ಅಭಿವೃದ್ಧಿಗೆ ಸಾಕಾಗಲಿಲ್ಲವೆಂಬ ಕೂಗು ಕೇಳಿಬಂದಿದ್ದರಿಂದಾಗಿ, ಈಗ ಮತ್ತೆ ಅದಕ್ಕೆ ಹಣದ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ.
ವಿಜಯ ನಗರ ಅರಸರ ಕಾಲದಲ್ಲಿ ನಿರ್ಮಿತವಾಗಿದ್ದ ಈ ಛತ್ರವು ವಿಚಾರ ವಿನಿಮಯದ ವೇದಿಕೆಯಾಗಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿತ್ತೆಂದು ಇತಿಹಾಸಕಾರರು ಹೇಳಿದ್ದಾರೆ. ಸುಮಾರು 1 ಸಾವಿರ ಕಂಬಗಳನ್ನು ಹೊಂದಿರುವ, ವಿಶಾಲವಾಗಿರುವ ಈ ಛತ್ರವು ಹಂಪಿಯ ಪ್ರಮುಖ ದೇಗುಲವಾದ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿಯಲ್ಲೇ ಇದೆ.
ಹಂಪಿಯ ನಿಸರ್ಗ ಸೌಂದರ್ಯದ ಸೊಬಗನ್ನು ಕಣ್ತುಂಬಿಕೊಳ್ಳಿ
ಇಲ್ಲಿ, ಕವಿಗಳು, ಕಲಾವಿದರು, ಬುದ್ಧಿಜೀವಿಗಳು, ತರ್ಕ ಶಾಸ್ತ್ರ ಪಂಡಿತರು, ವೈದಿಕರು ತಂಗುತ್ತಿದ್ದರಲ್ಲದೆ, ಅವರ ನಡುವೆ ಸ್ವಾರಸ್ಯಕರವಾದ ಚರ್ಚೆಗಳು, ವಿಚಾರ ವಿನಿಮಯಗಳು ನಡೆಯುತ್ತಿದ್ದವು ಎಂದು ಹೇಳಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಪಾಳು ಬಿದ್ದ ಹಂಪೆಯನ್ನು ಉದ್ಧರಿಸಿ, ಅದನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲಾಗಿತ್ತಾದರೂ, ಈ ಹಿರೇಛತ್ರದ ಅಭಿವೃದ್ಧಿಯ ಬಗ್ಗೆ ತಾತ್ಸಾರ ವಹಿಸಲಾಗಿತ್ತು.
ಇದನ್ನು ಅನೇಕ ಇತಿಹಾಸಕಾರರು ಪದೇ ಪದೇ ಸರ್ಕಾರದ ಗಮನಕ್ಕೆ ತಂದ ನಂತರ, ಸರ್ಕಾರ ಇದರ ಪುನರುತ್ಥಾನಕ್ಕೆ ಆರ್ಥಿಕ ಸಹಕಾರ ನೀಡಿತ್ತು.