ಸಿಡಿಲು ಮುನ್ಸೂಚನೆಗೆ ರಾಜ್ಯ ಸರ್ಕಾರದಿಂದ ವಿನೂತನ ಆಪ್
ಬೆಂಗಳೂರು, ಮೇ 24: ಹವಾಮಾನದ ಸ್ಥಿತಿಗತಿಯ ಆಧಾರದ ಮೇಲೆ ಸಿಡಿಲಿನ ಮುನ್ಸೂಚನೆ ನೀಡಬಲ್ಲ ಹೊಸ ಆಪ್ ವೊಂದನ್ನು ಸಿದ್ಧಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ರಾಜ್ಯ ವಿಪತ್ತು ನಿರ್ವಹಣಾ ಉಸ್ತುವಾರಿ ತಂಡ ಸಿದ್ಧತೆ ನಡೆಸುತ್ತಿದ್ದು, 50 ಲಕ್ಷ ರೂ.ವೆಚ್ಚದಲ್ಲಿ ಆಪ್ ನಿರ್ಮಿಸಲು ಈಗಾಗಲೇ ಟೆಂಡರ್ ಕರೆಯಲು ತೀರ್ಮಾನಿಸಿದೆ.
ಈ ಆಪ್ ಮೂಲಕ 30 ಲಕ್ಷ ರೈತರಿಗೆ ಸಿಡಿಲು ಬಡಿವ ಸ್ಥಳದ ನಿಖರ ಮಾಹಿತಿಯನ್ನು ಏಕಕಾಲದಲ್ಲಿ ನೀಡಲಾಗುತ್ತದೆ. ಇದರಿಂದಾಗಿ ಅಪಾಯ ಸಂಭವಿಸುವ ಸ್ಥಳಗಳಿಂದ ರೈತರು ಬೇರೆಡೆಗೆ ತೆರಳಲು ಸಹಕಾರಿಯಾಗಲಿದೆ. ರಾಜ್ಯ ವಿಪತ್ತು ನಿರ್ವಹಣ ಮಂಡಳಿ (KSNDMC) ರೈತರ ಸಂಪರ್ಕ ಸಂಖ್ಯೆಗಳನ್ನು ಸಂಗ್ರಹಿಸಲಿದ್ದು, ಆ ಎಲ್ಲ ಸಂಖ್ಯೆಗೂ ಸಂದೇಶ ರೂಪದಲ್ಲಿ ಸಿಡಿಲು ಬಡಿವ ಮಾಹಿತಿಯನ್ನು ಕಳಿಸಲಿದೆ.[ಹಸಿರು ಬೆಂಗಳೂರಿಗಾಗಿ 'ಬಿಬಿಎಂಪಿ ಗ್ರೀನ್' ಆ್ಯಪ್, ನೀವೂ ಗಿಡ ನೆಡಿ]
ಪ್ರತಿವರ್ಷ ನಮ್ಮ ರಾಜ್ಯದಲ್ಲಿ ಸಿಡಿಲಿಗೆ ಬಲಿಯಾಗುವ ರೈತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ದುರಂತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ ಎಲ್ಲಾ ಪ್ರದೇಶಗಳನ್ನೂ ಆವರಿಸುವಂತೆ, ಆಯಾ ಪ್ರದೇಶದ ಹವಾಗುಣ ಸಂಗ್ರಹಿಸುವಂತೆ ಸೆನ್ಸಾರ್ ಅಳವಡಿಸಲಾಗುತ್ತದೆ. ಈ ಸೆನ್ಸಾರ್ ನಿಂದಾಗಿ ಗುಡುಗು-ಸಿಡಿಲಿನ ಮಾಹಿತಿ ಆಪ್ ನಲ್ಲಿ ಲಭಿಸಲಿದ್ದು, ಇದರಿಂದ ಸಾವಿರಾರು ರೈತರಿಗೆ ಅನುಕೂಲವಾಗಲಿದೆ.[ರಸ್ತೆ ಸಂಚಾರ ನಿಮಯ ಮೀರಿದರೆ ಭಾರೀ ದಂಡದ ಹೊರೆ]
ಸಿಡಿಲು ಬಡಿದು ರಾಜ್ಯದಲ್ಲಿ ಅಪಾರ ಸಾವುನೋವು ಸಂಭವಿಸುತ್ತಿದೆ. ಮೊದಲೇ ಮಾಹಿತಿ ದೊರೆತರೆ ಅಪಾಯ ತಡೆಯಬಹುದು. ಆದ್ದರಿಂದ ಸರ್ಕಾರ ಈ ಆಪ್ ಸಿದ್ಧಪಡಿಸಲು ನಿರ್ಧರಿಸಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿತಿಳಿಸಿದ್ದಾರೆ.